ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವಾಗ ಕಾಲು ಮುರಿದುಕೊಂಡ ವಕೀಲ!

ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ತನ್ನ ಕಕ್ಷಿದಾರ ಜೊತೆ ಆ ಯುವತಿಯ ಒಪ್ಪಂದಕ್ಕೆ ಒಪ್ಪಿಸುವಾಗ ಆಕೆಯ ಮೇಲೆ ವಕೀಲನೊಬ್ಬ ಹಲ್ಲೆ ನಡೆಸಿದ್ದಾನೆ. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತನ್ನ ಕಾಲು ಮುರಿದುಕೊಂಡಿದ್ದಾನೆ. ಜಿತೇಂದ್ರ ಸಿಂಗ್ ಅತ್ಯಾಚಾರಕ್ಕೊಳಗಾದ ಯುವತಿಯ ವಿರುದ್ಧ ವಾದಿಸುತ್ತಿದ್ದರು. ರಾಜಿ ಮಾತುಕತೆ ನಡೆಸುವ ನೆಪದಲ್ಲಿ ಆಕೆಯನ್ನು ಕರೆಸಿ, ಹಲ್ಲೆ ನಡೆಸಿ ತಾನು ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವಾಗ ಕಾಲು ಮುರಿದುಕೊಂಡ ವಕೀಲ!
physical Assault

Updated on: Nov 10, 2025 | 3:54 PM

ಆಗ್ರಾ, ನವೆಂಬರ್ 10: ಉತ್ತರ ಪ್ರದೇಶದ (Uttar Pradesh) ಆಗ್ರಾದ ಹೋಟೆಲ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆಗ್ರಾದ ವಕೀಲನೊಬ್ಬನನ್ನು ಬಂಧಿಸಲಾಗಿದೆ. ಪೊಲೀಸರಿಗೆ ವಿಷಯ ತಿಳಿದು ದಾಳಿ ನಡೆಸಿದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಟೆರೇಸ್ ಹಾರಿ ಹೋಗುವಾಗ ಜಿತೇಂದ್ರ ಸಿಂಗ್ ಎಂಬ ಆರೋಪಿಯ ಕಾಲಿನ ಮೂಳೆ ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2022ರ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗಾಗಿ ಆಗ್ರಾಕ್ಕೆ ಬಂದಿದ್ದ ಔರೈಯಾದ 24 ವರ್ಷದ ಯುವತಿ ಜಿತೇಂದ್ರ ಸಿಂಗ್ ಎಂಬ ವಕೀಲರ ವಿರುದ್ಧ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಜಿತೇಂದ್ರ ಸಿಂಗ್ ಅವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಹಾಗೂ ತನ್ನ ಕಕ್ಷಿದಾರರಾದ ಆರೋಪಿಯ ನಡುವೆ ಈ ವಿಷಯದ ಇತ್ಯರ್ಥದ ಬಗ್ಗೆ ಚರ್ಚಿಸುವ ನೆಪದಲ್ಲಿ ಆಕೆಗೆ ಕರೆ ಮಾಡಿದ್ದರು. ಬಳಿಕ ಆಕೆಯನ್ನು ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆದಿದೆ.

ಇದನ್ನೂ ಓದಿ: 40 ವರ್ಷದ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ, ಸಹಕರಿಸದಿದ್ದಾಗ ಕೊಲೆ

ಆ ಯುವತಿ ಹೋಟೆಲ್​ಗೆ ಹೋಗುವಾಗ ಆ ವಕೀಲ ತನಗೆ ಮದ್ಯ ನೀಡಿರುವುದಾಗಿ ಆರೋಪಿಸಿದ್ದಾರೆ. ಹೋಟೆಲ್ ಕೋಣೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಕೆ ಹೇಳಿದ್ದಾರೆ. ಆಕೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಯಿತು. ಅವರ ನಿವಾಸದ ಮೇಲೆ ನಡೆದ ದಾಳಿಯ ಸಮಯದಲ್ಲಿ ಜಿತೇಂದ್ರ ಸಿಂಗ್ ಪಕ್ಕದ ಟೆರೇಸ್‌ಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದಾಗಿ ಅವರ ಕಾಲು ಮುರಿದಿದೆ. ಮುಂದಿನ ಕಾನೂನು ಕ್ರಮಗಳು ಪ್ರಾರಂಭವಾಗುವ ಮೊದಲು ಅವರನ್ನು ಬಂಧಿಸಲಾಯಿತು ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ