ಬಂಗಾಳದಲ್ಲಿ ಬಾಬರಿ ಮಸೀದಿ ವಿವಾದದ ಬೆನ್ನಲ್ಲೇ ಅಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಟಿಎಂಸಿಯ ಉಚ್ಚಾಟಿತ ಶಾಸಕ ಮುರ್ಷಿದಾಬಾದ್ನಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ದಿನಾಂಕದಂದೇ ಬಂಗಾಳದಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದೀಗ ಬಂಗಾಳದಲ್ಲಿ ಅಯೋಧ್ಯಾ ಶೈಲಿಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಕೊಲ್ಕತ್ತಾ, ಡಿಸೆಂಬರ್ 12: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾಳದಲ್ಲಿ ದೇವಾಲಯ-ಮಸೀದಿ ರಾಜಕೀಯ ಭುಗಿಲೆದ್ದಿದೆ. ಗುರುವಾರ ಸಾಲ್ಟ್ ಲೇಕ್ನಲ್ಲಿ ಅಯೋಧ್ಯಾ ಶೈಲಿಯ ರಾಮ ಮಂದಿರ (Ram Temple) ಸಂಕೀರ್ಣದ ಯೋಜನೆಗಳನ್ನು ಘೋಷಿಸುವ ಪೋಸ್ಟರ್ಗಳು ಕಾಣಿಸಿಕೊಂಡವು. ಇದರಲ್ಲಿ ಶಾಲೆ, ಆಸ್ಪತ್ರೆ, ವೃದ್ಧಾಶ್ರಮ ಮತ್ತು ಇತರ ಕಲ್ಯಾಣ ಸೌಲಭ್ಯಗಳು ಇರಲಿವೆ. ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸ್ಥಳೀಯ ಬಿಜೆಪಿ ನಾಯಕ ಮತ್ತು ಮಾಜಿ ಸ್ಥಳೀಯ ಘಟಕದ ಅಧ್ಯಕ್ಷ ಸಂಜಯ್ ಪೊಯ್ರಾ ಅವರ ಹೆಸರಲ್ಲಿರುವ ಪೋಸ್ಟರ್ಗಳು ಸಿಟಿ ಸೆಂಟರ್, ಕರುಣಾಮೊಯಿ ಮತ್ತು ಬಿಧಾನ್ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. 4 ಬಿಘಾಗಳ ಜಮೀನಿನಲ್ಲಿ “ಅಯೋಧ್ಯಾ ರಾಮಮಂದಿರದ ರಚನೆಯನ್ನು ಹೋಲುವ” ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಯೋಜನೆಗೆ ತಲಾ 1 ರೂ. ದೇಣಿಗೆ ನೀಡುವಂತೆ ನಿವಾಸಿಗಳನ್ನು ಕೋರಲಾಗಿದೆ.
ಇದನ್ನೂ ಓದಿ: ಬಾಬರಿ ಮಸೀದಿಗೆ ಶಿಲಾನ್ಯಾಸ ಮಾಡಿದ ಟಿಎಂಸಿ ಶಾಸಕ; ಮತ್ತೆ ಭುಗಿಲೆದ್ದ ಹೊಸ ವಿವಾದ
1992ರ ಬಾಬರಿ ಮಸೀದಿಯ ಧ್ವಂಸದ ವಾರ್ಷಿಕೋತ್ಸವದಂದು ಡಿಸೆಂಬರ್ 6ರಂದು ಮುರ್ಷಿದಾಬಾದ್ನ ರೆಜಿನಗರದಲ್ಲಿ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಅಭೂತಪೂರ್ವ ಭದ್ರತೆಯಲ್ಲಿ ಬಾಬರಿ ಮಸೀದಿ ಶೈಲಿಯ ಮಸೀದಿಗೆ ಅಡಿಪಾಯ ಹಾಕಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ರಾಮನ ರಾಜ್ಯವು ರಾಮನ ದೇವಾಲಯವನ್ನು ಹೊಂದಿರಬೇಕು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವಂತೆಯೇ ಬಿಧಾನ್ನಗರದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಘೋಷಿಸಲಾಗಿದೆ. “ನಾವು ಈಗಾಗಲೇ ರಾಮ ಮಂದಿರಕ್ಕೆ ಭೂಮಿಯನ್ನು ಗುರುತಿಸಿದ್ದೇವೆ, ಆದರೆ ಈಗಲೇ ಆ ಸ್ಥಳವನ್ನು ಬಹಿರಂಗಪಡಿಸುವುದಿಲ್ಲ. ನಾವು ಅದನ್ನು ಬಹಿರಂಗಪಡಿಸಿದರೆ ಅಡೆತಡೆಗಳು ಸೃಷ್ಟಿಯಾಗುತ್ತವೆ. ಹಲವು ಜನರು ಭೂಮಿ ದಾನ ಮಾಡಲು ಮುಂದೆ ಬಂದಿದ್ದಾರೆ. ಹಲವರು ನಿರ್ಮಾಣ ಸಾಮಗ್ರಿಗಳನ್ನು ಪೂರೈಸಲು ಮುಂದೆ ಬಂದಿದ್ದಾರೆ ಮತ್ತು ಕೆಲವರು ವಿಗ್ರಹಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ” ಎಂದು ರಾಮ ಮಂದಿರದ ನಿರ್ಮಾಣಕ್ಕೆ ಮುಂದಾಗಿರುವವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಸಮಾರಂಭವು ಮಾರ್ಚ್ 26ರಂದು ರಾಮ ನವಮಿಯಂದು ನಡೆಯಲಿದೆ. ಪ್ರಸ್ತಾವಿತ ಸಂಕೀರ್ಣವು ಬಡವರಿಗೆ ಆಸ್ಪತ್ರೆ, ಶಾಲೆ, ಮಹಿಳಾ ಶಿಕ್ಷಣ ಸೌಲಭ್ಯಗಳು, ವೃದ್ಧಾಶ್ರಮ ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಹೊಂದಿರುತ್ತದೆ. ರಾಮ ದೇವಾಲಯದ ಜೊತೆಗೆ ರೋಗಿಗಳಿಗೆ ಆರೋಗ್ಯ ರಕ್ಷಣೆ, ಮಕ್ಕಳಿಗಾಗಿ ಶಾಲೆ, ವೃದ್ಧಾಶ್ರಮ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳು ಇರುತ್ತವೆ. ಇದು ಕೇವಲ ದೇವಾಲಯವಾಗುವುದಿಲ್ಲ, ಇದು ಸೇವಾ ಕೇಂದ್ರವಾಗಿರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Fri, 12 December 25




