ಹಿಂದಿ ಹೇರಿಕೆಯಿಲ್ಲ, ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ: ಅಮಿತ್ ಶಾ ಮಹತ್ವದ ಘೋಷಣೆ
ಅಮಿತ್ ಶಾ ಅವರು ಹಿಂದಿ ಹೇರಿಕೆ ಆರೋಪಗಳನ್ನು ರಾಜ್ಯಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಡಿಸೆಂಬರ್ನಿಂದ ರಾಜ್ಯಗಳೊಂದಿಗೆ, ಜನರೊಂದಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ ನಡೆಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅವರು, ಕರ್ನಾಟಕದ ಜತೆ ಕನ್ನಡದಲ್ಲಿ ಹಾಗೂ ಇತರ ರಾಜ್ಯಗಳ ಜತೆ ಆಯಾ ರಾಜ್ಯಗಳ ಭಾಷೆಯಲ್ಲೇ ಪತ್ರ ವ್ಯವಹಾರ ನಡೆಸಲಿದ್ದಾರೆ.

ಬೆಂಗಳೂರು, ಮಾರ್ಚ್ 22: ಹಿಂದಿ ಹೇರಿಕೆ (Hindi Imposition) ಮಾಡಲಾಗುತ್ತಿದೆ ಎಂದು ಆರೋಪಿಸುವವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ರಾಜ್ಯಸಭೆಯಲ್ಲಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡಬಾರದು ಎಂದ ಅವರು, ಪ್ರಾದೇಶಿಕ ಭಾಷೆಗಳ (Regional Languages) ಉತ್ತೇಜನಕ್ಕಾಗಿ ಡಿಸೆಂಬರ್ನಿಂದ ರಾಜ್ಯಗಳ ಜತೆ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಪತ್ರ ವ್ಯವಹಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ, ಕರ್ನಾಟಕ ಸರ್ಕಾರದ (Karnataka) ಜತೆ ಕನ್ನಡದಲ್ಲಿ (Kannada), ತಮಿಳುನಾಡು ಸರ್ಕಾರದ ಜತೆ ತಮಿಳು ಹಾಗೂ ಇತರ ರಾಜ್ಯಗಳ ಜತೆ ಅಲ್ಲಿನ ಭಾಷೆಯಲ್ಲೇ ಅಮಿತ್ ಶಾ ಪತ್ರ ವ್ಯವಹಾರ ನಡೆಯಲಿದೆ.
ಅಮಿತ್ ಶಾ ಹೇಳಿದ್ದೇನು?
ಡಿಸೆಂಬರ್ ನಂತರ ನಾಗರಿಕರು, ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸತ್ ಸದಸ್ಯರೊಂದಿಗೆ ಅವರದೇ ಭಾಷೆಯಲ್ಲಿ ಪತ್ರವ್ಯವಹಾರ ಮಾಡುತ್ತೇನೆ. ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಇದು ಬಲವಾದ ಪ್ರತ್ಯುತ್ತರವಾಗಿದೆ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧಿಸುತ್ತದೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಅಮಿತ್ ಶಾ, ‘ಅವರು ಏನು ಹೇಳುತ್ತಿದ್ದಾರೆ? ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತೇವೆಯೇ? ಇದು ಹೇಗೆ ಸಾಧ್ಯ? ನಾನು ಗುಜರಾತ್ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ವಿರೋಧಿಸಬಹುದು’ ಎಂದು ಪ್ರಶ್ನಿಸಿದರು.
ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವವರು ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬಿಡಬಾರದು. ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ತಮಿಳು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಅಸ್ಸಾಮಿ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಿಗಾಗಿ ‘ಭಾರತೀಯ ಅಧಿಕೃತ ಭಾಷಾ ಇಲಾಖೆ’ಯನ್ನು ಸ್ಥಾಪಿಸಿದೆ ಎಂದು ಶಾ ಹೇಳಿದರು.
ಹಿಂದಿ, ಪ್ರಾದೇಶಿಕ ಭಾಷೆಗಳು ಒಡನಾಡಿಗಳು: ಅಮಿತ್ ಶಾ
ಹಿಂದಿ ಯಾವುದೇ ಪ್ರಾದೇಶಿಕ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ. ಅದರ ಬದಲಿಗೆ, ಹಿಂದಿಯು ಭಾಷಾ ಸಾಮರಸ್ಯವನ್ನು ಬೆಳೆಸುತ್ತದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳಿಗೆ ಒಡನಾಡಿಯಾಗಿದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸುತ್ತದೆ ಮತ್ತು ಎಲ್ಲಾ ಭಾರತೀಯ ಭಾಷೆಗಳು ಹಿಂದಿಯನ್ನು ಬಲಪಡಿಸುತ್ತವೆ. ಇಲ್ಲಿ ಭಾಷೆಗಳ ನಡುವೆ ಕೊಡು ಕೊಳ್ಳುವಿಕೆ ಇದೆ ಎಂದ ಅವರು, ಭಾರತದ ಭಾಷಾ ವೈವಿಧ್ಯತೆಯನ್ನು ಬಲಪಡಿಸುವಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವಿನ ಪರಸ್ಪರ ಸಂಬಂಧವನ್ನು ಒತ್ತಿ ಹೇಳಿದರು.
ತಮಿಳುನಾಡು ಸರ್ಕಾರದ ವಿರುದ್ಧ ವಾಗ್ದಾಳಿ
ಭ್ರಷ್ಟಾಚಾರ ಮರೆಮಾಚಲು ಭಾಷೆಯನ್ನು ದಾಳವಾಗಿ ಬಳಸುವವರ ಬಂಡವಾಳವನ್ನು ಹಳ್ಳಿ ಹಳ್ಳಿಗೆ ತೆರಳಿ ಬಯಲಿಗೆಳೆಯುತ್ತೇವೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು. ನಿಮಗೆ (ಡಿಎಂಕೆ) ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳನ್ನು ತಮಿಳು ಭಾಷೆಗೆ ಭಾಷಾಂತರಿಸಲು ಧೈರ್ಯವಿಲ್ಲ ಎಂದೂ ಹೇಳಿದರು. ಜತೆಗೆ, ನಾವು ಸರ್ಕಾರ ರಚಿಸಿದಾಗ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳನ್ನು ತಮಿಳು ಭಾಷೆಗೆ ಭಾಷಾಂತರಿಸುತ್ತೇವೆ ಎಂದೂ ಹೇಳಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಉಂಟಾಗುವ ಸಾವು ಶೇ. 70 ಕಡಿಮೆಯಾಗಿದೆ; ರಾಜ್ಯಸಭೆಯಲ್ಲಿ ಅಮಿತ್ ಶಾ
‘ಭಾಷೆಯ ಹೆಸರಿನಲ್ಲಿ ವಿಷ ಹರಡುವವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ; ನೀವು ಸಾವಿರಾರು ಕಿಲೋಮೀಟರ್ ದೂರದ ಭಾಷೆಗಳನ್ನು ಇಷ್ಟಪಡುತ್ತೀರಿ, ಆದರೆ ನಿಮಗೆ ಭಾರತದ ಭಾಷೆ ಇಷ್ಟವಾಗುವುದಿಲ್ಲ’ ಎಂದು ಅಮಿತ್ ಶಾ ಕುಟುಕಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Sat, 22 March 25