ಈ ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?

ಬಹುತೇಕ ಎಲ್ಲರೂ ಸಹ ತಾವು ಮಾರುಕಟ್ಟೆಯಿಂದ ತಂದಂತಹ ಎಲ್ಲಾ ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡುತ್ತಾರೆ, ಅದೇ ರೀತಿ ಎಲ್ಲಾ ಹಣ್ಣುಗಳನ್ನು ಸಹ ಒಟ್ಟಿಗೆ ಸ್ಟೋರ್‌ ಮಾಡುತ್ತಾರೆ. ಹೀಗೆ ಕೆಲವೊಂದಿಷ್ಟು ಹಣ್ಣು ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡುವುದರಿಂದ ಅವು ಬೇಗನೇ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಯಾವೆಲ್ಲಾ ಹಣ್ಣು ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಬಾರದು ಎಂಬುದನ್ನು ತಪ್ಪದೆ ತಿಳಿಯಿರಿ.

ಈ ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Mar 22, 2026 | 3:37 PM

ಬಹುತೇಕ ಹೆಚ್ಚಿನವರು ಮಾರುಕಟ್ಟೆಯಿಂದ ತಂದಂತಹ ಹಣ್ಣು ತರಕಾರಿಗಳನ್ನು ಸ್ವಚ್ಛಗೊಳಿಸಿ ಹಣ್ಣುಗಳನ್ನೆಲ್ಲಾ ಒಟ್ಟಿಗೆ ತರಕಾರಿಗಳನ್ನೆಲ್ಲಾ ಒಟ್ಟಿಗೆ ಸಂಗ್ರಹಿಸಿಡುತ್ತಾರೆ (storage). ಈ ರೀತಿ ಒಟ್ಟಿಗೆ ಸಂಗ್ರಹಿಸಿಟ್ಟಾಗ ಕೆಲವೊಂದು ಹಣ್ಣು ತರಕಾರಿಗಳು ಬೇಗನೇ ಕೊಳೆತು ಬಿಡುತ್ತವೆ. ಇದನ್ನು ನೀವು ಕೂಡ ಗಮನಿಸಿರಬಹುದಲ್ವಾ. ಕೆಲವು ಹಣ್ಣು, ತರಕಾರಿಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಪಕ್ಕದಲ್ಲಿರು ತರಕಾರಿಗಳು ಮತ್ತು ಹಣ್ಣುಗಳ ಹಣ್ಣಾಗುವಿಕೆ ಅಥವಾ ಕೊಳೆಯುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದಾಗಿ ತರಕಾರಿಗಳು ಬೇಗನೇ ಕೊಳೆತು ಹೋಗುತ್ತವೆ. ಇದಲ್ಲದೆ ಕೆಲವು ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸುವುದರಿಂದ ಅವುಗಳ ರುಚಿ ಮತ್ತು ಪೌಷ್ಟಿಕಾಂಶ ಮೌಲ್ಯವೂ ಕಳೆದು ಹೋಗುತ್ತದೆ. ಹಾಗಿದ್ರೆ ಯಾವೆಲ್ಲಾ ಹಣ್ಣು-ತರಕಾರಿಗಳನ್ನು ಒಟ್ಟಿಗೆ ಸ್ಟೋರ್‌ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಬಾರದು?

ಸೇಬುಗಳು ಮತ್ತು ಹಸಿರು ತರಕಾರಿಗಳು: ಸೇಬುಗಳು ಎಥಿಲೀನ್ ಅನಿಲವನ್ನು ಉತ್ಪಾದಿಸುವ ಹಣ್ಣು.  ಇದನ್ನು ಎಲೆಕೋಸು, ಪಾಲಕ್ ಅಥವಾ ಬ್ರೊಕೊಲಿಯಂತಹ ಹಸಿರು ತರಕಾರಿಗಳೊಂದಿಗೆ ಸಂಗ್ರಹಿಸಿದರೆ, ಅವು ಬೇಗನೆ ಹಳದಿ ಬಣ್ಣಕ್ಕೆ ತಿರುಗಬಹುದು ಮತ್ತು ಅವುಗಳ ರುಚಿ ಬದಲಾಗಬಹುದು. ಅಲ್ಲದೆ ಈ ಹಸಿರು ತರಕಾರಿಗಳ ಪೌಷ್ಟಿಕಾಂಶ ಮೌಲ್ಯವೂ ಕಳೆದು ಹೋಗಬಹುದು.

ಬಾಳೆಹಣ್ಣುಗಳು ಮತ್ತು ಇತರ  ಸೂಕ್ಷ್ಮ ಹಣ್ಣುಗಳು: ಬಾಳೆಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ನೀವು ಮಾವಿನಹಣ್ಣು, ಪಪ್ಪಾಯಿ, ಸ್ಟ್ರಾಬೆರಿ, ಬೆರ್ರಿ ಹಣ್ಣು, ರಾಸ್ಪ್ಬೆರಿ, ದ್ರಾಕ್ಷಿ ಅಥವಾ ಪೇರಳೆಯೊಂದಿಗೆ ಬಾಳೆಹಣ್ಣನ್ನು ಸಂಗ್ರಹಿಸಿದರೆ, ಆ ಹಣ್ಣುಗಳು ಬೇಗನೆ ಹಣ್ಣಾಗಬಹುದು ಮತ್ತು ಕೊಳೆಯಬಹುದು. ಆದ್ದರಿಂದ, ಈ ಹಣ್ಣುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಉತ್ತಮ.

ಬ್ರೊಕೊಲಿ ಮತ್ತು ಟೊಮ್ಯಾಟೊ: ಬ್ರೊಕೊಲಿ ಮತ್ತು ಟೊಮೆಟೊಗಳನ್ನು ಒಟ್ಟಿಗೆ ಸಂಗ್ರಹಿಸಬಾರದು. ಏಕೆಂದರೆ ಟೊಮ್ಯಾಟೊದಲ್ಲಿರುವ ಎಥಿಲೀನ್‌ ಅನಿಲದ ಕಾರಣದಿಂದಾಗಿ ಬ್ರೊಕೊಲಿ ಬೇಗನೆ ಹಳದಿ ಬಣ್ಣಕ್ಕೆ ತಿರುಗಬಹುದು ಮತ್ತು ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ.

ಆಲೂಗಡ್ಡೆ ಮತ್ತು ಈರುಳ್ಳಿ: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಸಂಗ್ರಹಿಸಿಡುತ್ತಾರೆ. ಹೀಗೆ ಈರುಳ್ಳಿ, ಆಲೂಗಡ್ಡೆಯನ್ನು ಜೊತೆಯಾಗಿ ಸಂಗ್ರಹಿಸಬಾರದು. ಏಕೆಂದರೆ ಈರುಳ್ಳಿಯಿಂದ ಹೊರಸೂಸುವ ತೇವಾಂಶ ಮತ್ತು ಎಥಿಲೀನ್ ಅನಿಲಗಳು ಆಲೂಗಡ್ಡೆ ಮೊಳಕೆಯೊಡೆಯಲು ಮತ್ತು ಬೇಗನೆ ಕೊಳೆಯಲು ಕಾರಣವಾಗುತ್ತವೆ.

ಇದನ್ನೂ ಓದಿ: ಪ್ರತಿದಿನ ದಾಳಿಂಬೆ ಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು ಗೊತ್ತಾ?

ಟೊಮೆಟೊ ಮತ್ತು ಸೌತೆಕಾಯಿ: ಟೊಮೆಟೊಗಳು ಸಹ ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಹೀಗಿರುವಾಗ ಸೌತೆಕಾಯಿಯನ್ನು ಒಟ್ಟಿಗೆ ಸಂಗ್ರಹಿಸಿದಾಗ, ಸೌತೆಕಾಯಿ ಬೇಗನೆ ಮೃದು ಮತ್ತು ನೀರಿನಂಶವನ್ನು ಹೊಂದಬಹುದು, ಇದರಿಂದಾಗಿ ಸೌತೆಕಾಯಿಯ ರುಚಿಯನ್ನು ಕಳೆದುಹೋಗಲು ಕಾರಣವಾಗಬಹುದು.

ಸೇಬುಗಳು ಮತ್ತು ಕ್ಯಾರೆಟ್: ಸೇಬುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಕ್ಯಾರೆಟ್‌ ಬೇಗನೆ ಮಾಗಲು ಮತ್ತು ಹಾಳಾಗಲು ಕಾರಣವಾಗಬಹುದು. ಆದ್ದರಿಂದ, ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಿ.

ಈ ರೀತಿ ಶೇಖರಣೆಯಲ್ಲಿ ಸ್ವಲ್ಪ ಕಾಳಜಿ ವಹಿಸುವುದರಿಂದ  ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಕಾಲ ತಾಜಾವಾಗಿರಿಸಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us