AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಭಜನ್ ಸಿಂಗ್, ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಸೇರಿದಂತೆ ಎಎಪಿಯಿಂದ ಐವರು ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ

ಸದಸ್ಯರನ್ನು ನಾಮನಿರ್ದೇಶನ ಮಾಡಲು ಸೋಮವಾರ ಕೊನೆಯ ದಿನವಾಗಿದ್ದು, ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. 33 ವರ್ಷದ ಚಡ್ಡಾ ಅವರು ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಹರ್ಭಜನ್ ಸಿಂಗ್, ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಸೇರಿದಂತೆ ಎಎಪಿಯಿಂದ ಐವರು ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ
ರಾಜ್ಯಸಭಾ ಅಭ್ಯರ್ಥಿಗಳು
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 21, 2022 | 1:49 PM

Share

ದೆಹಲಿ: ಆಮ್ ಆದ್ಮಿ ಪಕ್ಷ (AAP) ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh), ಐಐಟಿ ದೆಹಲಿಯ ಸಹ ಪ್ರಾಧ್ಯಾಪಕ ಸಂದೀಪ್ ಪಾಠಕ್, ದೆಹಲಿ ಶಾಸಕ ರಾಘವ್ ಚಡ್ಡಾ(Raghav Chadha), ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಸಂಸ್ಥಾಪಕ ಮತ್ತು ಕುಲಪತಿ ಅಶೋಕ್ ಮಿತ್ತಲ್ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಅರೋರಾ ಅವರನ್ನು ರಾಜ್ಯಸಭೆಯಲ್ಲಿ ತನ್ನ ಪ್ರತಿನಿಧಿಗಳಾಗಿ ಆಯ್ಕೆ ಮಾಡಿರುವುದಾಗಿ ಪಕ್ಷದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆದ್ದ ನಂತರ ಪಂಜಾಬ್‌ನ ಐದು ಸದಸ್ಯರ ಅವಧಿ ಮುಗಿದಿದೆ ಅಥವಾ ಶೀಘ್ರದಲ್ಲೇ ಕೊನೆಗೊಳ್ಳಲಿರುವ ಕಾರಣ ಮೇಲ್ಮನೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅವಕಾಶವನ್ನು ಎಎಪಿ ಪಡೆದುಕೊಂಡಿದೆ. ಸದಸ್ಯರನ್ನು ನಾಮನಿರ್ದೇಶನ ಮಾಡಲು ಸೋಮವಾರ ಕೊನೆಯ ದಿನವಾಗಿದ್ದು, ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. 33 ವರ್ಷದ ಚಡ್ಡಾ ಅವರು ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ದೆಹಲಿಯ ರಾಜಿಂದರ್ ನಗರದಿಂದ ಶಾಸಕರಾಗಿರುವ ಅವರು ಪಂಜಾಬ್‌ನಲ್ಲಿ ಪಕ್ಷದ ಉಸ್ತುವಾರಿವಹಿಸಿದ್ದು ಮತ್ತು ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದರು. ಅವರು ಎಎಪಿಯ ರಾಷ್ಟ್ರೀಯ ವಕ್ತಾರರೂ ಆಗಿದ್ದಾರೆ.

ಪಾಠಕ್ ಕೆಲವು ವರ್ಷಗಳಿಂದ ಎಎಪಿ ಜೊತೆ ಕೆಲಸ ಮಾಡುತ್ತಿದ್ದಾರೆ, ಆದರೆ ಹೆಚ್ಚಾಗಿ ತೆರೆಮರೆಯಲ್ಲಿ ಉಳಿದಿದ್ದಾರೆ. ಪಕ್ಷದ ಒಳಗಿನವರ ಪ್ರಕಾರ, ಅವರು ಚುನಾವಣೆಗೆ ತಂತ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

“ನಾನು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಪಂಜಾಬ್‌ನ ಜನರ ಸಮಸ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತೇನೆ ”ಎಂದು 33 ವರ್ಷದ ಚಡ್ಡಾ ಸೋಮವಾರ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

13 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. 13 ಸ್ಥಾನಗಳಲ್ಲಿ, ಪಂಜಾಬ್ ಶಾಸಕರು ಐದು ಸಂಸದರಿಗೆ ಮತ ಹಾಕುತ್ತಾರೆ, ಮೂವರು ಕೇರಳದಿಂದ, ಇಬ್ಬರು ಅಸ್ಸಾಂನಿಂದ ಮತ್ತು ತಲಾ ಒಬ್ಬರು ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಿಂದ ಇದ್ದಾರೆ. ಪಕ್ಷದ ಮೂಲಗಳ ಪ್ರಕಾರ ಕಳೆದ ವಾರ ಹರ್ಭಜನ್ ಸಿಂಗ್, ಚಡ್ಡಾ ಮತ್ತು ಪಾಠಕ್ ಅವರ ಹೆಸರುಗಳನ್ನು ಅಂತಿಮಗೊಳಿಸಲಾಯಿತು.ಉಳಿದ ಎರಡು ಹೆಸರುಗಳ ಬಗ್ಗೆ ಸೋಮವಾರ ಬೆಳಿಗ್ಗೆ ತೀವ್ರ ಚರ್ಚೆಗಳು ನಡೆದವು. ಪಂಜಾಬ್‌ನ ಗೆಲುವು ರಾಜ್ಯಸಭೆಯಲ್ಲಿ ಆಪ್‌ಗೆ ಬಲ ತುಂಬಲಿದೆ. ಪಕ್ಷವು ಪ್ರಸ್ತುತ ಮೇಲ್ಮನೆಯಲ್ಲಿ ಮೂವರು ಸಂಸದರನ್ನು ಹೊಂದಿದ್ದು, ಅವರೆಲ್ಲರೂ ದೆಹಲಿಯವರು.

ಹರ್ಭಜನ್ ಸಿಂಗ್, 41, ಎಎಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಮತ್ತು ಹಳದಿ ಪೇಟ ಧರಿಸಿ ಬಂದಿದ್ದರು. ಬೌಲಿಂಗ್ ದಂತಕಥೆಯಾಗಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ನಂತರ ಟರ್ಬನೇಟರ್ ಈಗ ಸಂಸತ್ತಿನಲ್ಲಿ ಪಂಜಾಬ್ ಜನರಿಗಾಗಿ ಧ್ವನಿ ಎತ್ತಲಿದ್ದಾರೆ ಎಂದು ಎಎಪಿ ಟ್ವೀಟ್ ಮಾಡಿದ್ದು ನಾಮಪತ್ರ ಸಲ್ಲಿಸುವ ವಿಡಿಯೊವನ್ನು ಹಂಚಿಕೊಂಡಿದೆ.

ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಅವರು ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಸದಸ್ಯರಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಇದನ್ನು ನಿರಾಕರಿಸಿದ್ದರು.

ಇದನ್ನೂ ಓದಿ: Video: ವರ್ಚ್ಯುವಲ್​ ಸಭೆಗೂ ಮುನ್ನ ಭಾರತಕ್ಕೆ 29 ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳನ್ನು ಹಿಂದಿರುಗಿಸಿದ ಆಸ್ಟ್ರೇಲಿಯಾ; ಪ್ರಧಾನಿ ಮೋದಿಯಿಂದ ಪರಿಶೀಲನೆ

Published On - 1:18 pm, Mon, 21 March 22