ಹರ್ಯಾಣದ ನುಹ್​​ನಲ್ಲಿ ಮೂರನೇ ದಿನವೂ ಬುಲ್ಡೋಜರ್ ಕ್ರಮ; 2 ಡಜನ್ ಮೆಡಿಕಲ್ ಸ್ಟೋರ್‌ಗಳು ನೆಲಸಮ

|

Updated on: Aug 05, 2023 | 1:54 PM

Nuh Violence: ಬುಲ್ಡೋಜರ್ ಕಾರ್ಯಾಚರಣೆ ದಿನವಿಡೀ ವಿವಿಧ ಸ್ಥಳಗಳಲ್ಲಿ ಮುಂದುವರೆದಿದ್ದು, ಜಿಲ್ಲಾಡಳಿತದ ತಂಡಗಳು ಸ್ಥಳದಲ್ಲಿಯೇ ಇದ್ದವು. ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವರು ಇಲ್ಲಿಂದ ಪಲಾಯನ ಮಾಡಿದ್ದಾರೆ.

ಹರ್ಯಾಣದ ನುಹ್​​ನಲ್ಲಿ ಮೂರನೇ ದಿನವೂ ಬುಲ್ಡೋಜರ್ ಕ್ರಮ; 2 ಡಜನ್ ಮೆಡಿಕಲ್ ಸ್ಟೋರ್‌ಗಳು ನೆಲಸಮ
ನುಹ್​​ನಲ್ಲಿ ಅಂಗಡಿಗಳನ್ನು ನೆಲಸಮ ಮಾಡುತ್ತಿರುವ ಬುಲ್ಡೋಜರ್
Follow us on

ದೆಹಲಿ ಆಗಸ್ಟ್ 05: ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಕೆಡವುವ ಹರ್ಯಾಣ (Haryana) ನುಹ್ (Nuh) ಜಿಲ್ಲಾಡಳಿತದ ಕ್ರಮ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ ಸುಮಾರು ಎರಡು ಡಜನ್ ಮೆಡಿಕಲ್ ಸ್ಟೋರ್‌ಗಳು ಮತ್ತು ಇತರ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿದ್ದ ವಲಸಿಗರ ಗುಡಿಸಲುಗಳನ್ನು ಗುರುವಾರ ಸಂಜೆ ನೆಲಸಮಗೊಳಿಸಲಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ನಲ್ಹಾರ್‌ನ ಶಾಹೀದ್ ಹಸನ್ ಖಾನ್ ಮೇವಾಟಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯ ದ್ವಾರದ ಎದುರಿನ ಸುಮಾರು ಎರಡು ಡಜನ್ ಅಂಗಡಿಗಳನ್ನು, ಹೆಚ್ಚಾಗಿ ಮೆಡಿಕಲ್ ಸ್ಟೋರ್​​ಗಳನ್ನು ಕೆಡವಲು ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದೆ. ಈ ಅಂಗಡಿಗಳು ಹಲವು ವರ್ಷಗಳಿಂದ ಇವೆ.

ಬುಲ್ಡೋಜರ್ ಕಾರ್ಯಾಚರಣೆ ದಿನವಿಡೀ ವಿವಿಧ ಸ್ಥಳಗಳಲ್ಲಿ ಮುಂದುವರೆದಿದ್ದು, ಜಿಲ್ಲಾಡಳಿತದ ತಂಡಗಳು ಸ್ಥಳದಲ್ಲಿಯೇ ಇದ್ದವು. ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವರು ಇಲ್ಲಿಂದ ಪಲಾಯನ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯುವ ಯತ್ನದ ಘರ್ಷಣೆಯ ನಂತರ ನುಹ್‌ನಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಗುರುಗ್ರಾಮದಲ್ಲಿ ಹಿಂಸಾಚಾರ ಹರಡಿದ್ದು, ಇಬ್ಬರು ಹೋಮ್ ಗಾರ್ಡ್ ಹಾಗೂ ಓರ್ವ ಇಮಾಮ್ ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ.


ಕಳೆದ ಹಲವು ವರ್ಷಗಳಿಂದ ತೆರವಿಗೆ ಸಾಧ್ಯವಾಗದೇ ಇದ್ದ ಆ ಎಲ್ಲ ಅಕ್ರಮ ಒತ್ತುವರಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಶಾಸಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಅಫ್ತಾಬ್ ಅಹ್ಮದ್ ಈ ಕ್ರಮವನ್ನು ವಿರೋಧಿಸಿದ್ದಾರೆ.

ನುಹ್‌ನಲ್ಲಿ ಬಡವರ ಮನೆಗಳಷ್ಟೇ ಅಲ್ಲ, ಜನಸಾಮಾನ್ಯರ ನಂಬಿಕೆ, ವಿಶ್ವಾಸವೂ ನಾಶವಾಗುತ್ತಿದೆ. ಹಿಂದಿನ ದಿನ ನೋಟಿಸ್ ನೀಡಿ ಇಂದು ಮನೆ, ಅಂಗಡಿಗಳನ್ನು ಕೆಡವಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಒಂದು ತಿಂಗಳ ಅವಧಿಯ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ, ಇದು ದಮನಕಾರಿ ನೀತಿಯಾಗಿದೆ ಎಂದು ಅಫ್ತಾಬ್ ಅಹ್ಮದ್ ವಿಡಿಯೊ ಟ್ವೀಟ್ ಮಾಡಿದ್ದಾರೆ.

ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ. 80 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹರ್ಯಾಮ ಗೃಹ ಸಚಿವ ಅನಿಲ್ ವಿಜ್ ಶುಕ್ರವಾರ ಹೇಳಿದ್ದಾರೆ.

ಇದನ್ನೂ ಓದಿ: ವಾರಣಾಸಿ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಪುನರಾರಂಭಿಸಿದ ಎಎಸ್ಐ

ಗುಡ್ಡಗಳಿಂದ ಗುಂಡು ಹಾರಿಸಿರುವುದು ಮತ್ತು ಕಟ್ಟಡಗಳ ಮೇಲ್ಛಾವಣಿಯಲ್ಲಿ ಸಂಗ್ರಹಿಸಲಾದ ಕಲ್ಲುಗಳು ನುಹ್ ಹಿಂಸಾಚಾರವನ್ನು ಮೊದಲೇ ಯೋಜಿಸಲಾಗಿದೆ ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ, ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 102 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂದು ಅನಿಲ್ ವಿಜ್ ಆರೋಪಿಸಿದ್ದಾರೆ. ಆದಾಗ್ಯೂ, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನುಹ್ ಪೊಲೀಸ್ ಅಧೀಕ್ಷಕರು ಘರ್ಷಣೆಯ ಹಿಂದೆ ಯಾವುದೇ ಮಾಸ್ಟರ್‌ಮೈಂಡ್‌ನ ಸುಳಿವು ಸಿಕ್ಕಿಲ್ಲ ಎಂದು ಹೇಳಿದರು. ನುಹ್ ಪೊಲೀಸ್ ಅಧೀಕ್ಷಕ ನರೇಂದ್ರ ಸಿಂಗ್ ಬಿಜಾರ್ನಿಯಾ ಮಾತನಾಡಿ, ಇದುವರೆಗಿನ ತನಿಖೆಯು ವಿಭಿನ್ನ ಅಂಶಗಳ ಒಳಗೊಳ್ಳುವಿಕೆಯನ್ನು ಸೂಚಿಸಿದೆ, ಅವುಗಳನ್ನು ಗುರುತಿಸಿ ಬಂಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Sat, 5 August 23