CBDC ಆಧಾರಿತ DBTಗೆ ಚಾಲನೆ: ಪ್ರಲ್ಹಾದ್ ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್

Shivraj Singh Chouhan praises Pralhad Joshi during launch of CBDC based DBT system for PMGKAY: ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನಭವಿಗಳಿಗೆ ಡಿಜಿಟಲ್ ಕರೆನ್ಸಿ ಆಧಾರಿತ ಡಿಬಿಟಿ ಮೂಲಕ ಹಣ ವರ್ಗಾವಣೆಯ ವ್ಯವಸ್ಥೆ ರೂಪಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಇದರ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಶ್ಲಾಘಿಸಿದ್ದಾರೆ.

CBDC ಆಧಾರಿತ DBTಗೆ ಚಾಲನೆ: ಪ್ರಲ್ಹಾದ್ ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Image Credit source: x user @Indian_Analyzer

Updated on: Aug 14, 2026 | 6:21 PM

ಚಂಡೀಗಡ, ಆಗಸ್ಟ್ 14: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಅಡಿಯಲ್ಲಿ ಬಡ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯ ತಲುಪಿಸಲು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC – Digital Rupee) ಆಧಾರಿತ ‘ನೇರ ನಗದು ವರ್ಗಾವಣೆ’ (Direct Benefit Transfer – DBT) ವ್ಯವಸ್ಥೆಗೆ ಚಂಡೀಗಢದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಕೃತಿ ವಿಕೋಪಗಳು ಮತ್ತು ತಾಂತ್ರಿಕ ಸವಾಲುಗಳ ನಡುವೆಯೂ ಆಹಾರ ಧಾನ್ಯಗಳ ವಿತರಣೆ ಮತ್ತು ಆಹಾರ ಭದ್ರತೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿರುವ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವ ಹಾಗೂ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನಾಯಕತ್ವದ ಉಪಸ್ಥಿತಿ: ಚಂಡೀಗಢದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮದಲ್ಲಿ ಪಂಜಾಬ್ ರಾಜ್ಯಪಾಲರು ಹಾಗೂ ಚಂಡೀಗಢದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಭಾಗವಹಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ

ಬಡವರ ಕಲ್ಯಾಣಕ್ಕೆ ತಂತ್ರಜ್ಞಾನ: ಪ್ರಲ್ಹಾದ್ ಜೋಶಿ

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ ಅವರು, ಕೇಂದ್ರ ಸರ್ಕಾರವು ದೇಶದ ಬಡ ಮತ್ತು ಅಗತ್ಯವಿರುವ ಜನರಿಗೆ ಉಚಿತ ಪಡಿತರ ಹಾಗೂ ಸೌಲಭ್ಯ ಒದಗಿಸಲು ವಾರ್ಷಿಕವಾಗಿ ₹2.10 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿಸುತ್ತಿದೆ ಎಂದು ತಿಳಿಸಿದರು.

ಶಿವರಾಜ್ ಸಿಂಗ್ ಚೌಹಾಣ್ ಭಾಷಣ ಮಾಡುತ್ತಿರುವುದು

CBDC ಆಧಾರಿತ DBT ವ್ಯವಸ್ಥೆ ಎಂದರೇನು?

  • ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ತಡೆ: ಸರ್ಕಾರಿ ಯೋಜನೆಗಳ ಸೌಲಭ್ಯಗಳು ನೇರವಾಗಿ ಬಡ ಫಲಾನುಭವಿಗಳನ್ನು ತಲುಪಲು ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪ ಅಥವಾ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈ ‘ಡಿಜಿಟಲ್ ರೂಪಾಯಿ’ (e₹) ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
  • ಮೊದಲ ಕೇಂದ್ರಾಡಳಿತ ಪ್ರದೇಶಗಳು: ಚಂಡೀಗಢ ಹಾಗೂ ದಾದ್ರಾ ಮತ್ತು ನಾಗರ್ ಹವೇಲಿ ಪ್ರದೇಶಗಳು PMGKAY ಫಲಾನುಭವಿಗಳಿಗೆ ಪಡಿತರ ಸಬ್ಸಿಡಿಯನ್ನು CBDC ವಾಲೆಟ್‌ಗಳ ಮೂಲಕ ಡಿಜಿಟಲ್ ರೂಪಾಯಿ ಟೋಕನ್ ರೂಪದಲ್ಲಿ ನೇರವಾಗಿ ತಲುಪಿಸುತ್ತಿರುವ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶಗಳಾಗಿವೆ.
  • ನಿರ್ದಿಷ್ಟ ಬಳಕೆಯ ನಿಯಮ (Programmable Tokens): ಈ ಯೋಜನೆಯಡಿ ಲಭಿಸುವ ಡಿಜಿಟಲ್ ರೂಪಾಯಿಯನ್ನು ಫಲಾನುಭವಿಗಳು ಅಧಿಕೃತ ಪಡಿತರ ಅಂಗಡಿ ಅಥವಾ ವರ್ತಕರಲ್ಲಿ (Empanelled Merchants) QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡಿತರ ಧಾನ್ಯಗಳನ್ನು ಖರೀದಿಸಲು ಮಾತ್ರ ಬಳಸಬಹುದು. ಇದರಿಂದ ಸರ್ಕಾರದ ಹಣ ದುರುಪಯೋಗವಾಗುವುದು ತಪ್ಪುತ್ತದೆ.

ಇದನ್ನೂ ಓದಿ: ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ

ಗುಜರಾತ್ ಮತ್ತು ಪುದುಚೇರಿಗಳಲ್ಲಿ ಯಶಸ್ವಿಯಾಗಿ ನಡೆದ ಪ್ರಾಯೋಗಿಕ ಪರೀಕ್ಷೆಯ (Pilot implementation) ನಂತರ, ಈಗ ಈ ತಂತ್ರಜ್ಞಾನ ಆಧಾರಿತ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us