ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದ ಬೀದಿ ನಾಯಿ

|

Updated on: Feb 28, 2023 | 6:15 PM

ಸೋಮವಾರ ತಡರಾತ್ರಿ ಎರಡು ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್‌ನೊಳಗೆ ಹೋಗಿದ್ದು ಅವುಗಳಲ್ಲಿ ಒಂದು ಪುಟ್ಟ ಪಾಪುವನ್ನು ಕಚ್ಚಿಕೊಂಡು ಬರುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದ ಬೀದಿ ನಾಯಿ
ಬೀದಿ ನಾಯಿ
Follow us on

ಜೈಪುರ: ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ತಿಂಗಳ ಮಗುವನ್ನು ಬೀದಿ ನಾಯಿಯೊಂದು (Stray Dog Attack) ಎಳೆದುಕೊಂಡು ಹೋಗಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ(Rajasthan) ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆಸ್ಪತ್ರೆಯ ವಾರ್ಡ್‌ನ ಹೊರಗೆ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಎರಡು ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್‌ನೊಳಗೆ ಹೋಗಿದ್ದು ಅವುಗಳಲ್ಲಿ ಒಂದು ಪುಟ್ಟ ಪಾಪುವನ್ನು ಕಚ್ಚಿಕೊಂಡು ಬರುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಲಿಕೋಸಿಸ್ ಚಿಕಿತ್ಸೆಗಾಗಿ ಮಗುವಿನ ತಂದೆ ಮಹೇಂದ್ರ ಮೀನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಸೀತಾರಾಮ್ ಹೇಳಿದ್ದಾರೆ. ತನ್ನ ಮೂವರು ಮಕ್ಕಳೊಂದಿಗೆ ರೋಗಿಯನ್ನು ಉಪಚರಿಸುತ್ತಿದ್ದ ಮಗುವಿನ ತಾಯಿ ರೇಖಾ ನಿದ್ರೆ ಮಾಡಿದ್ದಾಗ ಆಕೆಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ನಾಯಿ ಎತ್ತಿಕೊಂಡು ಹೋಗಿದೆ.

ಘಟನೆಯ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಕೂಡ ವಾರ್ಡ್‌ನಲ್ಲಿ ಇರಲಿಲ್ಲ ಎಂದು ಅಧಿಕಾರಿ ಹೇಳಿದರು. ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆಯ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಏತನ್ಮಧ್ಯೆ, ಮಗುವಿನ ತಂದೆ ಆಸ್ಪತ್ರೆ ಅಧಿಕಾರಿಗಳು ಮತ್ತು ಪೊಲೀಸರಿಗೆ ತನಗೆ ತಿಳಿಸದೆ ತನ್ನ ಹೆಂಡತಿ ಖಾಲಿ ಪೇಪರ್‌ಗಳಿಗೆ ಸಹಿ ಹಾಕಿ ತನ್ನ ಮಗುವಿನ ಅಂತಿಮ ಸಂಸ್ಕಾರವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Narendra Modi: ಕೃತಕ ಬುದ್ಧಿಮತ್ತೆಯಿಂದ ಪರಿಹರಿಸಬಲ್ಲ 10 ಸಮಸ್ಯೆಗಳನ್ನು ಗುರುತಿಸಿ: ಪ್ರಧಾನಿ ನರೇಂದ್ರ ಮೋದಿ

“ಸೋಮವಾರ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾರ್ಡ್‌ನೊಳಗೆ ನಾಯಿಗಳು ಬರುತ್ತಿದ್ದವು. ನಾನು ಅವುಗಳನ್ನು ಓಡಿಸಿದೆ, ನನ್ನ ಹೆಂಡತಿ ರಾತ್ರಿ 2 ಗಂಟೆಗೆ ಎಚ್ಚರಗೊಂಡು ನಮ್ಮ ಮಗುವನ್ನು ನಾಯಿಗಳು ಕಚ್ಚುತ್ತಿರುವುದನ್ನು ಕಂಡಿದ್ದಾಳೆ. ಇಂದು ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ಖಾಲಿ ಕಾಗದದ ಮೇಲೆ ನನ್ನ ಹೆಂಡತಿಯ ಸಹಿ ತೆಗೆದುಕೊಂಡರು. ನನಗೆ ತಿಳಿಸದೆ ನನ್ನ ಮಗನ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. ನನ್ನ ಮಗನ ಮುಖವನ್ನು ಸಹ ನೋಡಲಾಗಲಿಲ್ಲ” ಎಂದು ಮಹೇಂದ್ರ ಮೀನಾ ಹೇಳಿದ್ದಾರೆ.

ಆಸ್ಪತ್ರೆ ಆಡಳಿತ ಕೂಡ ಈ ಬಗ್ಗೆ ತನಿಖೆ ಆರಂಭಿಸಿದೆ.

ರೋಗಿಯ ಜತೆ ಬಂದವರು ನಿದ್ರಿಸುತ್ತಿದ್ದರು. ಆಸ್ಪತ್ರೆಯ ಸಿಬ್ಬಂದಿ ಇತರ ವಾರ್ಡ್‌ಗೆ ಹೋಗಿದ್ದರು. ನಾನು ಸಿಸಿಟಿವಿ ದೃಶ್ಯಾವಳಿಗಳನ್ನು (ಘಟನೆಯ) ನೋಡಿಲ್ಲ. ತನಿಖೆಯ ನಂತರವಷ್ಟೇ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಸಿರೋಹಿ ಜಿಲ್ಲಾ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ (ಪಿಎಂಒ) ವೀರೇಂದ್ರ ಸುದ್ದಿಗಾರರಿಗೆ ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪುರೋಹಿತ್, ಈ ದುರಂತಕ್ಕೆ ಆಸ್ಪತ್ರೆಯ ಅಧಿಕಾರಿಗಳೇ ಹೊಣೆ ಎಂದಿದ್ದಾರೆ. ಇದು ಆಸ್ಪತ್ರೆ ಆಡಳಿತದ ವೈಫಲ್ಯ. ಬೀದಿ ನಾಯಿಗಳು ಆಸ್ಪತ್ರೆಯೊಳಗೆ ಓಡಾಡುತ್ತಿವೆ. ಆದರೆ ಮುಖ್ಯಮಂತ್ರಿ ಮತ್ತು ಸ್ಥಳೀಯ ಶಾಸಕರು ರಾಜ್ಯದ ಆರೋಗ್ಯ ಸೌಲಭ್ಯಗಳ ಮುಖವನ್ನು ಬದಲಾಯಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಬಿಜೆಪಿ ಕಾರ್ಯಕರ್ತರು ನೊಂದ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಪರಿಹಾರ ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ನಡೆಸಿದರು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ