ಬಾಂಗ್ಲಾದೇಶ ಸಂಸದರ ಹತ್ಯೆ ಪ್ರಕರಣ: ಬಂಗಾಳದ ಕಾಲುವೆಯಲ್ಲಿ ಮಾನವ ಮೂಳೆಗಳು ಪತ್ತೆ
ಬಾಂಗ್ಲಾದೇಶದ ಸಂಸದ ಅನ್ವರುಲ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಐಡಿಗೆ ಕಾಲುವೆಯೊಂದರಲ್ಲಿ ಮಾನವ ಮೂಳೆಗಳು ಸಿಕ್ಕಿವೆ. ಅನಾರ್ ದೇಹವನ್ನು 80 ತುಂಡುಗಳಾಗಿ ಕತ್ತರಿಸಿ ಕೆಲವು ತುಂಡುಗಳಿಗೆ ಅರಿಶಿಲ ಲೇಪಿಸಿ, ಕೋಲ್ಕತ್ತದ ನ್ಯೂ ಟೌನ್ನ ಸುತ್ತಮುತ್ತಲಿನ ಕಾಲುವೆ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಿದ್ದರು.
![ಬಾಂಗ್ಲಾದೇಶ ಸಂಸದರ ಹತ್ಯೆ ಪ್ರಕರಣ: ಬಂಗಾಳದ ಕಾಲುವೆಯಲ್ಲಿ ಮಾನವ ಮೂಳೆಗಳು ಪತ್ತೆ](https://images.tv9kannada.com/wp-content/uploads/2024/06/anwarul.jpg?w=1280)
ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್(Anwarul Azim Anar) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಗಾಳದ ದಕ್ಷಿಣ 24 ಪರಗಣದ ಕಾಲುವೆಯೊಂದರಿಂದ ಮಾನವ ಮೂಳೆಗಳನ್ನು ಸಿಐಡಿ ವಶಪಡಿಸಿಕೊಂಡಿದೆ. ಅನಾರ್ ದೇಹವನ್ನು 80 ತುಂಡುಗಳಾಗಿ ಕತ್ತರಿಸಿ ಕೆಲವು ತುಂಡುಗಳಿಗೆ ಅರಿಶಿನ ಲೇಪಿಸಿ, ಕೋಲ್ಕತ್ತದ ನ್ಯೂ ಟೌನ್ನ ಸುತ್ತಮುತ್ತಲಿನ ಕಾಲುವೆ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದರು.
ಫ್ಲಾಟ್ನ ಸೆಪ್ಟಿಕ್ ಟ್ಯಾಂಕ್ನಿಂದ ಹೊರ ತೆಗೆದಿದ್ದ ಮೃತದೇಹದ ತುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಸಿಯಾಮ್ ಹೊಸೈನ್ನ ವಿಚಾರಣೆ ನಡೆಸಿದ ಬಳಿಕ ತನಿಖಾ ಸಂಸ್ಥೆ ನಡೆಸಿದ ಹುಡುಕಾಟದಲ್ಲಿ ಮೂಳೆಗಳು ದೊರೆತಿವೆ.
ಬಾಂಗ್ಲಾದೇಶದ ಪ್ರಜೆ ಹೊಸೈನ್ ಎಂಬಾತನನ್ನು ಶುಕ್ರವಾರ (ಜೂನ್ 7) ಬಂಧಿಸಲಾಗಿದೆ. ಈ ಹಿಂದೆ ಬಾಂಗ್ಲಾದೇಶಿ ವಲಸಿಗ ಜಿಹಾದ್ ಹವ್ಲಾದರ್ ಎಂಬಾತನನ್ನು ಬಂಗಾಳ ಸಿಐಡಿ ಬಂಧಿಸಿದ ನಂತರ ಈತನನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿ ವಿಚಾರಣೆ ವೇಳೆ, ಬಾಂಗ್ಲಾದೇಶ ಸಂಸದನ ದೇಹದ ಭಾಗಗಳನ್ನು ಎಸೆದಿರುವ ನಿಖರವಾದ ಸ್ಥಳವನ್ನು ಸಿಯಾಮ್ ಹೊಸೈನ್ ಸಿಐಡಿಗೆ ಬಹಿರಂಗಪಡಿಸಿದ್ದಾರೆ.
ಮತ್ತಷ್ಟು ಓದಿ:ಕೋಲ್ಕತ್ತಾದಲ್ಲಿ ಬಾಂಗ್ಲಾ ಸಂಸದನ ಕೊಲೆ; ಮೃತದೇಹ ತುಂಡರಿಸಿ ವಿವಿಧ ಸ್ಥಳಗಳಲ್ಲಿ ಎಸೆದ ಹಂತಕರು
ಮಾಹಿತಿಯ ಆಧಾರದ ಮೇಲೆ, ತನಿಖಾ ಸಂಸ್ಥೆಯ ತಂಡವು ದಕ್ಷಿಣ 24 ಪರಗಣಗಳ ಭಂಗಾರ್ ಪ್ರದೇಶದ ಉತ್ತರ ಕಾಶಿಪುರದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಭಾಂಗಾರ್ನ ಕೃಷ್ಣಮತಿ ಗ್ರಾಮದ ಬಾಗ್ಜೋಳ ಕಾಲುವೆಯ ಆಗ್ನೇಯ ದಂಡೆಯಲ್ಲಿ ಪತ್ತೆಯಾಗಿದೆ. ಮೂಳೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಅನ್ವರುಲ್ ಅಜೀಂ ಅನಾರ್ ಅವರು ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದು ಮೇ 18ರಂದು ಕಾಣೆಯಾಗಿದ್ದರು, ಅವರ ಮೃತದೇಹ ಮೇ 22ರಂದು ಕೋಲ್ಕತ್ತಾದ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು, ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ಮಹಿಳೆಯೊಬ್ಬರು ಅನಾರ್ ಅವರನ್ನು ಮೇ 16ರಂದು ಕೋಲ್ಕತ್ತಾದ ನ್ಯೂ ಟೌನ್ ಫ್ಲಾಟ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಹಿಂದೆ ಇದ್ದ ಫ್ಲಾಟ್ಗೆ ವ್ಯಕ್ತಿಯೊಬ್ಬ ಹೋಗಿದ್ದ. ಮಾರನೇ ದಿನ ಅನಾರ್ ಅವರು ಹೊರಗೆ ಬರುವುದು ಸಿಸಿಟಿವಿಯಲ್ಲಿ ಕಂಡಿಲ್ಲ. ನಂತರ ಮಹಿಳೆ ಹಾಗೂ ಆ ವ್ಯಕ್ತಿ ದೊಡ್ಡ ಬ್ಯಾಗ್ ಸಮೇತ ಹೊರಗೆ ಬಂದಿರುವುದು ಕಂಡುಬಂದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ