ನೇಪಾಳಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಬಹ್ರೈಚ್ ಹಿಂಸಾಚಾರದ ಆರೋಪಿಗಳ ಎನ್​ಕೌಂಟರ್; ಇಬ್ಬರಿಗೂ ಗಾಯ

|

Updated on: Oct 17, 2024 | 4:28 PM

ಇಬ್ಬರು ಬಹ್ರೈಚ್ ಹಿಂಸಾಚಾರದ ಆರೋಪಿಗಳು ನೇಪಾಳಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಅವರ ಮೇಲೆ ಎನ್‌ಕೌಂಟರ್‌ನಲ್ಲಿ ಗುಂಡು ಹಾರಿಸಿದ್ದಾರೆ. ಇಬ್ಬರಿಗೂ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನೇಪಾಳಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಬಹ್ರೈಚ್ ಹಿಂಸಾಚಾರದ ಆರೋಪಿಗಳ ಎನ್​ಕೌಂಟರ್; ಇಬ್ಬರಿಗೂ ಗಾಯ
ಸರ್ಫರಾಜ್ ಮತ್ತು ಫಹೀಮ್
Follow us on

ನವದೆಹಲಿ: ಉತ್ತರ ಪ್ರದೇಶ ಪೊಲೀಸರು ಇಂದು ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಬಹ್ರೈಚ್ ಹಿಂಸಾಚಾರ ಪ್ರಕರಣದ ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳಾದ ಸರ್ಫರಾಜ್ ಅಲಿಯಾಸ್ ರಿಂಕು ಮತ್ತು ಫಾಹಿಮ್ ಅವರು ನೇಪಾಳಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಅಂತಾರಾಷ್ಟ್ರೀಯ ಗಡಿ ಬಳಿಯ ಹಂಡಾ ಬಸೆಹ್ರಿ ಕಾಲುವೆಯ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಗುಂಡು ಹಾರಿಸಲಾಗಿದೆ.

ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಇಬ್ಬರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತರು ಗಡಿ ದಾಟಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ.

ಅಕ್ಟೋಬರ್ 13ರಂದು ದುರ್ಗಾ ಪೂಜೆಯ ಮೆರವಣಿಗೆಯಲ್ಲಿ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಅವರನ್ನು ಕೊಂದ ಆರೋಪಿಗಳಾದ ಸರ್ಫರಾಜ್ ಮತ್ತು ಫಹೀಮ್ ನೇಪಾಳಕ್ಕೆ ಪರಾರಿಯಾಗುತ್ತಿದ್ದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಫರಾಜ್ ಮತ್ತು ಫಹೀಂ ಅವರ ಕಾಲಿಗೆ ಗಾಯವಾಗಿದೆ. ಇಬ್ಬರೂ ಬಹ್ರೈಚ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಹಮೀದ್ ಎಂಬಾತನ ಪುತ್ರರು. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿರುವ ಆರೋಪಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Bahraich violence: ಉತ್ತರ ಪ್ರದೇಶದ ಬಹ್ರೈಚ್​​ನಲ್ಲಿ ಹಿಂಸಾಚಾರ: ಇಂಟರ್ನೆಟ್ ಸ್ಥಗಿತ; ಆಸ್ಪತ್ರೆ, ಅಂಗಡಿಗಳಿಗೆ ಬೆಂಕಿ

ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ಭಾನುವಾರ ದುರ್ಗಾ ವಿಗ್ರಹ ನಿಮಜ್ಜನ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ನೂರಾರು ಜನರು ಪ್ರತಿಭಟನೆ ನಡೆಸಿದರು. ಈ ಮೆರವಣಿಗೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಿಶ್ರಾ ಸಾವಿಗೆ ಕಾರಣವಾಯಿತು ಮತ್ತು ಹಲವರು ಗಾಯಗೊಂಡರು.


ಬಹ್ರೈಚ್‌ನ ಮಹ್ಸಿ ಉಪವಿಭಾಗದ ಮೂಲಕ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದಾಗ ಘರ್ಷಣೆಗಳು ಭುಗಿಲೆದ್ದವು. ಇದಾದ ಎರಡು ದಿನಗಳ ನಂತರ, ರಾಮ್ ಗೋಪಾಲ್ ಮಿಶ್ರಾ ಅವರ ಕುಟುಂಬ ಸದಸ್ಯರು ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ಅವರೊಂದಿಗೆ ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ