
ಪ್ರತಿಯೊಬ್ಬರೂ ತಾನು ಜೀವನದಲ್ಲಿ ಯಶಸ್ಸು (Success) ಗಳಿಸಬೇಕು, ಶ್ರೀಮಂತನಾಗಬೇಕು, ಯಾವುದೇ ಕುಂದು ಕೊರತೆಯಿಲ್ಲದೆ ನೆಮ್ಮದಿಯಿಂದ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾರೆ. ಮಾನವನ ಜೀವನಕ್ಕೆ ಸಂಬಂಧಿಸಿದ ಈ ಯಶಸ್ಸಿನ ರಹಸ್ಯಗಳನ್ನು ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಯಶಸ್ಸನ್ನು ಗಳಿಸಲು ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಹೇಳಿರುವಂತೆ ಆಚಾರ್ಯ ಚಾಣಕ್ಯರು ಯಾವ ಅಭ್ಯಾಸಗಳು ವ್ಯಕ್ತಿಯನ್ನು ಬಡತನಕ್ಕೆ ನೂಕುತ್ತವೆ ಎಂಬುದನ್ನು ಸಹ ಹೇಳಿದ್ದಾರೆ. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ವ್ಯಕ್ತಿಯ ಬಹುದೊಡ್ಡ ಶತ್ರುವಾಗಿರುವ ಆ ಕೆಟ್ಟ ಅಭ್ಯಾಸಗಳು ಯಾವುದೆಂಬುದನ್ನು ನೋಡೋಣ ಬನ್ನಿ.
ಕೊಳಕುತನ: ಕೊಳಕುತನದಿಂದ ಬದುಕುವವರು ಯಾವಾಗಲೂ ಬಡವರಾಗಿಯೇ ಉಳಿಯುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯರ ಪ್ರಕಾರ ಯಾರು ಕೊಳಕಾಗಿರುತ್ತಾರೋ, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದಿಲ್ಲವೋ ಅಥವಾ ತಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ ಅಂತಹ ಜನರಿಗೆ ಲಕ್ಷ್ಮೀ ದೇವಿ ಒಲಿಯುವುದಿಲ್ಲ. ಅಂತಹ ಜನರು ಯಾವಾಗಲೂ ಬಡತನದ ಜೀವನವನ್ನು ನಡೆಸುತ್ತಾರೆ. ಮತ್ತು ಅವರು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಜನರು ಈ ಅಭ್ಯಾಸವನ್ನು ತಕ್ಷಣವೇ ತ್ಯಜಿಸಬೇಕು ಇಲ್ಲದಿದ್ದರೆ ಅವರ ಅವನತಿ ಖಚಿತ ಎನ್ನುತ್ತಾರೆ ಚಾಣಕ್ಯರು.
ಅತಿಯಾಗಿ ಖರ್ಚು ಮಾಡುವವರು: ತಮ್ಮ ಖರ್ಚಿನ ಮೇಲೆ ನಿಯಂತ್ರಣವಿಲ್ಲದ ಜನರು ಬೇಗನೆ ಬಡವರಾಗುತ್ತಾರೆ. ಯಾರು ತಮ್ಮ ಆದಾಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೋ ಅಂತಹ ಜನರು ಒಂದಲ್ಲ ಒಂದು ದಿನ ಬಡವರಾಗುವುದು ಖಚಿತ ಎಂದು ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಖರ್ಚು ಮಾಡುವುದು ಉತ್ತಮ.
ಇದನ್ನೂ ಓದಿ: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವವರು ಎಂದಿಗೂ ಈ ಎರಡು ವಿಷಯಗಳಿಗೆ ಹೆದರಬಾರದು
ಮುಸ್ಸಂಜೆಯ ಹೊತ್ತು ಮಲಗುವ ಅಭ್ಯಾಸ: ಸೂರ್ಯಾಸ್ತದ ಸಮಯವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಮಲಗುವವರು ಬಡವರಾಗಿ ಉಳಿಯುತ್ತಾರಂತೆ. ಈ ಸಮಯವು ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯ ಮತ್ತು ಈ ಸಮಯದಲ್ಲಿ ಮಲಗುವವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಎಂದಿಗೂ ಸಿಗುವುದಿಲ್ಲ ಮತ್ತು ಅವರು ತಮ್ಮ ಜೀವನದುದ್ದಕ್ಕೂ ಬಡವರಾಗಿರುತ್ತಾರೆ ಎಂದು ಅವರು ಹೇಳುತ್ತಾರೆ.
ಸೋಮಾರಿತನ: ಮನುಷ್ಯನ ದೊಡ್ಡ ಶತ್ರು ಸೋಮಾರಿತನ. ಸ್ವಭಾವತಃ ಸೋಮಾರಿಯಾಗಿರುವ ಜನರು ಭೂಮಿಗೆ ಭಾರ ಎಂದು ಚಾಣಕ್ಯರು ಹೇಳುತ್ತಾರೆ. ಸೋಮಾರಿಯಾಗಿರುವ ಜನರು ತಮ್ಮ ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಸೋಮಾರಿತನವನ್ನು ಬಿಟ್ಟುಬಿಡಬೇಕು. ಸೋಮಾರಿತನವನ್ನು ಬಿಟ್ಟು ಬಿಟ್ಟರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ