AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2024: ಪುರಾಣಗಳಲ್ಲಿನ ಈ ಗುರು-ಶಿಷ್ಯರ ಜೋಡಿ ನಿಜಕ್ಕೂ ಸ್ಫೂರ್ತಿ

Guru Purnima Special: ಗುರುವೇ ಸಾಕ್ಷಾತ್‌ ಪರಬ್ರಹ್ಮ ಎಂಬ ಮಾತಿದೆ. ಗುರುವಿಗೆ ತೋರುವ ಭಕ್ತಿ, ಗೌದವ ನಿಜಕ್ಕೂ ಒಬ್ಬ ವ್ಯಕ್ತಿಯನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಈ ಗುರುವಿನ ಆಶೀರ್ವಾದವೊಂದಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ನಮ್ಮ ಇತಿಹಾಸದಲ್ಲಿ ಹಲವಾರು ನಿದರ್ಶನಗಳಿವೆ. ಹೀಗೆ ಪುರಾಣಗಳಲ್ಲಿ ಉಲ್ಲೇಖವಿರುವ ಅತ್ಯುತ್ತಮ ಗುರು-ಶಿಷ್ಯರ ಜೋಡಿಗಳ ಬಗ್ಗೆ ಇಂದು ತಿಳಿಯೋಣ.

Guru Purnima 2024: ಪುರಾಣಗಳಲ್ಲಿನ ಈ ಗುರು-ಶಿಷ್ಯರ ಜೋಡಿ ನಿಜಕ್ಕೂ ಸ್ಫೂರ್ತಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 19, 2024 | 10:47 AM

Share

ಗುರು ಎಂಬುದು ಭೌತಿಕ ವಸ್ತುವಲ್ಲ. ಜ್ಞಾನ ಎಂಬ ಬೆಲೆಬಾಳುವ ಸಂಪತ್ತನ್ನು ಶಿಷ್ಯನಲ್ಲಿಗೆ ಪ್ರವಹಿಸುವಂತೆ ಮಾಡುವ ಶಕ್ತಿ. ಜ್ಞಾನವೇ ಇಲ್ಲದ ಒಂದು ಕಲ್ಲನ್ನು ಸುಂದರ ಶಿಲೆಯಾಗಿ ಪರಿವರ್ತಿಸುವಲ್ಲಿ ಗುರುಗಳ ಪಾತ್ರ ಮಹತ್ತರವಾದದ್ದು. ಗುರುಗಳ ಆಶೀರ್ವಾದದಿಂದ, ಗುರುಗಳು ಧಾರೆಯೆರೆದ ಜ್ಞಾನದಿಂದ ಜಗತ್ತನ್ನೇ ಗೆದ್ದವರ ಬಗ್ಗೆ ಪುರಾಣಗಳಲ್ಲಿ, ಇತಿಹಾಸಗಳಲ್ಲಿ ಹಲವಾರು ಉಲ್ಲೇಖಗಳಿವೆ. ಇದೀಗ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಮಗೆಲ್ಲರಿಗೂ ಸ್ಫೂರ್ತಿಯನ್ನು ನೀಡುವ ಪುರಾಣದ ಗುರು-ಶಿಷ್ಯ ಜೋಡಿಗಳ ಬಗ್ಗೆ ತಿಳಿಯೋಣ.

ಪ್ರಸಿದ್ಧ ಗುರು ಶಿಷ್ಯ ಜೋಡಿಗಳು

ಸಾಂದೀಪನಿ ಋಷಿ-ಶ್ರೀಕೃಷ್ಣ:

ಇಡೀ ವಿಶ್ವಕ್ಕೆ ಭಗವದ್ಗೀತೆಯನ್ನು ಭೋದಿಸಿದ ಶ್ರೀ ಕೃಷ್ಣನ ಗುರು ಸಾಂದೀಪನಿ ಮಹರ್ಷಿ. ಗೋಕುಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಗೋಪಾಲಕನಾಗಿದ್ದನ ಶ್ರೀ ಕೃಷ್ಣ ಮಥುರಾದಲ್ಲಿ ಕಂಸನನ್ನು ಕೊಂದ ನಂತರ ಶ್ರೀ ಕೃಷ್ಣ ವಿದ್ಯಾಭ್ಯಾಸಕ್ಕಾಗಿ ಬಲರಾಮನ ಜೊತೆಗೆ ಉಜ್ಜಯಿನಿಯ ಸಾಂದೀಪನಿ ಆಶ್ರಮಕ್ಕೆ ಬರುತ್ತಾನೆ. ಇಲ್ಲಿ ಕೃಷ್ಣನು ಸಾಂದೀಪನಿ ಮಹರ್ಷಿಯವರಿಂದ 64 ದಿನಗಳಲ್ಲಿ 64 ಜ್ಞಾನ ಮತ್ತು 16 ಕಲೆಗಳನ್ನು ಕಲಿತನು. ಮತ್ತು ಇಡೀ ವಿಶ್ವಕ್ಕೆ ಧರ್ಮದ ಭೋದನೆಯನ್ನು ಮಾಡಿದನು. ಈ ಗುರು ಶಿಷ್ಯರ ಜೋಡಿ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ವಶಿಷ್ಠ ಮುನಿ – ಶ್ರೀರಾಮ:

ಗುರು ವಶಿಷ್ಠರು ದಶರಥ ಮಹರಾಜನ ನಾಲ್ವರು ಮಕ್ಕಳಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರಿಗೆ ವಿದ್ಯಾಭ್ಯಾಸವನ್ನು ಕಲಿಸಿದವರು. ಇವರಿಂದ ರಾಮನು ವೇದಗಳು ಸೇರಿದಂತೆ ಅನೇಕ ವಿದ್ಯೆಗಳನ್ನು ಕಲಿತನು. ಇನ್ನೂ ರಾಮಾಯಣದಲ್ಲಿ ರಾಮ-ರಾವಣನ ನಡುವೆ ನಡೆದ ಯುದ್ಧದ ಪ್ರಸಂಗ ಬಂದಾಗ, ರಾಮನ ಬಿಲ್ವಿದ್ಯೆ ಕೌಶಲ್ಯವನ್ನು ಸಹ ಉಲ್ಲೇಖಿಸಲಾಗುತ್ತದೆ. ಈ ಬಿಲ್ವಿದ್ಯೆಯ ಜ್ಞಾನವನ್ನು ಮತ್ತು ಬಿಲ್ಲನ್ನು ರಾಮನಿಗೆ ನೀಡಿದರು ವಶಿಷ್ಠ ಮುನಿಗಳು. ಈ ಅದ್ಭುತ ಗುರು-ಶಿಷ್ಯ ಜೋಡಿಯನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ.

ದ್ರೋಣಾಚಾರ್ಯ – ಅರ್ಜುನ:

ಪಾಂಡವ ಮತ್ತು ಕೌರವ ರಾಜಕುಮಾರರಿಗೆ ಯುದ್ಧ ಕಲೆಗಳನ್ನು ಕಲಿಸಿದ ಗುರು ದ್ರೋಣಾಚಾರ್ಯ. ಅರ್ಜುನನು ಅವರ ನೆಚ್ಚಿನ ವಿದ್ಯಾರ್ಥಿಯಾಗಿದ್ದು, ಅವರ ಸ್ವಂತ ಮಗ ಅಶ್ವಥಾಮನಿಗಿಂತ ಅರ್ಜುನನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅರ್ಜುನ ತನ್ನ ಗುರು ದ್ರೋಣಾಚಾರ್ಯರಿಂದ ಅಗಾಧ ಪಾಂಡಿತ್ಯ ಮತ್ತು ಬಿಲ್ವಿದ್ಯೆಯನ್ನು ಕಲಿತು ಶ್ರೇಷ್ಠ ಬಿಲ್ಲುಗಾರನಾಗುತ್ತಾನೆ. ಈ ಇಬ್ಬರನ್ನು ಪ್ರಪಂಚದ ಅದ್ಭುತ ಗುರು-ಶಿಷ್ಯ ಜೋಡಿ ಅಂತಾನೇ ಹೇಳಬಹುದು. ಇಂದು ಭಾರತ ಸರ್ಕಾರವು ದೇಶದ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುಗಳ ವಿಶೇಷ ಸಾಧನೆಗಾಗಿ ಆಟಗಾರರಿಗೆ ಅರ್ಜುನ ಮತ್ತು ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುತ್ತದೆ.

ಇದನ್ನೂ ಓದಿ: ಗುರುವಿನ ಬಗೆಗೆ ಮಹಾನ್ ವ್ಯಕ್ತಿಗಳ ನುಡಿಮುತ್ತುಗಳಿವು

ಚಾಣಕ್ಯ – ಚಂದ್ರಗುಪ್ತ ಮೌರ್ಯ:

ಆಚಾರ್ಯ ಚಾಣಕ್ಯ ಮೌರ್ಯ ರಾಜವಂಶದ ರಾಜಕೀಯ ಗುರು. ಮಗಧದ ಸಾಮ್ರಾಟ ಧನನಂದ ಮಾಡಿದ ಅವಮಾನಕ್ಕೆ ಪ್ರತಿಯಾಗಿ ಆತನ ಸಾಮ್ರಜ್ಯವನ್ನೇ ನಾಶ ಮಾಡುತ್ತೇನೆ ಎಂದು ಪಣ ತೊಟ್ಟ ತನ್ನ ಶಿಷ್ಯನಾದ ಚಂದ್ರಗುಪ್ತ ಮೌರ್ಯನಿಗೆ ಅಗಾಧ ಜ್ಞಾನವನ್ನು, ಸಕಲ ವಿದ್ಯೆಗಳನ್ನು ಧಾರೆಯೆರೆದು ನಂದ ವಂಶದ ಮೇಲೆ ದ್ವೇಶ ತೀರಿಸಿಕೊಂಡು ಮೌರ್ಯ ವಂಶದ ಉಗಮಕ್ಕೆ ಕಾರಣರಾದರು. ನಂತರ ಚಂದ್ರಗುಪ್ತ ಮತ್ತು ಚಾಣಕ್ಯ ಅಖಂಡ ಭಾರತವನ್ನು ಸ್ಥಾಪಿಸಿದರು. ಈ ಗುರು-ಶಿಷ್ಯರ ಜೋಡಿಯಿಂದ ಅಗಾಧ ಜೀವನ ಪಾಠವನ್ನು ನಾವು ಕಲಿಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ