
ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನವು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದ್ದು, ಈ ಎರಡೂ ಆರೋಗ್ಯವು ಉತ್ತಮವಾಗಿದ್ದಾಗ, ವ್ಯಕ್ತಿಯು ಉತ್ತಮ, ಸಕಾರಾತ್ಮಕ ಜೀವನವನ್ನು ನಡೆಸಲು ಸಾಧ್ಯ. ಅಲ್ಲದೆ, ಮಾನಸಿಕ ಶಾಂತಿ ಮತ್ತು ದೈಹಿಕ ಸದೃಢತೆಯು ಒತ್ತಡವನ್ನು ಕಡಿಮೆ ಮಾಡಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಈ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಪ್ರತಿ ವರ್ಷ ಜನವರಿ 03 ರಂದು ಅಂತಾರಾಷ್ಟ್ರೀಯ ಮನಸ್ಸು ದೇಹದ ಸ್ವಾಸ್ಥ್ಯ (Mind-Body Wellness) ದಿನವನ್ನು ಆಚರಿಸಲಾಗುತ್ತದೆ.
ಜನವರಿ 3 ರಂದು ಅಂತರರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನವನ್ನು ಆಚರಿಸಲಾಗುತ್ತದೆ, ಈ ದಿನವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತೇಜಿಸಲು ಮೀಸಲಾಗಿದೆ. 2019 ರಲ್ಲಿ ಆರಂಭವಾದ ಈ ದಿನವು ಜನರನ್ನು ಸಮತೋಲಿತ ಜೀವನಶೈಲಿಯತ್ತ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ.
ಪ್ರತಿದಿನ ವ್ಯಾಯಾಮ ಮಾಡಿ: ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ನಿಯಮಿತ ವ್ಯಾಯಾಮವು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ, ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ, ಸ್ನಾಯುಗಳ ಆರೋಗ್ಯವನ್ನು ಸುಧಾರಿಸುತ್ತದೆ. ವಾಸ್ತವವಾಗಿ, ವ್ಯಾಯಾಮವು ದೇಹದಲ್ಲಿ ಎಂಡಾರ್ಫಿನ್ಗಳನ್ನು (ಸಂತೋಷದ ಹಾರ್ಮೋನುಗಳು) ಹೆಚ್ಚಿಸುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 30 ನಿಮಿಷಗಳ ವ್ಯಾಯಾಮ ಮಾಡಬೇಕು.ನೃತ್ಯ, ಈಜು, ವಾಕಿಂಗ್ ಈ ರೀತಿಯ ಯಾವುದೇ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿ.
ಚೆನ್ನಾಗಿ ನಿದ್ದೆ ಮಾಡಿ: ನಿದ್ರೆ ಮಾನಸಿಕ ಶಾಂತಿಯನ್ನು ನೀಡುವುದಲ್ಲದೆ ನಿಮ್ಮ ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಅಲ್ಲದೆ ಒತ್ತಡಮುಕ್ತ ಜೀವನವನ್ನು ನಡೆಸಬಹುದು.
ಇದನ್ನೂ ಓದಿ: ವಸುದೈವ ಕುಟುಂಬಕಂ; ಜಾಗತಿಕ ಕುಟುಂಬ ದಿನದ ಆಚರಣೆಯ ಬಗ್ಗೆ ತಿಳಿಯಿರಿ
ಆರೋಗ್ಯಕರ ಆಹಾರ ಸೇವನೆ: ನೀವು ಏನು ತಿನ್ನುತ್ತೀರೋ ಅದು ನಿಮ್ಮ ಮನಸ್ಸಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದರರ್ಥ ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಜಂಕ್, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸರಿಯಾದ ಪೋಷಕಾಂಶ ದೊರೆಯುವುದಿಲ್ಲ. ಈ ಪೋಷಕಾಂಶಗಳ ಕೊರತೆಯು ದಿನವಿಡೀ ಆಯಾಸ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು. ಪ್ರೋಟೀನ್, ಜೀವಸತ್ವಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಫಿಟ್ ಆಗಿರುವುದಲ್ಲದೆ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿರಿಸುತ್ತದೆ.
ಧ್ಯಾನ ಮಾಡಿ: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಧ್ಯಾನವು ಒಂದು ಮಾರ್ಗವಾಗಿದೆ. ಹೌದು ಧ್ಯಾನವು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಪರಿಹಾರವನ್ನು ನೀಡುವುದಲ್ಲದೆ, ಯಾವುದೇ ರೀತಿಯ ವ್ಯಸನಗಳನ್ನು ನಿವಾರಿಸುವಲ್ಲಿಯೂ ಪ್ರಯೋಜನಕಾರಿ. ಹಾಗಾಗಿ ಬೆಳಗ್ಗಿ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ.
ನಿಮಗಾಗಿ ಸಮಯ ಮೀಸಲಿಡಿ: ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿ ಮತ್ತು ಸಂತೋಷವಾಗಿಡಲು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಪ್ರಯಾಣ, ನೃತ್ಯ, ಸಂಗೀತ ಅಥವಾ ಯಾವುದೇ ನಿಮ್ಮ ಇಷ್ಟದ ಕೆಲಸಗಳನ್ನು ಮಾಡಿ, ಇದು ಒತ್ತಡವನ್ನು ನಿವಾರಿಸಿ ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇನ್ನೊಂದೇನೆಂದರೆ ಯಾವಾಗಲೂ ಸಕಾರಾತ್ಮಕವಾಗಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ