ಮಹಾಯುತಿಯಲ್ಲಿ ಎಲ್ಲವೂ ಚೆನ್ನಾಗಿದೆ, ಊಹಾಪೋಹಗಳು ಆಧಾರರಹಿತ: ಅಜಿತ್ ಪವಾರ್

|

Updated on: Oct 11, 2024 | 9:21 PM

ಕ್ಯಾಬಿನೆಟ್ ಸಭೆಯಿಂದ ಬೇಗನೆ ನಿರ್ಗಮಿಸಿದ ನಂತರ ಪವಾರ್ "ನಿಗದಿತ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿತ್ತು...ಎಲ್ಲಾ ಕ್ಯಾಬಿನೆಟ್ ನಿರ್ಧಾರಗಳಿಗೆ ನನ್ನ ಅನುಮೋದನೆ ಇತ್ತು"."ಯಾವುದೇ ಇಲಾಖೆಯ ಆಕ್ಷೇಪಣೆಗಳನ್ನು ಕ್ಯಾಬಿನೆಟ್ ತಳ್ಳಿಹಾಕಬಹುದು" ಎಂದು ಹೇಳಿದ್ದಾರೆ.  ಈ ಹಿಂದೆ, ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ವಿವಿಧ ಪ್ರಸ್ತಾಪಗಳ ಕುರಿತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವಾಕ್ ತರ್ಕ ನಂತರ ಈ ವಾಕ್‌ಔಟ್ ನಡೆದಿದೆ ಎಂದು ವರದಿಯಾಗಿತ್ತು.

ಮಹಾಯುತಿಯಲ್ಲಿ ಎಲ್ಲವೂ ಚೆನ್ನಾಗಿದೆ, ಊಹಾಪೋಹಗಳು ಆಧಾರರಹಿತ: ಅಜಿತ್ ಪವಾರ್
ಅಜಿತ್ ಪವಾರ್
Follow us on

ಮುಂಬೈ ಅಕ್ಟೋಬರ್ 11: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಮಹಾಯುತಿ ಮೈತ್ರಿಯಲ್ಲಿ “ಎಲ್ಲಾ ಚೆನ್ನಾಗಿದೆ” ಎಂದು ಹೇಳುವ ಮೂಲಕ ಆಡಳಿತ ಬಣದಲ್ಲಿ ತೊಂದರೆ ಉಂಟಾಗಬಹುದು ಎಂಬ ಊಹಾಪೋಹಗಳಿಗೆ ಶುಕ್ರವಾರ ತೆರೆ ಎಳೆದಿದ್ದಾರೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯೂ ಆಗಿರುವ ಪವಾರ್ ಅವರು ರಾಜ್ಯ ಚುನಾವಣೆಗೆ ಮುನ್ನ ಕಳೆದ ರಾಜ್ಯ ಕ್ಯಾಬಿನೆಟ್ ಸಭೆಯಿಂದ ಹಠಾತ್ತನೆ ನಿರ್ಗಮಿಸಿದ ನಂತರ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮುರಿಯಬಹುದು ಎಂಬ ವದಂತಿಗಳು ಹಬ್ಬಿದ್ದವು.

ಕೇವಲ ಹತ್ತು ನಿಮಿಷಗಳ ನಂತರ ಅಜಿತ್ ಪವಾರ್ ಅವರು ಕ್ಯಾಬಿನೆಟ್ ಸಭೆಯಿಂದ ಬೇಗನೆ ನಿರ್ಗಮಿಸಿದ್ದು ಚರ್ಚೆಗೀಡಾಗಿತ್ತು. ಶುಕ್ರವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಪವಾರ್,ಎಲ್ಲವೂ ಚೆನ್ನಾಗಿದೆ, ಮಹಾರಾಷ್ಟ್ರ ಕ್ಯಾಬಿನೆಟ್ ಸಭೆಯಲ್ಲಿ ವಿವಾದದ ಬಗ್ಗೆ ಊಹಾಪೋಹಗಳು ಆಧಾರರಹಿತವಾಗಿವೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಕ್ಯಾಬಿನೆಟ್ ಸಭೆಯಿಂದ ಬೇಗನೆ ನಿರ್ಗಮಿಸಿದ ನಂತರ ಪವಾರ್ “ನಿಗದಿತ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿತ್ತು…ಎಲ್ಲಾ ಕ್ಯಾಬಿನೆಟ್ ನಿರ್ಧಾರಗಳಿಗೆ ನನ್ನ ಅನುಮೋದನೆ ಇತ್ತು”.”ಯಾವುದೇ ಇಲಾಖೆಯ ಆಕ್ಷೇಪಣೆಗಳನ್ನು ಕ್ಯಾಬಿನೆಟ್ ತಳ್ಳಿಹಾಕಬಹುದು” ಎಂದು ಹೇಳಿದ್ದಾರೆ.
ಈ ಹಿಂದೆ, ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ವಿವಿಧ ಪ್ರಸ್ತಾಪಗಳ ಕುರಿತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವಾಕ್ ತರ್ಕ ನಂತರ ಈ ವಾಕ್‌ಔಟ್ ನಡೆದಿದೆ ಎಂದು ವರದಿಯಾಗಿತ್ತು.

ಅಜಿತ್ ಪವಾರ್ ಜುಲೈ 2023 ರಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಸೇರಲು ಶರದ್ ಪವಾರ್ ಅವರ ಎನ್‌ಸಿಪಿಯಿಂದ ಬೇರ್ಪಟ್ಟಾಗ ಸುದ್ದಿಯಾಗಿದ್ದರು.

ಅಜಿತ್ ಪವಾರ್ ಅವರೊಂದಿಗಿನ ಬಿಜೆಪಿಯ ಮೈತ್ರಿಯು ಪಕ್ಷದ ಇಮೇಜ್ ಮತ್ತು ಚುನಾವಣಾ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಆಂತರಿಕವಾಗಿ ಟೀಕಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಒಕ್ಕೂಟವು ಗಮನಾರ್ಹ ನಷ್ಟವನ್ನು ಅನುಭವಿಸಿದ್ದು ಮಹಾರಾಷ್ಟ್ರದಲ್ಲಿ 48 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಮಾತ್ರ ಗೆದ್ದಿತು.

ಅಜಿತ್ ಪವಾರ್ ಅವರ ಬಣದೊಂದಿಗೆ ತಮ್ಮ ಪಾಲುದಾರಿಕೆಯ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ಹಲವಾರು ಮಾಧ್ಯಮ ವರದಿಗಳು ಸೂಚಿಸಿವೆ. ಆರ್‌ಎಸ್‌ಎಸ್-ಸಂಬಂಧಿತ ಮರಾಠಿ ವಾರಪತ್ರಿಕೆಯಲ್ಲಿನ ಲೇಖನವು ಈ ಮೈತ್ರಿಯನ್ನು ಟೀಕಿಸಿದ್ದು “ರಾಜಕೀಯ ಪ್ರಮಾದ” ಎಂದಿದೆ.

ಅಜಿತ್ ಪವಾರ್ ಜೊತೆಗಿನ ಹೊಂದಾಣಿಕೆಯು ತಮ್ಮ ಚುನಾವಣಾ ಭವಿಷ್ಯವನ್ನು ಹಾಳುಮಾಡಿದೆ ಮಾತ್ರವಲ್ಲದೆ ಭ್ರಷ್ಟಾಚಾರದ ವಿರುದ್ಧದ ಅವರ ನಿಲುವನ್ನು ದುರ್ಬಲಗೊಳಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಅಜಿತ್ ಪವಾರ್ ಅವರು ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಖ್ಯಾತ ನಟ ಸಯಾಜಿ ಶಿಂಧೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆ

ಪ್ರಸ್ತುತ ಜಾಮೀನಿನಲ್ಲಿರುವ ಮಾಜಿ ಎನ್‌ಸಿಪಿ ಸಚಿವ ನವಾಬ್ ಮಲಿಕ್ ಅವರೊಂದಿಗೆ ಅಜಿತ್ ಪವಾರ್ ಅವರು ಇತ್ತೀಚಿನ ಸಾರ್ವಜನಿಕ ಸಂವಾದಗಳು ಬಿಜೆಪಿಯೊಳಗೆ ಅಚ್ಚರಿ ಮೂಡಿಸಿವೆ. ಈ ಅನಿರೀಕ್ಷಿತ ಸೌಹಾರ್ದತೆಯು ಅವರು ಶರದ್ ಪವಾರ್ ಅವರ ಎನ್‌ಸಿಪಿಗೆ ಹತ್ತಿರವಾಗಬಹುದೆಂಬ ಊಹಾಪೋಹಗಳಿಗೆ ಉತ್ತೇಜನ ನೀಡಿತು.  ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವನ್ನು ಒಳಗೊಂಡಿರುವ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಇತ್ತೀಚಿನ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಅದೇ ವೇಳೆ ಮಹಾಯುತಿಯ 17 ಕ್ಕೆ ಹೋಲಿಸಿದರೆ 48 ಲೋಕಸಭಾ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ