ನರೇಂದ್ರ ಮೋದಿ
ದೇಶದ ಕಂಡ ಅತ್ಯುತ್ತಮ ನಾಯಕ, ಪ್ರಧಾನಿ ಮೋದಿಯವರ ಅವರ ಅವಿರತ ಶ್ರಮದಿಂದಾಗಿ ಭಾರತವು ಅಭಿವೃದ್ಧಿಯತ್ತ ಸಾಗುತ್ತಿದೆ. ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ಆರೋಗ್ಯ ಸೇರಿದಂತೆ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ಸುರಕ್ಷಿತ ಭಾರತವನ್ನು ನಿರ್ಮಿಸುವಲ್ಲಿ ಯಶಸ್ಸನ್ನು ಸಾಧಿಸಿದೆ. ಇದೀಗ 2024 ಕ್ಕೆ ವಿದಾಯ ಹೇಳುವ ಸಮಯ ಬಂದಾಗಿದ್ದು, ಈ ವರ್ಷ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಭಾರತದ ಅಭಿವೃದ್ಧಿಯತ್ತ ಸಾಗಲು ಏನೆಲ್ಲಾ ಯೋಜನೆಗಳನ್ನು ರೂಪಿಸಿದೆ ಹಾಗೂ ಮಹತ್ವ ನಿರ್ಧಾರಗಳನ್ನು ಕೈಗೊಂಡಿದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.
- ಹಲವಾರು ವರ್ಷಗಳಿಂದ ಬಗೆಹರಿಯದೇ ಉಳಿದಿದ್ದ ಅಯೋಧ್ಯೆ ವಿವಾದಕ್ಕೆ ಮೋದಿ ಸರ್ಕಾರವು ತೆರೆ ಎಳೆದು, ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರದ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ. 2024 ರ ಜನವರಿ 22 ರಂದು ಶತಮಾನಗಳ ಬೇಡಿಕೆ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೊಂಡಿದೆ.
- 2024 ರ ಜೂನ್ 9 ರಂದು ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರು. ಮೋದಿಯವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
- 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾ ಮತ್ತು ಡೊಮಿನಿಕನ್ ಗಣರಾಜ್ಯಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ ಬೆಂಬಲ ಮತ್ತು ಭಾರತ-ಡೊಮಿನಿಕಾ ಸಂಬಂಧಗಳನ್ನು ಬಲಪಡಿಸುವ ಅವರ ಪ್ರಯತ್ನಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಪ್ರಶಸ್ತಿಗಳನ್ನು ನೀಡಲಾಗಿದೆ. ಗಯಾನಾ ದೇಶ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿದರೆ, ಡೊಮಿನಿಕ್ ಗಣರಾಜ್ಯ “ಡೊಮಿನಿಕ್ ಅವಾರ್ಡ್ ಆಫ್ ಆನರ್’ ನೀಡಿ ಗೌರವಿಸಿದೆ.
- ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಷ್ಯಾ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ತಂದು ಕೊಟ್ಟಿದ್ದಾರೆ. ಮಾತುಕತೆಯ ವೇಳೆ ರಷ್ಯಾ ಸೇನೆಯಲ್ಲಿದ್ದ ಭಾರತೀಯ ಯೋಧರನ್ನು ಬಿಡುಗಡೆಗೊಳಿಸಲು ರಷ್ಯಾ ಒಪ್ಪಿಗೆ ಸೂಚಿಸಿತು.
- ರಸ್ತೆ, ರೈಲ್ವೆ, ಬಂದರುಗಳು ಮತ್ತು ವಾಯುಮಾರ್ಗಗಳ ಮೇಲೆ 3 ಲಕ್ಷ ಕೋಟಿ ರೂ. ಗಳ ಯೋಜನೆಗಳಿಗೆ ಪ್ರಧಾನಿ ಮೋದಿ ಅನುಮೋದನೆ ನೀಡಿದರು. 900 ಕಿ.ಮೀ. ವ್ಯಾಪಿಸಿರುವ 8 ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆ ಇದಾಗಿದೆ.
- ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ, 7 ಲಕ್ಷದವರೆಗಿನ ವಾರ್ಷಿಕ ಆದಾಯ ಇರುವವರಿಗೆ ಯಾವುದೇ ತೆರಿಗೆ ಇಲ್ಲ ಎನ್ನುವ ನೀತಿ ಜಾರಿಗೊಳಿಸಿದರು. ಸಂಬಳ ಪಡೆಯುವ ವ್ಯಕ್ತಿಗಳು 17,500 ರೂ. ವರೆಗೆ ತೆರಿಗೆ ಉಳಿಸಬಹುದಾಗಿದೆ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂ.ಗೆ ಹೆಚ್ಚಳ ಮಾಡಲಾಗಿದೆ.
- ಅಭಿವೃದ್ಧಿ ಹೊಂದಿದ ಬುಡಕಟ್ಟು ಗ್ರಾಮ ಅಭಿಯಾನದ ಅಡಿಯಲ್ಲಿ, 63,000 ಬುಡಕಟ್ಟು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಅನುಮೋದನೆ ನೀಡಿದರು. ನೈರ್ಮಲ್ಯ ಕಾರ್ಮಿಕರು, ತ್ಯಾಜ್ಯ ತೆಗೆಯುವವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ನಮಸ್ತೆ ಯೋಜನೆಯನ್ನು ಜಾರಿಗೆ ತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ.
- ಮೋದಿ ಸರ್ಕಾರದ ನೇತೃತ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ಅಪ್ಗಳಿಗಾಗಿ 1,000 ಕೋಟಿ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪನೆ ಮಾಡಲಾಗಿದೆ.
- ಆರೋಗ್ಯ ಕ್ಷೇತ್ರದಲ್ಲಿ, ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡಿದ್ದು ಇದರಡಿಯಲ್ಲಿ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ 5 ಲಕ್ಷ ರೂ.ವರೆಗಿನ ಉಚಿತ ವಿಮೆ ಹಾಗೂ 75,000 ಹೊಸ ವೈದ್ಯಕೀಯ ಸೀಟುಗಳ ಸೃಷ್ಟಿಸುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ