ಬೆಂಗಳೂರು, ಸೆಪ್ಟೆಂಬರ್ 2: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್ ಲ್ಯಾಂಡರ್’ ಅನ್ನು ಇಳಿಸುವ ಮೂಲಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿಯೇ ವಿಶೇಷ ಮೈಲಿಗಲ್ಲು ಸಾಧಿಸಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO). ಇದರ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 2) ‘ಆದಿತ್ಯ ಎಲ್-1 (Aditya L1)’ ಬಾಹ್ಯಾಕಾಶ ನೌಕೆಯ ಉಡಾವಣೆಯೂ ಯಶಸ್ವಿಯಾಗಿದೆ. ಇದು ಸೂರ್ಯನ ಸಂಶೋಧನೆಯ ನಿಟ್ಟಿನಲ್ಲಿ ಭಾರತದ ಮೊದಲ ಹೆಜ್ಜೆಯಾಗಿದೆ. ಈ ಬಾಹ್ಯಾಕಾಶ ನೌಕೆಯು ಸೂರ್ಯನ ಬಗೆಗಿನ ಹಲವು ವಿಷಯಗಳ ಅಧ್ಯಯನ ನಡೆಸಲಿದ್ದು, ಭೂಮಿಯಲ್ಲಿ ಜೀವನಕ್ಕೆ ಪೂರಕವಾದ ಸೂರ್ಯನ ಕಿರಣಗಳ ಬಗ್ಗೆಯೂ ಸಂಶೋಧನೆ ನಡೆಸಲಿದೆ.
ಇಸ್ರೋದ ಪ್ರಮಖ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಶಂಕರ ಸುಬ್ರಮಣಿಯನ್ ಕೆ ಈ ಯೋಜನೆಯ ನೇತೃತ್ವವಹಿಸಿಕೊಂಡಿದ್ದಾರೆ.
ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಪ್ರಮುಖ ವಿಜ್ಞಾನಿಗಳಲ್ಲಿ ಡಾ ಶಂಕರ ಸುಬ್ರಮಣಿಯನ್ ಕೆ ಒಬ್ಬರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಪಿಹೆಚ್ಡಿ ಪದವಿಯನ್ನು ಪಡೆದುಕೊಂಡರು. ಸಂಶೋಧನಾ ಕ್ಷೇತ್ರದಲ್ಲಿ ಸೋಲಾರ್ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಹಾಗೂ ಇನ್ಸ್ಟ್ರುಮೆಂಟೇಶನ್ ಇವರ ಆಸಕ್ತಿ ವಿಷಯಗಳಾಗಿವೆ.
ಇವರು ‘ಚಂದ್ರಯಾನ-1’, ‘ಚಂದ್ರಯಾನ -2’ ಹಾಗೂ ‘ಆಸ್ಟ್ರೋಸ್ಯಾಟ್’ ಉಪಗ್ರಹಗಳಿಗೆ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಇವರು ಯುಆರ್ ರಾವ್ ಉಪಗ್ರಹ ಕೇಂದ್ರದ ಸ್ಪೇಸ್ ಆಸ್ಟ್ರೋನಾಮಿ ಗ್ರೂಪ್ (ಎಸ್ಎಜಿ) ನ ಮುಖ್ಯಸ್ಥರೂ ಆಗಿದ್ದಾರೆ. ಆದಿತ್ಯ ಎಲ್1 ಮಿಷನ್ನ ಪೇಲೋಡ್ ಅನ್ನು ಎಸ್ಎಜಿ ಅಭಿವೃದ್ಧಿಪಡಿಸಿತ್ತು ಎಂಬುದು ಗಮನಾರ್ಹ. ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಇವರ ನೇತೃತ್ವದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಎಕ್ಸ್ಪೊಸ್ಯಾಟ್ ಪೇಲೋಡ್ ಅಭಿವೃದ್ಧಿಪಡಿಸುವಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ
ಶಂಕರ ಸುಬ್ರಮಣಿಯನ್ ಅವರು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ಎಕ್ಸ್ ರೇ ಪೇಲೋಡ್ನ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್ ಕೂಡಾ ಹೌದು. ಅಷ್ಟೇ ಅಲ್ಲದೆ ಸೌರ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ಪ್ರಮುಖ ಭಾರತೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡ ‘ಆದಿತ್ಯ ಎಲ್-1 ಸೈನ್ಸ್ ವರ್ಕಿಂಗ್ ಗ್ರೂಪ್’ನ ಮುಖ್ಯಸ್ಥರೂ ಆಗಿದ್ದಾರೆ.
ಆದಿತ್ಯ ಎಲ್ -1 ಮಿಷನ್ ಸೂರ್ಯನ ಅಧ್ಯಯನಕ್ಕೆ ತೆರಳಿದ ಮೊಟ್ಟ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದರಲ್ಲಿ 7 ಬಗೆಯ ಪೇಲೋಡ್ಗಳಿವೆ. ಇವು ಕ್ರೋಮೊಸ್ಪೇರ್, ಫೋಟೋಸ್ಪೇರ್ ಹಾಗೂ ಸೂರ್ಯನ ಹೊರ ಮೇಲ್ಮೈ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿವೆ. ಇವುಗಳು ಸೂರ್ಯನಲ್ಲಿಗೆ ತೆರಳುವುದಿಲ್ಲ, ಬದಲಾಗಿ ಸೂರ್ಯನ ಸುತ್ತ ಇರುವ ಎಲ್ -1 ಹ್ಯಾಲೋ ಆರ್ಬಿಟ್ನಿಂದ ಸೂರ್ಯನ ಅಧ್ಯಯನ ಮಾಡುತ್ತವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ