Transgender World : ‘ಇನ್ನೊಬ್ಬರ ಅನುಭವದ ಮೇಲೆ ಸಿದ್ಧಾಂತ ಸೃಷ್ಟಿಸಲು ನಮಗೇನು ಹಕ್ಕಿದೆ?’ ಸದ್ಯದಲ್ಲೇ ನಿರೀಕ್ಷಿಸಿ ‘ರೂಮಿ ಕಾಲಂ’

|

Updated on: Oct 23, 2021 | 5:24 PM

Oppression : ‘ಶೋಶಣೆ, ಈ ಪದ ನನಗೆ ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ನಾನು ಹುಟ್ಟಿದ್ದು ಬ್ರಾಮಣ ಮನೆಯಲ್ಲಿ. ಆದರೆ, ಅಷ್ಟು ಹೊತ್ತಿಗಾಗಲೇ ನನ್ನ ತಾಯಿ, ಶಿಲ್ಪಿ ಕನಕಾ ಮೂರ್ತಿ ಒಂದು ಹಂತದಲ್ಲಿ ಜೆಂಡರ್‌ ಅನ್ನು ಸಾಕಷ್ಟು ಬ್ರೇಕ್‌ ಮಾಡಿದ್ದರು.’

Transgender World : ‘ಇನ್ನೊಬ್ಬರ ಅನುಭವದ ಮೇಲೆ ಸಿದ್ಧಾಂತ ಸೃಷ್ಟಿಸಲು ನಮಗೇನು ಹಕ್ಕಿದೆ?’ ಸದ್ಯದಲ್ಲೇ ನಿರೀಕ್ಷಿಸಿ ‘ರೂಮಿ ಕಾಲಂ’
Follow us on

ನಾನು ಬರೆಯೋದು ಎಲ್ಲಾ ನನ್ನ ಅನುಭವಗಳೇ ಹೊರತು, ನಾನು ಯಾವ ಥಿಯರಿಯನ್ನೂ ಮಾಡೋದಿಲ್ಲ, ಮತ್ತದು ಸರಿಯೂ ಅಲ್ಲ. ಪ್ರಿವಿಲೇಜ್‌ ಇರುವ ಯಾರೂ ಥಿಯರಿ ಮಾಡುವುದು ನ್ಯಾಯವಲ್ಲ. ಏಕೆಂದರೆ ಇನ್ನೊಬ್ಬರ ಅನುಭವದ ಮೇಲೆ ನಮಗೇನು ಹಕ್ಕಿದೆ ನಾವು ಥಿಯರೈಸ್‌ ಮಾಡಲು? ಅಕಾಡೆಮಿಕ್ಸಗಳೆಲ್ಲಾ ಇದೇ ಮಾಡಿರುವುದು. ಅದಕ್ಕೆ ಸುನಿಲ ಹೇಳೋದು, “ನಾವ್ಯಾರು? ಇವರ ಸಬ್ಜೆಕ್ಟ್ಸು, ಇವರು ಮಾಡುವ ಥಿಯರಿಗೆ ನಾವ್ಯಾಕೆ ನಿಲ್ಬೇಕು, ನಮಗೆ ನಂ ಥಿಯರಿ ಚೆನ್ನಾಗಿ ಗೊತ್ತಿದೆ. ಇವರ ಸ್ಟುಪಿಡ್‌ ಪ್ರಶ್ನೆಗಳಿಗೆ ಉತ್ರ ಕೊಡೋ ಬದ್ಲು ನಾವೇ ಯೋಚನೆ ಮಾಡಿ ಮಾತಾಡಬಹುದು” ಬೆಂಗಳೂರಿನ ರೂಮಿ ಹರೀಶ್ – Rumi Harish Trans Man. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಮತ್ತು ಲೇಖಕರೂ ಆಗಿರುವ ಇವರು, ಕಳೆದ 21 ವರ್ಷಗಳಿಂದ Gender Rights ಮತ್ತು Sexuality Politics ಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದಲ್ಲೇ ಇವರು ಬರೆಯುವ ‘ರೂಮಿ ಕಾಲಂ’ ಹದಿನೈದು ದಿನಕ್ಕೊಮ್ಮೆ ಪ್ರಕಟವಾಗಲಿದೆ.

ತುಂಬಾ ಯೋಚಿಸಿದೆ ಕಾಲಂ ಬರೀಬೇಕಾ ಬೇಡ್ವಾ ಅಂತ. ನನಗಿರುವ ಪ್ರಿವಿಲೇಜ್‌ಗೆ ನಾನು ಬರೆಯುವುದು ಸರಿಯಲ್ಲ ಅಂತ ಅನಿಸಿತು. ನಾನು ಕೇಳಬೇಕು ಕಲೀಬೇಕು, ರೀಲರ್ನ್ ಮಾಡಬೇಕು ಅಂತ. ಆದರೆ ಒಂದೇ ಕಾರಣದಿಂದಾಗಿ ಬರೆಯಲು ಮನಸ್ಸು ಒಪ್ಪಿತು. ನಾನು ಬ್ರಾಮಣ ಜಾತಿಯಲ್ಲಿ ಹುಟ್ಟಿದರೂ ನಾನು ಮಾಡಿದ ಜೀವನದ ಆಯ್ಕೆಗಳಿಂದಾಗಿ ನನಗೆ ನನ್ನ ಪ್ರಿವಿಲೇಜ್ ಒಂದು ಹಂತಕ್ಕೆ ಮಾತ್ರ ಉಪಯೋಗಿಸಲು ಸಾಧ್ಯವಾಯಿತು. ನನ್ನ ಆಯ್ಕೆಗಳು ಅಂದಾಗ ಅದರಲ್ಲಿ ಅನೇಕ ವಿಷಯಗಳು ಬರುತ್ತವೆ. ಈ ಕಾಲಂನಲ್ಲಿ ಹಂಚಿಕೊಳ್ಳುವ ವಿಷಯಗಳಲ್ಲಿ ನನ್ನ ಆಯ್ಕೆಗಳ ಬಗ್ಗೆಯೂ ವಿಸ್ತರಿಸುತ್ತಾ ಹೋಗುತ್ತೇನೆ. ಈಗ ನನ್ನ ಎಲ್ಲಾ ಆಯ್ಕೆಗಳಂತೆಯೇ ಬದುಕುತ್ತಿದ್ದೇನೆ ಎಂದು ಹೇಳಲೂ ಹಿಂಜರಿಕೆ. ಏಕೆಂದರೆ, ಎಷ್ಟು ಜನರಿಗೆ ಈ ರೀತಿಯಲ್ಲಿ ತಮ್ಮ ಆಯ್ಕೆಗಳಂತೆಯೇ ಬದುಕಲು ಈ ಸಮಾಜ ಅವಕಾಶ ಮಾಡಿಕೊಟ್ಟಿದೆ ಎನ್ನುವ ಪ್ರಶ್ನೆ ಏಳುತ್ತದೆ, ಅದರಲ್ಲೂ ಹುಟ್ಟಿನಿಂದ ಹೆಣ್ಣಾಗಿ ಗುರುತಿಸಲ್ಪಟ್ಟು, ಶೋಶಿತ ಜಾತಿ, ಧರ್ಮ, ವರ್ಗ, ಕೆಲಸಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ಅಸ್ತಿತ್ವ ಕಟ್ಟಿಕೊಳ್ಳುತ್ತಿರುವಾಗ…

ಶೋಶಣೆ, ಈ ಪದ ನನಗೆ ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ನಾನು ಹುಟ್ಟಿದ್ದು ಬ್ರಾಮಣ ಮನೆಯಲ್ಲಿ. ಆದರೆ, ಅಷ್ಟು ಹೊತ್ತಿಗಾಗಲೇ ನನ್ನ ತಾಯಿ ಒಂದು ಹಂತದಲ್ಲಿ ಜೆಂಡರ್‌ ಅನ್ನು ಸಾಕಷ್ಟು ಬ್ರೇಕ್‌ ಮಾಡಿದ್ದರು. ಮನೆಯಲ್ಲಿ ಅಜ್ಜಿ ಅಜ್ಜ ಇದ್ದರೂ ನಮ್ಮ ಕಂಕು (ಅಮ್ಮನ್ನ ನಾನು ಚಿಕ್ಕ ವಯಸ್ಸಿನಿಂದ ಕರೀತಿದ್ದುದ್ದು) ಮಡಿ ಮೈಲಿಗೆ ಅನ್ನೋದನ್ನ ತಿತಿ ದಿವಸ ಮಾತ್ರ ನೋಡ್ತಿದ್ರು. ಹಬ್ಬ ಮಾಡಿದ್ರೆ ಮಾಡಿದ್ರು ಬಿಟ್ರೆ ಬಿಟ್ರು. ಅದು ಅವರ ಕೆಲಸದ ಮೇಲೆ ಡಿಪೆಂಡ್‌ ಆಗ್ತಿತ್ತು. ಸತ್ನಾರಾಣ ಪೂಜೆ ಮಾತ್ರ ನಂ ಮನೇಲಿ ಯಾವತ್ತೂ ಮಾಡ್ತಿರಲಿಲ್ಲ. ಅವರಿಗೆ ಆಯಪ್ಪ ಹೊಸ ದೇವ್ರು. ಸೊ ಶಿ ವುಡ್‌ ನಾಟ್‌ ಕೇರ್.‌ ನಂ ಮನೇಲಿ ಕಂಕು ಹೇಳಿದ್ದೇ ರೂಲು. ಬೇರೆ ಯಾರೂ ಏನೂ ಹೇಳೋಂಗಿಲ್ಲ.

ತಾಯಿ ಶಿಲ್ಪಿ ಕನಕಾ ಮೂರ್ತಿ (ಕಂಕು) ಮತ್ತು ರೂಮಿ ಹರೀಶ್

ನನಗಾಗ 6 ವರ್ಷ. ಅಜ್ಜಿ ಊರಿಂದ ಬಂದ್ರು. ಒಂದಿನ ನಂಗೆ ಹೇಳಿದ್ರು, “ತೊಳೆಯೋ ಆಯಮ್ಮ ಬಂದ್ರೆ ಕಕಸ್ಸು ತೊಳೆಸಬೇಕು” ಅಂತ. ಅಜ್ಜಿ ಹೇಳಿದ್ದನ್ನು ಕಂಕುಗೆ ಹೇಳಿದೆ. ಆಗ ಸುಮ್ಮನಿದ್ದು, ಚಿಕ್ಕಮಾದೇವಿಯಮ್ಮ ಬಂದಾಗ ಕಂಕು ನನ್ನನ್ನ ಕರೆದು, “ಇವರು ಚಿಕ್ಕಮಾದೇವಿಯಮ್ಮ, ಇವರು ಇಲ್ಲಿ ಕಕಸ್ಸನ್ನು ತೊಳೆಯಲು ಬರಲ್ಲ, ಇವರು ಇಲ್ಲಿ ನಾವು ಕೆತ್ತುವ ಕಲ್ಲುಗಳನ್ನು ಸರಿಸಿ ಕೆಲಸ ಮಾಡುವ ಜಾಗವನ್ನು ಸ್ವಚ್ಛಗೊಳಿಸಿಕೊಡ್ತಾರೆ. ಇವರನ್ನು ಚಿಕ್ಕಮಾದೇವಿಯಮ್ಮನೆಂದೇ ಕರೀ. ಕಕಸ್ಸು ತೊಳೆಯಲು ಅಜ್ಜಿಗೆ ಹೇಳು ಇಲ್ಲ ನೀನು ತೊಳೀ. ನಿನಗೆ ಹೆಂಗೂ ಮನೇಲಿ ಇಲ್ಲೀ ತನಕ ಏನೂ ಕೆಲಸ ಕೊಟ್ಟಿಲ್ಲ. ನೀನು ಇನ್ಮೇಲೆ ಪ್ರತೀ 15 ದಿವಸಕ್ಕೆ ಒಮ್ಮೆ ಕಕಸ್ಸು ತೊಳೀಬೇಕು. ತೊಳೆಯೋದು ಹೆಂಗೆ ಅಂತ ಹೇಳಿಕೊಡ್ತೀನಿ” ಅಂದ್ರು. ಅಜ್ಜಿ ಬಂದ 10 ದಿವಸದಲ್ಲಿ ಮೊದಲನೇ ಪಾಠ ಕಂಕು ಕಡೆಯಿಂದ ನನಗೆ ಹೀಗೆ ಸಿಕ್ತು. ಫರ್ಸ್ಟ ಟೈಮ್‌ ನನಗೆ ಪಾಠ ಆಗಿದ್ದು ಜನರು ಮಾಡುವ ಕೆಲಸದಿಂದ ಅವರ ಹೆಸರನ್ನು ಕೂಗಬಾರ್ದು ಮತ್ತು ಆ ದಿನದಿಂದ ಯಾವುದನ್ನೇ ಕ್ಲೀನ್ ಮಾಡಲು ನಾನು ಹೇಸಬಾರ್ದು ಅಂತಾನೂ ಹೇಳಿಕೊಟ್ರು. ಆಮೇಲೆ ನಾನು 26 ನೇ ವರ್ಷದಲ್ಲಿ ಸರ್ಸಿಮಾ ಜೊತೆ ಪೌರಕಾರ್ಮಿಕರ ಜೊತೆ ಯೂನಿಯನ್‌ ಕಟ್ಟಲು ಕೆಲಸ ಮಾಡಲು ಶುರು ಮಾಡಿದಾಗ ಕಂಕು ಖುಶಿಯಿಂದ ಒಂದು ಸ್ಕಲ್ಪ್ಚರ್‌ ಮಾಡಿಕೊಟ್ಟಿದ್ರು. ಆದ್ರೆ ನಂ ಚಿಕ್ಕಮ್ಮಂದ್ರು ಮಾವಂದ್ರು ನನ್ನನ್ನ ಹತ್ರ ಸೇರಸ್ತಾನೇ ಇರ್ಲಿಲ್ಲ. ಅವರ ಮುಖದಲ್ಲೇ ನನ್ನ ಮಾತಾಡ್ಸೋವಾಗ ಅಸಹ್ಯ ಕಾಣ್ತಿತ್ತು.

ಕಂಕು, ಮಾಮ (ಅಮ್ಮನ ಶಿಲ್ಪಕಲೆಯ ಗುರು ವಾದಿರಾಜ್‌ ದೇವಲಕುಂದ ಅವರು) ಅವರೆಲ್ಲರೂ ಕಲ್ಲು ಕೆತ್ತನೆ ಕೆಲಸ ಮಾಡುತ್ತಿದ್ದಾಗ ನನಗೆ ಎಲ್ಲರನ್ನೂ ಹೆಸರು ಹೇಳಿ ಕರಿಯಲು ಹೇಳಿಕೊಟ್ಟಿದ್ರು. ಮುಂದೆ 19 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡುತ್ತಿರುವ ಮತ್ತು ಈಗಲೂ ಜೊತೆಗೇ ಜೀವಿಸುತ್ತಿರುವ ನನ್ನ ಸ್ನೇಹಿತ ಸುನಿಲ ತುಂಬಾ ಸರ್ತಿ ನನಗೆ ನೆನಪಿಸ್ತಿರ್ತಾನೆ, “ನಿನ್‌ ಬ್ರಾಮಣ ಬುದ್ಧಿ ತೋರಿಸ್ಬೇಡ” ಅಂತ; ನಾನು ಯಾವಾಗ ಮೇಲಿನಿಂದ ಬಡಿಸ್ತೀನೋ, ಯಾವಾಗ ಯಾರಿಗಾದ್ರು ದುಡ್ಡನ್ನು ಕೈಗೆ ಕೊಡದೇ ಕೆಳಗೆ ಇಡ್ತೀನೋ ಮತ್ತು ಯಾವಾಗ್ಯಾವಾಗೆಲ್ಲ ನನ್ನ ಪ್ರಜ್ಞೆಯನ್ನ ಮರೀತೀನೋ…

ಜಾತಿ ಎನ್ನುವ ರಾಜಕೀಯ ಮೊದಲ ಕಲಿಕೆಯಾಗದಿದ್ದರೂ ನಿರಂತರ ಕಲಿಕೆಯಾಗಿ ನಡೀತಿದೆ ನನ್ನ ಜೀವನದಲ್ಲಿ. ನನ್ನ ಜೀವನದಲ್ಲಿ ನನಗೆ ನಿರಂತರವಾಗಿ ಕಲಿಸುತ್ತಿರುವವರು ಅನೇಕರು, ಅದರಲ್ಲೂ ಕಂಕು, ಸುನಿಲ್‌, ನಂ ವಾದಿರಾಜ್‌ ಮಾಮ, ಮೇಷ್ಟ್ರು (ನನಗೆ ಸಂಗೀತ ಕಲಿಸಿದ ಗುರು), ಸರ್ಸಿಮಾ (ದು. ಸರಸ್ವತಿ), ಅರ್ವಿಂದ್‌ ನರೇನ್‌, ನಿತಿನ, ಫಮೀಲ, ಸಲ್ಮ, ಗೀತ… ಇವರೆಲ್ಲರನ್ನೂ ನಿಮಗೆ ಪರಿಚಯ ಮಾಡಿಕೊಡ್ತೇನೆ.

                                             ಎಲ್ಲ ಕೆಲಸಗಳಂತೆ ಇದೂ ಒಂದು ಕೆಲಸ

ನಾನು ಬರೆಯೋದು ಎಲ್ಲಾ ನನ್ನ ಅನುಭವಗಳೇ ಹೊರತು, ನಾನು ಯಾವ ಥಿಯರಿಯನ್ನೂ ಮಾಡೋದಿಲ್ಲ, ಮತ್ತದು ಸರಿಯೂ ಅಲ್ಲ. ಪ್ರಿವಿಲೇಜ್‌ ಇರುವ ಯಾರೂ ಥಿಯರಿ ಮಾಡುವುದು ನ್ಯಾಯವಲ್ಲ. ಏಕೆಂದರೆ ಇನ್ನೊಬ್ಬರ ಅನುಭವದ ಮೇಲೆ ನಮಗೇನು ಹಕ್ಕಿದೆ ನಾವು ಥಿಯರೈಸ್‌ ಮಾಡಲು? ಅಕಾಡೆಮಿಕ್ಸಗಳೆಲ್ಲಾ ಇದೇ ಮಾಡಿರುವುದು. ಅದಕ್ಕೆ ಸುನಿಲ ಹೇಳೋದು, “ನಾವ್ಯಾರು? ಇವರ ಸಬ್ಜೆಕ್ಟ್ಸು, ಇವರು ಮಾಡುವ ಥಿಯರಿಗೆ ನಾವ್ಯಾಕೆ ನಿಲ್ಬೇಕು, ನಮಗೆ ನಮ್‌ ಥಿಯರಿ ಚೆನ್ನಾಗಿ ಗೊತ್ತಿದೆ. ಇವರ ಸ್ಟುಪಿಡ್‌ ಪ್ರಶ್ನೆಗಳಿಗೆ ಉತ್ರ ಕೊಡೋಬದ್ಲು ನಾವೇ ಯೋಚನೆ ಮಾಡಿ ಮಾತಾಡಬಹುದು” ಅಂತ. ಇಲ್ಲಿ ಹೇಳುವ ನನ್ನ ರಾಜಕೀಯ ನನ್ನ ಅನುಭವಗಳಿಂದ ಬಂದಿರುವುದೇ ಹೊರತು ನಾನು ಅಥವಾ ನನ್ನಂಥ ಜನ ಈ ಅಕಾಡೆಮಿಕ್ಸ ಭಾಷೆಗೆ ಸಿಲುಕದವರು, ಮತ್ತೆ ಸಿಲುಕಕ್ಕೆ ಒಲ್ಲದವರು. ನಾವು ಜೀವನದಲ್ಲಿ ನಮ್ಮ ರಾಜಕೀಯವನ್ನು ದಿನಾ ಅನುಭವಿಸಿ ಬದುಕುವವರು. ಹೀಗೇ ಮುಂದುವರೆಯೋಣ…

(ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು.)

ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

Published On - 5:18 pm, Sat, 23 October 21