ತಮ್ಮನ್ನು ಮನೆಗೆ ಊಟಕ್ಕೆ ಕರೆದ ಆಟೋ ಚಾಲಕ ಮೋದಿ ಅಭಿಮಾನಿ ಎಂದು ತಿಳಿದು ಮುಜುಗರಕ್ಕೀಡಾದ ಅರವಿಂದ್ ಕೇಜ್ರಿವಾಲ್

| Updated By: ಸುಷ್ಮಾ ಚಕ್ರೆ

Updated on: Oct 01, 2022 | 2:01 PM

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದ ಆಟೋ ಚಾಲಕ ವಿಕ್ರಮ್ ದಾತಾನಿ ಮೋದಿ ಅಭಿಮಾನಿಯಾಗಿದ್ದಾರೆ.

ತಮ್ಮನ್ನು ಮನೆಗೆ ಊಟಕ್ಕೆ ಕರೆದ ಆಟೋ ಚಾಲಕ ಮೋದಿ ಅಭಿಮಾನಿ ಎಂದು ತಿಳಿದು ಮುಜುಗರಕ್ಕೀಡಾದ ಅರವಿಂದ್ ಕೇಜ್ರಿವಾಲ್
ಆಟೋ ಚಾಲಕನ ಮನೆಯಲ್ಲಿ ಕೇಜ್ರಿವಾಲ್ ಊಟ
Follow us on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಆಟೋ ಚಾಲಕರೊಬ್ಬರು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಅವರ ಮನೆಗೆ ಹೋಗಿ ಅವರೊಂದಿಗೆ ಕುಳಿತು ಅರವಿಂದ್ ಕೇಜ್ರಿವಾಲ್ ಊಟ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ, ಆತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಭಿಮಾನಿ ಎಂಬುದು ನಂತರ ಗೊತ್ತಾಗಿದೆ. ಇದರಿಂದ ಅರವಿಂದ್ ಕೇಜ್ರಿವಾಲ್ ಮುಜುಗರಕ್ಕೀಡಾಗಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದ ಆಟೋ ಚಾಲಕ ವಿಕ್ರಮ್ ದಾತಾನಿ ಮೋದಿ ಅಭಿಮಾನಿಯಾಗಿದ್ದಾರೆ. ಮೂಲಗಳ ಪ್ರಕಾರ, ಈ ವ್ಯಕ್ತಿ ಬಿಜೆಪಿ ಟೋಪಿ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಆಗಮಿಸಿದ್ದರು. “ನಾನು ಬಾಲ್ಯದಿಂದಲೂ ಮೋದಿ ಅವರ ಅಭಿಮಾನಿ. ನಮ್ಮ ಒಕ್ಕೂಟದ ಆದೇಶದ ಮೇರೆಗೆ ನಾನು ಅರವಿಂದ್ ಕೇಜ್ರಿವಾಲ್ ಅವರನ್ನು ನನ್ನ ಮನೆಗೆ ಆಹ್ವಾನಿಸಬೇಕಾಯಿತು” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Watch:ಗುಜರಾತ್​​ಗೆ ಕೇಜ್ರಿವಾಲ್​​ ಆಗಮಿಸಿದಾಗ ಮೊಳಗಿದ ಮೋದಿ ಜೈಕಾರ, ದೆಹಲಿ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಅರವಿಂದ್ ಕೇಜ್ರಿವಾಲ್ ದಾತಾನಿಯ ಮನೆಗೆ ಹೋಗಿದ್ದಾಗ, ಆತ ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದರು. ಆದರೆ, ಅವರು ಪ್ರಧಾನಿ ಮೋದಿಯ ರ್ಯಾಲಿಯಲ್ಲಿ ಭಾಗವಹಿಸಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ತಾವು ಮೋದಿಯ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಆಮ್ ಆದ್ಮಿ ಪಕ್ಷದ ಪ್ರಚಾರದ ಭಾಗವಾಗಿ 2 ದಿನಗಳ ಗುಜರಾತ್ ಪ್ರವಾಸದಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನಿನ್ನೆ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಂ ದಾಂತಾನಿ ಎಂಬ ಆಟೋ ರಿಕ್ಷಾ ಚಾಲಕ ಕೇಜ್ರಿವಾಲ್ ಅವರಿಗೆ ತಮ್ಮ ಮನೆಯಲ್ಲಿ ರಾತ್ರಿ ಊಟ ಮಾಡುವಂತೆ ಮನವಿ ಮಾಡಿದ್ದರು. ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ? ಎಂದು ಕೇಳಿದ್ದರು. ಆದ್ದರಿಂದ ಕೇಜ್ರಿವಾಲ್ ಆತನ ಮನೆಗೆ ಊಟಕ್ಕೆ ಹೋಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ