AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ

Writing : ‘ಈ ಅಭಿವ್ಯಕ್ತಿಯಲ್ಲಿ ಭಾಷೆ, ಕಲ್ಪನೆ ಇವುಗಳೆಲ್ಲವೂ ಸೇರಿ ವಿಷಯದ ನಿರೂಪಣೆ ಸುಂದರವಾಗಿ ಸಾಗಿದರೂ ಅದು ಸಂಗೀತವನ್ನು ಕೇಳಿ ಪಡೆಯುವ ಅನುಭವದಿಂದ ಮಾರು ದೂರವಿರುವುದಂತೂ ನಿಜ. ಹಾಗಿದ್ದರೂ ನಾನೇಕೆ ಬರೆಯುತ್ತಿದ್ದೇನೆ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ.’ ಶ್ರೀಮತಿದೇವಿ

Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ
ಶ್ರೀದೇವಿ ಕಳಸದ
|

Updated on:Jan 05, 2022 | 4:36 PM

Share

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ | Naakutantiya Midita : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಶ್ರೀಮತಿದೇವಿ (Shrimathi Devi) ಮೈಸೂರಿನಲ್ಲಿ ನೆಲೆಸಿರುವ ಗ್ವಾಲಿಯರ್ ಘರಾಣಾ ಗಾಯಕಿ. ಪಂ. ಚಂದ್ರಶೇಖರ ಪುರಾಣಿಕಮಠ, ಪಂ. ನಾರಾಯಣ ಪಂಡಿತ್, ವಿ. ಪದ್ಮಾ ತಲವಾಲ್ಕರ್, ಪಂ. ವ್ಯಾಸಮೂರ್ತಿ ಕಟ್ಟಿ, ಪಂ. ರವಿಕಿರಣ ಮಣಿಪಾಲ ಇವರಲ್ಲಿ ಸಂಗೀತಾಭ್ಯಾಸ ಮಾಡಿದ್ದು, ಪ್ರಸ್ತುತ ಮುಂಬೈನ ವಿ. ಅಪೂರ್ವ ಗೋಖಲೆಯವರಲ್ಲಿ ಕಲಿಕೆ ಮುಂದುವರಿಸಿದ್ಧಾರೆ. ಮೈಸೂರು ಆಕಾಶವಾಣಿಯ ಶಾಸ್ತ್ರೀಯ ಮತ್ತು ಸುಗಮ ಸಂಗೀತ ವಿಭಾಗದಲ್ಲಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದಾರೆ. ಮಿರಜಿನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ಅಲಂಕಾರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಉಡುಪಿಯ ನಾದರಂಜಿನಿ ಮೆಮೊರಿಯಲ್ ಟ್ರಸ್ಟ್​ನಡಿ ‘ನಾದಪ್ರಿಯ ಪಂಡಿತ್ ನಾರಾಯಣ ಪಂಡಿತ್ ಬಂದಿಶ್ ಪ್ರಾಜೆಕ್ಟ್’ಗಾಗಿ ಗುರು ನಾರಾಯಣ ಅವರು ರಚಿಸಿದ 100 ಬಂದಿಶ್​ಗಳಲ್ಲಿ 92 ಬಂದಿಶ್​ಗಳನ್ನು ಹಾಡಿ ಅಂತರ್ಜಾಲದಲ್ಲಿ ದಾಖಲಿಸಿದ್ದಾರೆ. ದೇಶವಿದೇಶಗಳಲ್ಲಿ ನೂರಾರು ಕಛೇರಿಗಳನ್ನು ನೀಡಿದ ಇವರು ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ ಗಾಗಿ ಇವರು ಪ್ರಾರಂಭಿಸುತ್ತಿರುವ ಅಂಕಣ ‘ನಾಕುತಂತಿಯ ಮಿಡಿತ’ ನಾಳೆಯಿಂದ (ಗುರುವಾರ) ಶುರುವಾಗಲಿದ್ದು, ಮುನ್ನಾದಿನ ಅಂಕಣದ ಆಶಯ ನಿಮ್ಮ ಓದಿಗೆ.    

ಸಂಗೀತದ ಬಗ್ಗೆ ಬರೆಯುವುದು ಹಾಡುವುದಕ್ಕಿಂತ ಕಷ್ಟದ ಸಂಗತಿ. ಅದೆಷ್ಟೋ ವರ್ಷಗಳ ಹಿಂದೆ ಪ್ಲೇಟೋ ಹೇಳಿದ ‘ಕಲೆ ಎಂಬುದು ಅನುಕರಣೆಯ ಅನುಕರಣೆ. ಆದ್ದರಿಂದ ಇದು ಅಖಂಡ ಸತ್ಯದಿಂದ ಎರಡು ಪಟ್ಟು ದೂರವಾದದ್ದು’ ಎಂಬ ಮಾತು ಇಲ್ಲಿ ನೆನಪಾಗುತ್ತದೆ. ಇದನ್ನೇ ಅನ್ವಯಿಸಿಕೊಂಡು ಹೇಳುವುದಾದರೆ, ಸಂಗೀತದಲ್ಲಿ, ಸಂಗೀತದ ಪ್ರಸ್ತುತಿ ಮತ್ತು ಅದನ್ನು ಕೇಳಿ ಅನುಭವಿಸುವುದು ಪ್ರಾಥಮಿಕ ಮತ್ತು ಆದ್ಯ ಅನುಭವ ಎನಿಸಿದರೆ, ಪಡೆದ ಅನುಭವದ ಆಧಾರದಲ್ಲಿ ಅದನ್ನು ಅಕ್ಷರ ರೂಪಕ್ಕೆ ಇಳಿಸುವುದು ಎರಡನೆಯ ಹಂತದ ಅನುಭವ ಎನಿಸಿಕೊಳ್ಳುತ್ತದೆ. ಈ ಅಭಿವ್ಯಕ್ತಿಯಲ್ಲಿ ಭಾಷೆ, ಕಲ್ಪನೆ ಇವುಗಳೆಲ್ಲವೂ ಸೇರಿ ವಿಷಯದ ನಿರೂಪಣೆ ಸುಂದರವಾಗಿ ಸಾಗಿದರೂ ಅದು ಸಂಗೀತವನ್ನು ಕೇಳಿ ಪಡೆಯುವ ಅನುಭವದಿಂದ ಮಾರು ದೂರವಿರುವುದಂತೂ ನಿಜ. ಹಾಗಿದ್ದರೂ ನಾನೇಕೆ ಬರೆಯುತ್ತಿದ್ದೇನೆ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ.

Naakutantiya Midita Column by Hindustani Classical Vocalist Shrimathidevi from Mysore

ಶ್ರೀಮತಿದೇವಿ

‘ಒಂದೇ ರಾಗವನ್ನು ನೂರಾರು ಕಲಾವಿದರು ಹಾಗೂ ಒಬ್ಬ ಕಲಾವಿದ/ಕಲಾವಿದೆ ನೂರು ಬಾರಿ ಒಂದೇ ರಾಗವನ್ನು ಯಾಕೆ ಮತ್ತು ಹೇಗೆ ಹಾಡುತ್ತಾರೆ’ ಎನ್ನುವುದನ್ನು ಯೋಚಿಸಿದಾಗ ಅಲ್ಲಿ ಅವರು ರಾಗವನ್ನು ಮಂಡಿಸಲು ಅಥವಾ ತನ್ನ ವಿದ್ವತ್ ಪ್ರದರ್ಶನಕ್ಕೆ ಕುಳಿತಿರುವುದಿಲ್ಲ. ಬದಲಾಗಿ ಈ ರಾಗದಲ್ಲಿನ ತಮ್ಮ ಅನುಭವವನ್ನು, ತಾವು ಕಂಡುಕೊಂಡ ಭಾವವನ್ನು, ಪ್ರತಿಬಾರಿಯೂ ಗೋಚರಿಸುವ ಹೊಸ ರೂಪವನ್ನು, ಈ ಕ್ಷಣ ತಮಗೆ ಒಲಿದಷ್ಟು ಹಾಡಿ ಸಂತೋಷ ಪಡುವ/ಮತ್ತೊಬ್ಬರೊಂದಿಗೆ ಹಂಚಿಕೊಂಡು ಖುಷಿಪಡಿಸುವ ಗುರಿ ಹೊಂದಿರುತ್ತಾರೆ ಎಂಬ ಉತ್ತರ ನನಗೆ ಸಿಕ್ಕಿತು. ಮತ್ತು ಅದೇ ಭಾವ, ಆಸೆ, ನಿರೀಕ್ಷೆ ಈ ಲೇಖನಗಳದ್ದು.

ಹಿಂದೂಸ್ತಾನಿ ಸಂಗೀತ ಕಲಿಯಬೇಕೆಂಬ ಆಸೆ ಹೊತ್ತು ದಕ್ಷಿಣ ಕನ್ನಡದ ಮೂಡುಬಿದ್ರೆಯಿಂದ ಧಾರವಾಡಕ್ಕೆ ಹೋಗಿ ಅಲ್ಲಿ ಎದುರಾದ ಪ್ರತಿ ಕ್ಷಣವನ್ನು ಸಂಗೀತದೊಂದಿಗೇ ಕಳೆದ ನನಗೆ ಸಂಗೀತವನ್ನು ಧಾರವಾಡದಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವಾಗಿಲ್ಲ. ಆ ಎಲ್ಲಾ ನೆನಪುಗಳ ಸಂಚಯವನ್ನು ಸಂಚಿಕೆಯಾಗಿ ಇದೀಗ ನಿಮ್ಮೊಂದಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಂಚಿಕೊಳ್ಳಲಿದ್ದೇನೆ.

*

ಶ್ರೀಮತಿದೇವಿ ಬರೆದ ಈ ಬರಹವನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ : ಹಡಗು ದಡ ಮುಟ್ಟಿತೇ ಎಂದು ಕೇಳುವವರು ದಾರಿಯ ಬಗ್ಗೆ ಯೋಚಿಸಲಾರರು

Published On - 4:26 pm, Wed, 5 January 22