
ಶಿಮ್ಲಾ, ಜುಲೈ 24: ಹಿಮಾಚಲ ಪ್ರದೇಶದ ಲಾಹಾಲ್-ಸ್ಪಿತಿ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ಟ್ಯಾಕ್ಸಿಯೊಂದರ ಮೇಲೆ ಬಂಡೆಗಳು ಬಿದ್ದು 13 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಉದಯಪುರ-ಕಿಲ್ಲಾರ್ ರಸ್ತೆಯ ಕಡು ನಾಲಾ ಬಳಿ ಟ್ಯಾಕ್ಸಿ ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಿಢೀರನೆ ಸಂಭವಿಸಿದ ಭೂಕುಸಿತದಿಂದಾಗಿ (Chamba Landslide) ದೊಡ್ಡ ಬಂಡೆಗಳು ಕಾರಿನ ಮೇಲೆ ಬಿದ್ದು, ಚಂಬಾ ಜಿಲ್ಲೆಗೆ ಸೇರಿದ ಪ್ರಯಾಣಿಕರು ಒಳಗಡೆ ಸಿಲುಕಿಕೊಂಡರು.
ಆ ಪ್ರದೇಶದಲ್ಲಿ ಭೂಕುಸಿತವಾದ ನಂತರ ಗುರುವಾರ ರಾತ್ರಿ ಉದಯಪುರ-ಕಿಲ್ಲಾರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ನಂತರ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಆದರೆ ಕಡು ನಾಲಾ ಬಳಿ ಟಾಟಾ ಸುಮೊ ಟ್ಯಾಕ್ಸಿಯ ಮೇಲೆ ಭಾರಿ ಬಂಡೆಗಳು ಬಿದ್ದು ನಜ್ಜುಗುಜ್ಜಾಯಿತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ
ಈ ಅಪಘಾತದ ನಂತರ ಸ್ಥಳೀಯ ಪೊಲೀಸರು, ಆಡಳಿತ ಮಂಡಳಿ ಮತ್ತು ವಿಪತ್ತು ಸ್ಪಂದನಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ 13 ಜನರು ಸಾವನ್ನಪ್ಪಿರುವುದು ಮತ್ತು ಇಬ್ಬರು ಗಾಯಗೊಂಡಿರುವುದು ಕಂಡುಬಂದಿದೆ.
“ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ನಾವು ಚಂಬಾ ಮತ್ತು ಲಾಹಾಲ್ ಸ್ಪಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಪೊಲೀಸ್ ಮತ್ತು ರಕ್ಷಣಾ ಪಡೆಗಳು ಸ್ಥಳದಲ್ಲಿಯೇ ಇವೆ” ಎಂದು ಬಿಜೆಪಿ (BJP) ನಾಯಕ ಜನಕ ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ, ರಕ್ಷಣಾ ಕಾರ್ಯಾಚರಣೆ ತೀವ್ರ, ಮೂವರು ಸಾವು, ಐವರು ನಾಪತ್ತೆ
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ:
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ಈ ದುರಂತ ಸಂಭವಿಸಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಪ್ರಕಾರ, ಹಿಮಾಲಯನ್ ರಾಜ್ಯದಾದ್ಯಂತ 130ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, 64 ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿವೆ. ಮುಂದಿನ ಕೆಲವು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ಜುಲೈ 26ರವರೆಗೆ ಕೆಲವು ಪ್ರದೇಶಗಳಿಗೆ ‘ಹಳದಿ ಅಲರ್ಟ್’ ನೀಡಲಾಗಿದೆ. ಅಲ್ಲದೆ ಜುಲೈ 27ರಿಂದ 29ರವರೆಗೆ ಭಾರಿ ಮುನ್ನೆಚ್ಚರಿಕೆಯಾಗಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ