Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಈ ಪ್ರಶ್ನೆಗಳನ್ನು ಕೇಳಲೇಬೇಕು

ಸಂಬಂಧಿಕರು, ಸ್ನೇಹಿತರು ಆರ್ಥಿಕ ಸಹಾಯ ಅಥವಾ ಸಾಲವನ್ನು ಕೇಳುತ್ತಲೇ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನೇಕರು ಹಿಂದು ಮುಂದು ನೋಡದೆ ಹಣ ಕೊಟ್ಟುಬಿಡುತ್ತಾರೆ, ಕೊನೆಗೆ ತಾವು ಸಾಲವಾಗಿ ನೀಡಿದ ಹಣ ವಾಪಾಸ್‌ ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿ ನಿಮಗೆ ಎದುರಾಗಬಾರದೆಂದರೆ, ನಿಮ್ಮ ಹತ್ತಿರದವರಿಗೆ ಸಾಲ ನೀಡುವ ಮೊದಲು ಈ ಪ್ರಶ್ನೆಗಳನ್ನು ಅವರ ಬಳಿ ಕೇಳಲೇಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು  ಈ ಪ್ರಶ್ನೆಗಳನ್ನು ಕೇಳಲೇಬೇಕು
ಚಾಣಕ್ಯ ನೀತಿ
Image Credit source: Pinterest

Updated on: Feb 02, 2026 | 6:24 PM

ಇಂದಿನ ಕಾಲದಲ್ಲಿ, ಹಣ ಸಂಪಾದಿಸುವುದು ಎಷ್ಟು ಕಷ್ಟಕರವೋ, ಅದನ್ನು ಉಳಿಸುವುದು ಮತ್ತು ಬುದ್ಧಿವಂತಿಕೆಯಿಂದ ಬಳಸುವುದು ಇನ್ನೂ ಹೆಚ್ಚು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಣದ (money) ವಿಚಾರವಾಗಿ ತುಂಬಾನೇ ಜಾಗರೂಕರಾಗಿರಬೇಕು. ಅದರಲ್ಲೂ ನಿಮ್ಮ ಫ್ರೆಂಡ್ಸ್‌ ಮತ್ತು ಸಂಬಂಧಿಕರು ಆರ್ಥಿಕ ಸಹಾಯವನ್ನು ಕೇಳಿದಾಗ, ನೀವು ವೃತ್ತಿಪರವಾಗಿ ನಡೆದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಹಣಕಾಸಿನ ವಹಿವಾಟುಗಳ ಕುರಿತು ಸ್ಪಷ್ಟ ಮತ್ತು ಕಠಿಣ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಹತ್ತಿರದವರಿಗೆ ಸಾಲ ನೀಡುವ ಮೊದಲು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂಬುದು ಕೂಡ ಒಂದು.  ಈ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಹಣ ಮಾತ್ರವಲ್ಲದೆ ಸಂಬಂಧವೂ ಸುರಕ್ಷಿತವಾಗಿರುತ್ತದೆ. ಹಾಗಿದ್ರೆ ಆ ಪ್ರಶ್ನೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹತ್ತಿರದವರಿಗೆ ಸಾಲ ನೀಡುವ ಮುನ್ನ ನೀವು ಕೇಳಬೇಕಾದ ಪ್ರಶ್ನೆಗಳಿವು:

ಹಣದ ಅವಶ್ಯಕತೆಗೆ ನಿಜವಾದ ಕಾರಣವೇನು? (ಸಾಲದ ಉದ್ದೇಶ)

ಸಂಬಂಧಿಕರು ನಿಮ್ಮಿಂದ ಹಣ ಕೇಳಿದರೆ, ನೀವು ಮೊದಲು ಕೇಳಬೇಕಾದ ಪ್ರಶ್ನೆ ಸಾಲ ಕೇಳಿದ ಉದ್ದೇಶ ಏನು ಎಂಬುದು. ಅನಾರೋಗ್ಯ, ಶಿಕ್ಷಣ ಬಹಳ ಮುಖ್ಯವಾದ ಕಾರಣಕ್ಕಾಗಿ ಹಣದ ಅಗತ್ಯವಿದ್ದಾಗ ಸಾಲ ಕೇಳಿದರೆ, ಅಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಧರ್ಮ ಎಂದು ಚಾಣಕ್ಯ ಹೇಳುತ್ತಾರೆ. ಅದೇ ಯಾರಾದರೂ ತಮ್ಮ ಸ್ವಂತ ಸೌಕರ್ಯಗಳಿಗಾಗಿ, ದುಂದುವೆಚ್ಚ, ಶೋಕಿಗಾಗಿ ಹಣವನ್ನು ಸಾಲ ಕೇಳಿದರೆ, ಅಂತಹವರಿಗೆ ಹಣ ನೀಡುವ ಮುನ್ನ ಜಾಗರೂಕರಾಗಿರಬೇಕು. ಇಂತಹ ವ್ಯಕ್ತಿಗಳಿಗೆ  ಹಣವನ್ನು ಸಾಲವಾಗಿ ನೀಡುವುದು ನಿಮ್ಮ ಸ್ವಂತ ಹಣವನ್ನು ಸುಟ್ಟುಹಾಕಿದಂತೆ ಎಂದು ಚಾಣಕ್ಯರು ಹೇಳಿದ್ದಾರೆ.

ಹಣ ಯಾವಾಗ ವಾಪಾಸ್‌ ನೀಡುತ್ತೀರಿ?

ಇದು ಸ್ವಲ್ಪ ಕಠಿಣವಾಗಿ ಕಂಡರೂ ನೀವು ಈ ಪ್ರಶ್ನೆಯನ್ನು ಕೇಳಲೇಬೇಕು. ಯಾರಿಗಾದರೂ ಸಾಲ ನೀಡುತ್ತೀರಿ ಎಂದಾದರೆ ಅವರು ಯಾವ ಮೂಲದಿಂದ ಮತ್ತು ಯಾವಾಗ ಹಣವನ್ನು ಹಿಂದಿರುಗಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಬೇಕು. ಸಾಲ ಮರುಪಾವತಿಗೆ ಗಡುವನ್ನು ನಿಗದಿಪಡಿಸಲೇಬೇಕು.   ಸ್ಪಷ್ಟ ಯೋಜನೆ ಇಲ್ಲದೆ ಸಾಲ ನೀಡುವುದರಿಂದ ಭವಿಷ್ಯದಲ್ಲಿ ನಿಮಗೆ ತೊಂದರೆ ಉಂಟಾಗಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ವಹಿವಾಟನ್ನು ನಾವು ಲಿಖಿತವಾಗಿ ದಾಖಲಿಸಬಹುದೇ?

ಇಂದಿನ ಕಾಲದಲ್ಲಿ ಯಾರನ್ನೂ ಸಹ ಕುರುಡಾಗಿ ನಂಬಬಾರದು. ಅದರಲ್ಲೂ ಸಾಲ ಕೊಡುವ ಮುನ್ನ ಲಿಖಿತ ಪುರಾವೆ ಬಹಳ ಮುಖ್ಯ . ಅದು ನಿಮ್ಮ ಸ್ವಂತ ಸಹೋದರನಾಗಿದ್ದರೂ ಸಹ, ದೊಡ್ಡ ವಹಿವಾಟುಗಳು ಯಾವಾಗಲೂ ಲಿಖಿತ ದಾಖಲೆಗಳೊಂದಿಗೆ ಇರಲೇಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇದು ನಿಮಗಾಗುವ ಮೋಸವನ್ನು ತಪ್ಪಿಸಲು, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು  ರಕ್ಷಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!

 ಇದು ನನ್ನ ಸ್ವಂತ ಆರ್ಥಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಈ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು. ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ಮಾತ್ರ ಇತರರಿಗೆ ಸಾಕ ನೀಡಿ. ನಿಮ್ಮ ತುರ್ತು ನಿಧಿಯನ್ನು ಎಂದಿಗೂ ಇತರರಿಗೆ ಸಾಲವಾಗಿ ನೀಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಅಗತ್ಯಕ್ಕಾಗಿ ಕೂಡಿಟ್ಟ ಹಣವನ್ನು ಇನ್ನೊಬ್ಬರಿಗೆ ನೀಡುವುದು ದೊಡ್ಡ ಮೂರ್ಖತನ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ