ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ; ಹಿಮದಡಿ ಸಿಲುಕಿ ನಾಪತ್ತೆಯಾಗಿರುವ ಭಾರತೀಯ ಸೇನೆಯ ಏಳು ಯೋಧರು

2021ರ ಅಕ್ಟೋಬರ್​ನಲ್ಲಿ ಉತ್ತರಾಖಂಡ್​ನ ತ್ರಿಶೂಲ್​ ಪರ್ವತದಲ್ಲಿ ಉಂಟಾದ ಹಿಮಪಾತಕ್ಕೆ ನೌಕಾಪಡೆಯ ಐವರು ಯೋಧರು ಮೃತರಾಗಿದ್ದರು. ನಂತರ ಅವರ ಮೃತದೇಹ ಪತ್ತೆಯಾಗಿತ್ತು.  

ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ; ಹಿಮದಡಿ ಸಿಲುಕಿ ನಾಪತ್ತೆಯಾಗಿರುವ ಭಾರತೀಯ ಸೇನೆಯ ಏಳು ಯೋಧರು
ಪ್ರಾತಿನಿಧಿಕ ಚಿತ್ರ
Edited By:

Updated on: Feb 07, 2022 | 5:25 PM

ಇಟಾನಗರ: ಅರುಣಾಚಲ ಪ್ರದೇಶದ ಅತ್ಯಂತ ಎತ್ತರ ವಲಯವಾದ ಕಾಮೆಂಗ್​​ನಲ್ಲಿ ಹಿಮಕುಸಿತ( Avalanche) ಉಂಟಾದ ಪರಿಣಾಮ ಸುಮಾರು ಏಳು ಮಂದಿ ಸೇನಾ ಸಿಬ್ಬಂದಿ ಅದರಡಿಯಲ್ಲಿ ಸಿಲುಕಿದ್ದಾರೆ. ಇಲ್ಲಿ ಭಾರತೀಯ ಸೇನಾ ಯೋಧರು ಗಸ್ತು ತಿರುಗುತ್ತಿದ್ದರು. ಅವರ ಮೇಲೆ ಹಿಮ ಕುಸಿದು ಬಿದ್ದಿದೆ. ಅಲ್ಲಿದ್ದ ಏಳು ಮಂದಿ ಹಿಮದಡಿ ಸಮಾಧಿಯಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಈ ಘಟನೆ ನಿನ್ನೆಯೇ ನಡೆದಿದ್ದು, ನಾಪತ್ತೆಯಾದವರ ಹುಡುಕಾಟ, ರಕ್ಷಣಾ ಕಾರ್ಯಾಚರಣೆ ಇನ್ನೂ ಕೂಡ ನಡೆಯುತ್ತಲೇ ಇದೆ.   

ಕಳೆದ ಹಲವು ದಿನಗಳಿಂದಲೂ ಇಲ್ಲಿ ಹಿಮಪಾತ ಆಗುತ್ತಲೇ ಇತ್ತು. ಹಾಗಾಗಿ ಹವಾಮಾನ ಕೂಡ ಪ್ರತಿಕೂಲವಾಗಿತ್ತು. ಆದರೆ ಭಾನುವಾರ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಘಟನೆ ನಡೆಯುತ್ತಿದ್ದಂತೆ ಯೋಧರ ರಕ್ಷಣೆಗಾಗಿ ವಿಶೇಷ ತರಬೇತಿ ಪಡೆದ ಸೈನಿಕರ ತಂಡಗಳನ್ನು ಅಲ್ಲಿಗೆ ಕಳಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಈ ಗಡಿ ರಾಜ್ಯಗಳಲ್ಲಿ ಸೈನಿಕರು ಕೆಲಸ ನಿರ್ವಹಿಸುವುದು ಅತ್ಯಂತ ಕಷ್ಟ. ಸದಾ ಹಿಮಪಾತವಾಗುವ ಪ್ರದೇಶಗಳಲ್ಲಂತೂ ಅದೆಷ್ಟು ಯೋಧರು ಪ್ರಾಣ ಕಳೆದುಕೊಳ್ಳುತ್ತಾರೆ ಹೇಳಲು ಸಾಧ್ಯವಿಲ್ಲ. 2020ರ ಮೇ ತಿಂಗಳಲ್ಲಿ ಸಿಕ್ಕಿಂನಲ್ಲಿ ಹಿಮಪಾತವಾಗಿ ಇಬ್ಬರು ಯೋಧರು ಪ್ರಾಣಕಳೆದುಕೊಂಡಿದ್ದರು.  2021ರ ಅಕ್ಟೋಬರ್​ನಲ್ಲಿ ಉತ್ತರಾಖಂಡ್​ನ ತ್ರಿಶೂಲ್​ ಪರ್ವತದಲ್ಲಿ ಉಂಟಾದ ಹಿಮಪಾತಕ್ಕೆ ನೌಕಾಪಡೆಯ ಐವರು ಯೋಧರು ಮೃತರಾಗಿದ್ದರು. ನಂತರ ಅವರ ಮೃತದೇಹ ಪತ್ತೆಯಾಗಿತ್ತು.

ಇದನ್ನೂ ಓದಿ: ಮಾಲ್ಡೀವ್ ನಲ್ಲಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ

Published On - 2:40 pm, Mon, 7 February 22