
ಕಡಪ, ಜುಲೈ 22: ಆ್ಯಂಬುಲೆನ್ಸ್ ಚಾಲಕ ಮಾಡಿದ ಹೇಯ ಕೃತ್ಯ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯನ್ನು ಮನೆಗೆ ಕರೆದೊಯ್ಯುವಾಗ ಆಕೆಯಿಂದ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕದ್ದ ಘಟನೆ ಬೆಳಕಿಗೆ ಬಂದಿದೆ. ಕಡಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಂತರ, ಆಕೆಯ ಶವವನ್ನು ಆ್ಯಂಬುಲೆನ್ಸ್ನಲ್ಲಿ (Ambulance) ಮನೆಗೆ ಕರೆದೊಯ್ಯುತ್ತಿದ್ದಾಗ, ಚಾಲಕ ವಾಹನವನ್ನು ಅರ್ಧದಾರಿಯಲ್ಲೇ ನಿಲ್ಲಿಸಿ ಈ ಕೃತ್ಯ ಎಸಗಿದ್ದಾನೆ.
ಕುತಂತ್ರದಿಂದ ನಡೆಸಿದ ಕಳವು:
ಮಾರ್ಗಮಧ್ಯದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ ಮೃತರ ಮಗನಿಗೆ ಕುಡಿಯುವ ನೀರಿನ ಬಾಟಲಿ ತೆಗೆದುಕೊಂಡು ಬರುವಂತೆ ಹೇಳಿ ಕೆಳಗಿಳಿಸಿದನು. ಮಗ ಕೆಳಗಿಳಿದ ತಕ್ಷಣವೇ, ಆ್ಯಂಬುಲೆನ್ಸ್ನಲ್ಲಿದ್ದ ಮೃತ ಮಹಿಳೆಯ ಕೈಯಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ತೆಗೆದುಕೊಂಡಿದ್ದಾನೆ. ನಂತರ ಯಾವುದೇ ಅನುಮಾನ ಬರದಂತೆ ಆ ಮೃತದೇಹವನ್ನು ಅವರ ಮನೆಗೆ ತಲುಪಿಸಿ ಅಲ್ಲಿಂದ ಕಾಲ್ಕಿತ್ತಿದ್ದ.
ಪೊಲೀಸರ ತನಿಖೆ ಹಾಗೂ ಬಂಧನ:
ಆ ಮನೆಯಲ್ಲಿ ಮೃತದೇಹದ ಅಂತಿಮ ಸಂಸ್ಕಾರದ ಸಿದ್ಧತೆ ವೇಳೆ ಕೈಯಲ್ಲಿದ್ದ ಚಿನ್ನದ ಬಳೆ ನಾಪತ್ತೆಯಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಸಂಶಯಗೊಂಡ ಅವರು ತಕ್ಷಣವೇ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ಫೂಟೇಜ್ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಆ್ಯಂಬುಲೆನ್ಸ್ ಚಾಲಕನೇ ಈ ಕೃತ್ಯ ಎಸಗಿದ್ದಾನೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕಡಪದ ಬಿಲ್ಡಪ್ ಸರ್ಕಲ್ ಸಮೀಪ ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನಿಂದ ಕಳವು ಮಾಡಲಾಗಿದ್ದ ಚಿನ್ನದ ಬಳೆಯನ್ನು ವಶಪಡಿಸಿಕೊಂಡಿದ್ದಾರೆ. ಸೇವೆಯ ಹೆಸರಿನಲ್ಲಿ ಮೃತದೇಹದ ಮೇಲಿದ್ದ ಆಭರಣವನ್ನೇ ಕದ್ದ ಚಾಲಕನ ಈ ಕೃತ್ಯ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ