ಅಸ್ಸಾಂ: ಕತ್ತಿನಲ್ಲಿ ದೊಡ್ಡ ಟೈಯರ್ ಸಿಲುಕಿ ಪರದಾಡಿದ ಕಾಡಾನೆ; ಯಶಸ್ವಿ ರಕ್ಷಣಾ ಕಾರ್ಯಾಚರಣೆ

ಅಸ್ಸಾಂನ ಗೋಲಾಘಾಟ್‌ನಲ್ಲಿ ಕಾಡಾನೆಯೊಂದರ ಕತ್ತಿಗೆ ಭಾರೀ ಟೈರ್ ಸಿಲುಕಿ ತೀವ್ರ ತೊಂದರೆಯಲ್ಲಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಆನೆಯ ಸ್ಥಿತಿ ಆತಂಕ ಸೃಷ್ಟಿಸಿದೆ. ಶಾಸಕ ಮೃಣಾಳ್ ಸೈಕಿಯಾ ಅರಣ್ಯ ಇಲಾಖೆಗೆ ಕರೆ ಮಾಡಿ ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಚಿಕಿತ್ಸೆಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಆನೆಯಿಂದ ದೂರವಿಟ್ಟು, ರಕ್ಷಣಾ ಕಾರ್ಯಕ್ಕೆ ಸಹಕರಿಸಲು ಕೋರಲಾಗಿದೆ.

ಅಸ್ಸಾಂ: ಕತ್ತಿನಲ್ಲಿ ದೊಡ್ಡ ಟೈಯರ್ ಸಿಲುಕಿ ಪರದಾಡಿದ ಕಾಡಾನೆ; ಯಶಸ್ವಿ ರಕ್ಷಣಾ ಕಾರ್ಯಾಚರಣೆ
, ಕಾಡಾನೆ ರಕ್ಷಣೆ
Image Credit source: social Media

Updated on: Sep 11, 2026 | 11:56 AM

ಅಸ್ಸಾಂ, ಸೆ.11: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಮೊರೊಂಗಿಯ ಬಕಿಯಾಲ್ ಪ್ರದೇಶದಲ್ಲಿ ಕಾಡಾನೆಯೊಂದರ ಕತ್ತಿನಲ್ಲಿ ಬೃಹತ್ ಆಕಾರದ ಟೈಯರ್ (Heavy Tyre) ಬಿಗಿಯಾಗಿ ಸಿಲುಕಿಕೊಂಡಿದ್ದು, ಆನೆಯು ತೀವ್ರ ತೊಂದರೆ ಮತ್ತು ಅಸಹಾಯಕತೆಯಿಂದ ಅಲೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕತ್ತಿಗೆ ಬಿಗಿದುಕೊಂಡಿರುವ ಭಾರವಾದ ಟೈಯರ್‌ನಿಂದಾಗಿ ಆನೆಗೆ ತೀವ್ರ ಕಿರಿಕಿರಿ ಹಾಗೂ ಉಸಿರಾಟದ ತೊಂದರೆಯುಂಟಾಗುತ್ತಿತ್ತು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ಆ ಆನೆಯನ್ನು ರಕ್ಷಣೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಖುಮ್ತಾಯ್ ಕ್ಷೇತ್ರದ ಬಿಜೆಪಿ ಶಾಸಕ ಮೃಣಾಲ್ ಸೈಕಿಯಾ ಅವರು ತಕ್ಷಣವೇ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಕಾಡಾನೆಯ ಕತ್ತಿನಲ್ಲಿ ಸಿಲುಕಿರುವ ಟೈಯರ್ ಅನ್ನು ಸುರಕ್ಷಿತವಾಗಿ ತೆಗೆದು, ಆನೆಗೆ ತುರ್ತು ಚಿಕಿತ್ಸೆ ನೀಡಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ (Rescue Operation) ಆರಂಭಿಸುವಂತೆ ವಿನಂತಿ ಮಾಡಿದ್ದರು. ಆನೆಯು ಗಾಬರಿಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಶಾಂತತೆ ಕಾಯ್ದುಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದರು

ಇದನ್ನೂ ಓದಿ: Video: ನಿಂತಲ್ಲೇ ನಿದ್ದೆಗೆ ಜಾರಿದ ಮರಿಯಾನೆ, ಮುಂದೇನಾಯ್ತು ನೋಡಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಆನೆಯ ಬಳಿ ಗುಂಪುಗೂಡುವುದು, ಜೋರಾಗಿ ಸದ್ದು ಮಾಡುವುದು ಅಥವಾ ಅದನ್ನು ಕೆರಳಿಸುವ ಕೆಲಸವನ್ನು ಯಾರೂ ಮಾಡಬಾರದು. ಆನೆಯಿಂದ ಸೂಕ್ತ ಅಂತರ ಕಾಯ್ದುಕೊಳ್ಳಬೇಕು. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಣಾ ಪಡೆಗೆ ಯಾವುದೇ ಅಡ್ಡಿಪಡಿಸದೇ, ಕಾರ್ಯಾಚರಣೆಯನ್ನು ಸರಾಗವಾಗಿ ನಡೆಸಲು ಸಹಕರಿಸಬೇಕು ಎಂದು ಕೋರಿದ್ದರು.

ಅರಣ್ಯ ಇಲಾಖೆಯ ರಕ್ಷಣಾ ಕಾರ್ಯಾಚರಣೆ ಯಶಸ್ವಿ:

ಕಾಡಾನೆಯನ್ನು ಅಸ್ಸಾಂ ಅರಣ್ಯ ಇಲಾಖೆಯ ವನ್ಯಜೀವಿ ರಕ್ಷಣಾ ಪಡೆ ಅತ್ಯಂತ ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ರಕ್ಷಿಸಿದೆ. ಆನೆಯ ಕತ್ತಿನಲ್ಲಿದ್ದ ಟೈಯರ್ ಅನ್ನು ತೆರವುಗೊಳಿಸಲಾಗಿದ್ದು, ಆನೆಯು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಅರಣ್ಯ ಇಲಾಖೆಯ ತ್ವರಿತ ಹಾಗೂ ಸಕಾಲಿಕ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಪ್ರಾಣಾಪಾಯದಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಈ ಕಾಡಾನೆ ಇದೀಗ ಸುಲಭವಾಗಿ ತನ್ನ ಹಿಂಡನ್ನು ಸೇರಿಕೊಂಡು, ಎಂದಿನಂತೆ ತನ್ನ ಸ್ವಚ್ಛಂದ ಜೀವನಕ್ಕೆ ಮರಳಲಿದೆ. ವನ್ಯಜೀವಿಗಳ ಬಗ್ಗೆ ನಮಗಿರುವ ಕರುಣೆ, ರಕ್ಷಣೆ ಮತ್ತು ತಕ್ಷಣದ ಸೂಕ್ತ ಸ್ಪಂದನೆ ಎಷ್ಟು ಅಗತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ಮತ್ತು ಪ್ರಾಣಿಗಳ ಪ್ರತಿ ಕಾಳಜಿ ವಹಿಸುವುದು ಅಸ್ಸಾಂನ ಜವಾಬ್ದಾರಿಯಾಗಿದೆ.” ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.

ಜನವಸತಿ ಪ್ರದೇಶಗಳಲ್ಲಿ ಹಾಗೂ ಅರಣ್ಯದಂಚಿನಲ್ಲಿ ಮಾನವ ಬಿಸಾಡುವ ಪ್ಲಾಸ್ಟಿಕ್, ಟೈಯರ್ ಸೇರಿದಂತೆ ಅಪಾಯಕಾರಿ ತ್ಯಾಜ್ಯಗಳಿಂದ ವನ್ಯಜೀವಿಗಳಿಗೆ ಎಂತಹ ಗಂಭೀರ ಅಪಾಯ ಎದುರಾಗುತ್ತದೆ ಎಂಬುದಕ್ಕೆ ಈ ಘಟನೆ ಹಿಡಿದ ಕನ್ನಡಿಯಾಗಿದೆ. ಆನೆಯ ಕತ್ತಿನಲ್ಲಿ ಟೈಯರ್ ಸುದೀರ್ಘ ಅವಧಿಯವರೆಗೆ ಸಿಲುಕಿಕೊಂಡಿದ್ದರೆ, ಅದು ಆನೆಯ ಚಲನವಲನವನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತಿತ್ತು. ಅಷ್ಟೇ ಅಲ್ಲದೆ, ಕತ್ತಿನ ಭಾಗದಲ್ಲಿ ತೀವ್ರ ಗಾಯಗಳಾಗಿ ಪ್ರಾಣಕ್ಕೇ ಕಂಟಕವಾಗುವ ಸಾಧ್ಯತೆಯಿತ್ತು ಎಂದು ವನ್ಯಜೀವಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Fri, 11 September 26

Loading...
Unable to load recommendations.
Follow Us