ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 09, 2021 | 8:03 PM

West Bengal Elections 2021: ಪಶ್ಚಿಮಬಂಗಾಳದ ಎಡಪಕ್ಷ ನೇತೃತ್ವದ ಸರ್ಕಾರವು ಸಿಂಗೂರ್ ನಲ್ಲಿ 997 ಎಕರೆ ಭೂಸ್ವಾಧೀನ ಮಾಡಿದ್ದನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದರು.ಭೂಸ್ವಾಧೀನ ವಿರುದ್ಧದ ಈ ಹೋರಾಟವು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದಲ್ಲಿ ಹೊಸ ಶಖೆ ಪ್ರಾರಂಭವಾಗುವಂತೆ ಮಾಡಿದ್ದಲ್ಲದೆ 34 ವರ್ಷಗಳ ಎಡಪಕ್ಷದ ಆಡಳಿತಕ್ಕೆ ಕೊನೆ ಹಾಡಿತ್ತು.

ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ
ಮಮತಾ ಬ್ಯಾನರ್ಜಿ
Follow us on

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರವು ಮಹತ್ವ ಪಡೆದಿರುವಂತೆ ನಾಲ್ಕನೇ ಹಂತದ ಮತದಾನದಲ್ಲಿ ಸಿಂಗೂರ್ ವಿಧಾನಸಭಾ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸಲಿದೆ. ಭೂಸ್ವಾಧೀನ ವಿರುದ್ಧದ ಚಳವಳಿಯಿಂದಾಗಿ 2006ರಲ್ಲಿ ಸಿಂಗೂರ್ ದೇಶದ ಗಮನ ಸೆಳೆದಿತ್ತು. ವಿಶೇಷ ಎಂದರೆ ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬುದ್ದದೇಬ್ ಭಟ್ಟಚಾರ್ಜಿ ನೇತೃತ್ವದ ಎಡಪಕ್ಷ 294ಸೀಟುಗಳಿರುವ ವಿಧಾನಸಭೆಯಲ್ಲಿ 235 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಚುನಾವಣೆ ಗೆದ್ದಿದ್ದೇ ತಡ ಬುದ್ಧದೇಬ್ ಭಟ್ಟಾಚಾರ್ಜಿ ಮತ್ತು ರತನ್ ಟಾಟಾ 2006ರ ಮೇ 1ರಂದು ಸಿಂಗೂರ್ ನಲ್ಲಿ ನ್ಯಾನಾ ಕಾರೊ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ  ಘೋಷಣೆ ಮಾಡಿದರು. ಇದೇ ದಿನ ಬುದ್ಧದೇಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. ಸಿಂಗೂರ್​ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಸ್ವಾಧೀನ ಮಾಡಿದ್ದ ಸುಮಾರು 1,000 ಎಕರೆ ಜಮೀನಿನಲ್ಲಿ ನ್ಯಾನೊ ಕಾರು ಘಟಕ ಸ್ಥಾಪಿಸಲು ನಿರ್ಧಾರವಾಗಿತ್ತು.

ಚುನಾವಣಾ ವೇದಿಕೆಗಾಗಿ ಕಾಯುತ್ತಿದ್ದ ಮಮತಾ ಬ್ಯಾನರ್ಜಿ ಈ ಅವಕಾಶವನ್ನು ಬಳಸಿಕೊಂಡು ಭೂಸ್ವಾದೀನ ವಿರುದ್ಧ ಸಿಡಿದೆದ್ದರು, ನಂತರ ನಡೆದದ್ದು ಇತಿಹಾಸ. ಸಿಂಗೂರ್ ಚಳವಳಿ ಮಮತಾ ಬ್ಯಾನರ್ಜಿಯನ್ನು ರಾಜಕೀಯ ಹೋರಾಟದಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದಲ್ಲದೆ ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಕಾಲ ಅಧಿಕಾರ ನಡೆಸಿದ್ದ ಕಮ್ಯುನಿಸ್ಟ್ ಪಕ್ಷಕ್ಕೆ ದೊಡ್ಡ ಹೊಡತವನ್ನೇ ನೀಡಿತ್ತು. ಚಳವಳಿಯ ಪರಿಣಾಮ ಟಾಟಾ ಕಂಪನಿ ಪಶ್ಚಿಮ ಬಂಗಾಳದಿಂದ ಹಿಂದೆ ಸರಿಯಿತು. ಸಿಂಗೂರ್ ಚಳವಳಿ ನಂತರ ದೇಶದಲ್ಲಿನ ನೆಲದ ಕಾನೂನು ಕೂಡಾ ತಿದ್ದಲ್ಪಟ್ಟಿತು.

2011ರಿಂದ ತೃಣಮೂಲ ಕಾಂಗ್ರೆಸ್ (TMC) ಸಿಂಗೂರ್​ನಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಸಿಂಗೂರ್ ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಸಿಂಗೂರ್ ವಿಧಾನಸಭಾ ಕ್ಷೇತ್ರದಲ್ಲಿ ಬೆಚರಂ ಮನ್ನಾ (ಟಿಎಂಸಿ), ರಬೀಂದ್ರನಾಥ್ ಭಟ್ಟಾಚಾರ್ಯ( ಭಾರತೀಯ ಜನತಾ ಪಾರ್ಟಿ) ಮತ್ತು ಸೃಜನ್ ಭಟ್ಟಾಚಾರ್ಯ(ಸಿಪಿಐ-ಎಂ) ಕಣದಲ್ಲಿದ್ದಾರೆ.

ಬೆಚರಂ ಮುನ್ನಾ ಅವರು ಟಿಎಂಸಿ ಪಕ್ಷದ ಚಳವಳಿಯಲ್ಲಿ ಭಾಗವಹಿಸಿದ ಪ್ರಮುಖ ನಾಯಕರಾಗಿದ್ದಾರೆ. ರಬೀಂದ್ರ ನಾಥ್ ಭಟ್ಟಾಚಾರ್ಯ ಅವರು ಈ ಮೊದಲು ಟಿಎಂಸಿಯಲ್ಲಿದ್ದು, ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದೇ ಇದ್ದಾಗ  ಬಿಜೆಪಿ ಸೇರಿದ್ದರು.

2016ರ ವಿಧಾನಸಭೆ ಚುನಾವಣೆಯಲ್ಲಿ ಭಟ್ಟಾಚಾರ್ಯ ಅವರು ಟಿಎಂಸಿ ಪಕ್ಷದಿಂದ ಸಿಂಗೂರ್ ಗೆದ್ದಿದ್ದರು. ಅಲ್ಲಿ ಅವರಿಗೆ ಶೇ.49ರಷ್ಟು ಮತಗಳು ಲಭಿಸಿತ್ತು. ಅದೇ ವೇಳೆ ಎಡಪಕ್ಷದ ಅಭ್ಯರ್ಥಿ ರಬಿನ್ ದೇಬ್ ಶೇ 39 ಮತ್ತು ಬಿಜೆಪಿಯ ಸೌರನ್ ಪಾತ್ರಾ ಅವರಿಗೆ ಶೇ 7 ಮತಗಳು ಲಭಿಸಿತ್ತು.

ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಸಮೀಕರಣವು ಆಮೂಲಾಗ್ರವಾಗಿ ಬದಲಾಯಿತು. ಸಂಸದೀಯ ಕ್ಷೇತ್ರವನ್ನು ಗೆದ್ದ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಸಿಂಗೂರ್ ವಿಧಾನಸಭಾ ವಿಭಾಗದಲ್ಲಿ ಶೇ 47 ಮತಗಳನ್ನು ಗಳಿಸಿದರು. ಶೇ 42 ಮತಗಳೊಂದಿಗೆ, ಹಾಲಿ ಸಂಸದರೂ ಆಗಿದ್ದ ಟಿಎಂಸಿ ಅಭ್ಯರ್ಥಿ ರತ್ನ ದೇ ನಾಗ್ ಅವರಿಗೆ ಸಿಂಗೂರ್ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯುಂಟಾಗಿದ್ದು ಎಡಪಕ್ಷದ ಅಭ್ಯರ್ಥಿಯ ಮತಗಳ ಪಾಲು ಶೇ 9%ಕ್ಕೆ ಇಳಿದಿದೆ.

ಸಿಂಗೂರ್ ಕ್ಷೇತ್ರದ ಬಗ್ಗೆ ವಿಶ್ಲೇಷಿಸಿದ ಟಿವಿ 9 ಅಧ್ಯಯನ ತಂಡವು ಈ ಕೆಳಗಿನ ವಿಷಯಗಳನ್ನು  ಪಟ್ಟಿ ಮಾಡಿದೆ. ಇದರ ಪ್ರಕಾರ ಮುಸ್ಲಿಮರು ಜನಸಂಖ್ಯೆಯ ಶೇ11 ರಷ್ಟಿದ್ದು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು ಕ್ರಮವಾಗಿ ಶೇ16ಮತ್ತು ಶೇ 2 ರಷ್ಟಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಜಾದವ್‌ಪುರ ಸಾರ್ವಜನಿಕ ಮತ್ತು ರಾಜಕೀಯ ವೀಕ್ಷಕರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದ ಮತ್ತೊಂದು ಕ್ಷೇತ್ರವಾಗಿದೆ. ವಾಸ್ತವವಾಗಿ ದಕ್ಷಿಣ ಕೋಲ್ಕತ್ತಾದ ಒಂದು ಭಾಗವಾದ ಜಾದವ್‌ಪುರ್ ವಿಧಾನಸಭಾ ಕ್ಷೇತ್ರವು ಸಂಪೂರ್ಣವಾಗಿ ನಗರ ಮಧ್ಯಮ ವರ್ಗದ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಈ ಕ್ಷೇತ್ರದಲ್ಲಿ ಪ್ರಮುಖ ಅಭ್ಯರ್ಥಿ ಟಿಎಂಸಿಯ  ಮೊಲೊಯ್ ಮಜುಂದಾರ್, ಬಿಜೆಪಿಯ ರಿಂಕು ನಾಸ್ಕರ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್ ವಾದಿ) ಸುಜನ್ ಚಕ್ರವರ್ತಿ. ಚಕ್ರವರ್ತಿ ಈ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಜಾದವ್‌ಪುರವನ್ನು ಬಹುಕಾಲದಿಂದ ಎಡಪಕ್ಷಗಳ ಭದ್ರಕೋಟೆಯೆಂದು ಕರೆಯಲಾಗುತ್ತದೆ. 2016 ರಲ್ಲಿ ರಾಜ್ಯದಲ್ಲಿ ಎಡಪಕ್ಷಕ್ಕೆ ಹಿನ್ನಡೆಯುಂಟಾದಾಗಲೂ ಚಕ್ರವರ್ತಿ ಶೇ 48.5 ಮತಗಳೊಂದಿಗೆ ಈ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಈ ಪೈಪೋಟಿಯಲ್ಲಿ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿಎಂಸಿ ಅಭ್ಯರ್ಥಿ ಮನೀಶ್ ಗುಪ್ತಾ ಶೇ 41.2 ಮತಗಳನ್ನು ಗಳಿಸಿದ್ದು ಬಿಜೆಪಿ ಕೇವಲ ಶೇ 6.8 ಮತಗಳಿಸಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಜಾದವ್‌ಪುರ ವಿಧಾನಸಭಾ ಸ್ಥಾನದಲ್ಲಿ ಮುನ್ನಡೆ ಸಾಧಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿದ್ದ ನಟ ಮಿಮಿ ಚಕ್ರವರ್ತಿ ಅವರು ಶೇ 40.1 ಮತ ಗಳಿಸಿದ್ದು ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ಅವರಿಗೆ ಶೇ 24.2 ಮತ ಲಭಿಸಿತ್ತು.  ಭಟ್ಟಾಚಾರ್ಯ ಶೇ 34.1 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

ಬಿಜೆಪಿ ಅಭ್ಯರ್ಥಿ ರಿಂಕು ನಾಸ್ಕರ್ ಅವರು ಈ ಪ್ರದೇಶದ ಮಾಜಿ ಕೌನ್ಸಿಲರ್ ಆಗಿದ್ದು, 2010 ರಲ್ಲಿ ಕೋಲ್ಕತಾ ಮುನ್ಸಿಪಲ್ ಚುನಾವಣೆಯಲ್ಲಿ ಸಿಪಿಐ (ಎಂ) ಟಿಕೆಟ್‌ನಲ್ಲಿ ಗೆದ್ದಿದ್ದರು.ಜಾದವ್‌ಪುರದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಕಡಿಮೆ ಇದೆ. ಅಂದರೆ ಮುಸ್ಲಿಮರ ಪ್ರಮಾಣ ಶೇ 2.  ಆಗಿದ್ದು ಪರಿಶಿ ಷ್ಟ ಜಾತಿ ಜನಸಂಖ್ಯೆಯು ಶೇ 12 ರಷ್ಟಿದೆ.

ಟಾಲಿಗಂಜ್ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ಜಾದವ್‌ಪುರದಂತೆ, ಈ ಕ್ಷೇತ್ರವೂ ದಕ್ಷಿಣ ಕೋಲ್ಕತ್ತಾದಲ್ಲಿದೆ ಮತ್ತು ಸಂಪೂರ್ಣವಾಗಿ ನಗರ ಸ್ವರೂಪದಲ್ಲಿದೆ. ಬಿಜೆಪಿ ಈ ಕ್ಷೇತ್ರದಿಂದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರನ್ನು ಕಣಕ್ಕಿಳಿಸಿದರೆ, ಆಡಳಿತರೂಢ ಪಕ್ಷ ಅರೂಪ್ ಬಿಸ್ವಾಸ್ ಅವರನ್ನುಕಣಕ್ಕಿಳಿದೆ. ಬಿಸ್ವಾಸ್ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಲೋಕೋಪಯೋಗಿ ಉಸ್ತುವಾರಿ ಸಚಿವರಾಗಿದ್ದವರು. ಡೆಬ್ದುತ್ ಘೋಷ್ ಅವರು ಎಡಪಕ್ಷದ ಅಭ್ಯರ್ಥಿಯಾಗಿದ್ದಾರೆ.

2016 ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಅರೂಪ್ ಬಿಸ್ವಾಸ್ ಶೇ 46.7 ಮತಗಳನ್ನು ಗಳಿಸಿದರೆ, ಎಡಪಕ್ಷ  ಅಭ್ಯರ್ಥಿ ಮಧುಜಾ ಸೇನ್ ರಾಯ್ ಶೇ41.6 ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. ಬಿಜೆಪಿಯ ಎನ್ ಮೋಹನ್ ರಾವ್ ಕೇವಲ ಶೇ 7.7ಮತಗಳನ್ನು ಗಳಿಸಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 42 ರಲ್ಲಿ 18 ಸ್ಥಾನಗಳನ್ನು ಗೆದ್ದರೂ ಪರಿಸ್ಥಿತಿ ಬದಲಾಗಲಿಲ್ಲ. ಮಮತಾ ಬ್ಯಾನರ್ಜಿ ಅವರ ಪಕ್ಷದಿಂದ ಪಶ್ಚಿಮ ಬಂಗಾಳವನ್ನು ಕಸಿದುಕೊಳ್ಳುವ ಕನಸುಗಳನ್ನು ಬಿಜೆಪಿಯಲ್ಲಿತ್ತು. ಆ ವರ್ಷ ಟಿಎಂಸಿ ವಿಧಾನಸಭೆಯಲ್ಲಿ ಶೇ 42 ಮತಗಳನ್ನು ಗಳಿಸಿ ಅಧಿಕಾರಕ್ಕೇರಿತು. ಎಡಪಕ್ಷಕ್ಕೆ ಶೇ 32 ಮತಗಳು ಲಭಿಸಿದ್ದು ಬಿಜೆಪಿ ಶೇ 25 ಮತಗಳನ್ನು ಗಳಿಸಿತ್ತು. ಈ ಕ್ಷೇತ್ರದ ಜನಸಂಖ್ಯೆಯನ್ನು ನೋಡಿದರೆ ಇಲ್ಲಿ  ಮುಸ್ಲಿಮರು, ಎಸ್‌ಸಿ ಮತ್ತು ಪರಿಶಿಷ್ಟ ಪಂಗಡದವರು ಕ್ರಮವಾಗಿ ಶೇ.30, ಶೇ 3.8 ಮತ್ತುಶೇ 0.3ರಷ್ಟಿದ್ದಾರೆ.

ಹೂಗ್ಲಿ ಜಿಲ್ಲೆಯ ಚಂಡಿತಾಲ ವಿಧಾನಸಭಾ ಕ್ಷೇತ್ರವು ಮತ್ತೊಂದು ಪ್ರಮುಖ ಕ್ಷೇತ್ರವಾಗಿದ್ದು ಎಲ್ಲರೂ ಅಲ್ಲಿ ದೃಷ್ಟಿ ನೆಟ್ಟಿದ್ದಾರೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ನಟ ಯಶ್ ದಾಸ್‌ಗುಪ್ತಾ. ಟಿಎಂಸಿ ಅಭ್ಯರ್ಥಿ ಸ್ವಾತಿ ಖಂಡೋಕರ್ ಅವರು ದಿವಂಗತ ಟಿಎಂಸಿ ನಾಯಕ ಅಕ್ಬರ್ ಅಲಿ ಖಂಡೋಕರ್ ಅವರ ಪತ್ನಿ. ಈ ಸ್ಥಾನದಲ್ಲಿರುವ ಎಡಪಕ್ಷದ ಅಭ್ಯರ್ಥಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್‌ವಾದಿ) ಪೊಲಿಟ್‌ಬ್ಯುರೊ ಸದಸ್ಯ ಎಂ.ಡಿ ಸಲೀಂ. 2016 ರ ವಿಧಾನಸಭಾ ಚುನಾವಣೆಯಲ್ಲಿ ಸ್ವಾತಿ ಖಂಡೋಕರ್ ಶೇ 48 ಮತಗಳನ್ನು ಗಳಿಸಿ ಎಡಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರು. ಎಡ ಪಕ್ಷದ ಅಭ್ಯರ್ಥಿಗೆ ಶೇ 41% ಮತಗಳು ಲಭಿಸಿದ್ದು ಬಿಜೆಪಿ ಶೇ 7% ರಷ್ಟು ಮತಗಳಸಿ ತೃಪ್ತಿಪಡಬೇಕಾಗಿ ಬಂತು.

ಮೂರು ವರ್ಷಗಳ ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಈ ವಿಧಾನಸಭಾ ಕ್ಷೇತ್ರದಲ್ಲಿ ಶೇ 46ಮತಗಳನ್ನು ಗಳಿಸಿತು. ಅದೇ ವೇಳೆ ಬಿಜೆಪಿ ಶೇ 37 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎಡಪಕ್ಷದ ಅಭ್ಯರ್ಥಿಯು ಶೇ 1 ಮತಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ ಶೇಕಡಾ 3 ಮತಗಳನ್ನು ಗಳಿಸಿತು. ಚಂಡಿತಾಲ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 27.8ರಷ್ಟಿದ್ದು , ಪರಿಶಿಷ್ಟ ಜಾತಿ ಶೇ14.5 ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ 0.2% ರಷ್ಟಿದ್ದಾರೆ.

ಉತ್ತರ ಬಂಗಾಳ ಜಿಲ್ಲೆಯ ಕೂಚ್ ಬೆಹಾರ್‌ನ ದಿನ್ಹಾಟಾ ಕ್ಷೇತ್ರವು ಪ್ರಮುಖ ಅಭ್ಯರ್ಥಿಗಳನ್ನು ಹೊಂದಿರುವ ಮತ್ತೊಂದು ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕೂಚ್ ಬೆಹರ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಿಶಿತ್ ಪ್ರಮಾಣಿಕ್. ಟಿಎಂಸಿ ಅಭ್ಯರ್ಥಿ ಹಾಲಿ ಶಾಸಕ ಉದಯನ್ ಗುಹಾ ಮತ್ತು ಎಡಪಕ್ಷದ ಅಭ್ಯರ್ಥಿ ಅಬ್ದುರ್ ರವೂಫ್ ಕಣದಲ್ಲಿದ್ದಾರೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಗುಹಾ ಶೇ 45.1ಮತಗಳನ್ನು ಗಳಿಸಿದ್ದು ಎಡಪಕ್ಷ ಅಭ್ಯರ್ಥಿ ಶೇ 35.3 ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಬಿಜೆಪಿ ಅಭ್ಯರ್ಥಿಗೆ ಶೇ 11.5 ಮತಗಳು ಬಂದಿವೆ.

2019 ರ ಲೋಕಸಭೆಯಲ್ಲಿ ಬಿಜೆಪಿ ಶೇ 50.4 ಮತಗಳನ್ನು ಗಳಿಸಿದಾಗ ಸನ್ನಿವೇಶವು ಬದಲಾಗಿಬಿಟ್ಟಿತು. ಟಿಎಂಸಿಯ ಪರೇಶ್ ಚಂದ್ರ ಅಧಿಕಾರಿ ಶೇ 43.6 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ ಎಡಪಕ್ಷ ಅಭ್ಯರ್ಥಿ ಶೇ 2.6ಗೆ ತೃಪ್ತಿಪಡಬೇಕಾಗಿ ಬಂತು. ದಿನ್ಹಾಟಾದ ಜನಸಂಖ್ಯೆಯಲ್ಲಿ ಶೇ 32 ಮುಸ್ಲಿಮರು, ಎಸ್‌ಸಿ- ಶೇ 42 ಮತ್ತು ಎಸ್‌ಟಿ- ಶೇ 0.4ರಷ್ಟಿದ್ದಾರೆ.

ಬೆಹಲಾ ವೆಸ್ಟ್ ಕೋಲ್ಕತಾ ನಗರದ ಗಡಿಯೊಳಗಿನ ಕ್ಷೇತ್ರವಾಗಿದ್ದು ಇದು ದಕ್ಷಿಣ 24 ಪರಗಣಕ್ಕೆ ಸೇರಿದೆ. ಈ ಕ್ಷೇತ್ರದಲ್ಲಿ ಶಾಸಕ ಪಾರ್ಥ ಚಟರ್ಜಿ ಕಣದಲ್ಲಿದ್ದಾರೆ. ಪಾರ್ಥಅವರು ರಾಜ್ಯದ ಟಿಎಂಸಿ ವಕ್ತಾರರು ಮತ್ತು ಶಿಕ್ಷಣ ಸಚಿವರಾಗಿದ್ದಾರೆ . ಪಾರ್ಥ ಚಟರ್ಜಿಗೆ ಪೈಪೋಟಿ ನೀಡುವುದಕ್ಕಾಗಿ ಬಿಜೆಪಿ ನಟಿ ಶ್ರಾವಂತಿ ಚಟರ್ಜಿ ಅವರನ್ನು ಕಣಕ್ಕಿಳಿಸಿದೆ. ಎಡಪಕ್ಷದ ಅಭ್ಯರ್ಥಿ ನಿಹಾರ್ ಭಕ್ತ ಇಲ್ಲಿ ಕಣದಲ್ಲಿದ್ದಾರೆ. ಪಾರ್ಥಾ ಚಟರ್ಜಿ 2016 ರಲ್ಲಿ ಶೇ 46ಮತಗಳನ್ನು ಗಳಿಸಿದ್ದು, ಎಡಪಕ್ಷದ ಅಭ್ಯರ್ಥಿ ಕೌಸ್ತವ್ ಚಟರ್ಜಿ ಶೇ 42ಮತಗಳನ್ನು ಮತ್ತು ಬಿಜೆಪಿಯ ಹರಿಕೃಷ್ಣ ದತ್ತಾ ಕೇವಲ ಶೇ 8 ಮತಗಳನ್ನು ಗಳಿಸಿದ್ದಾರೆ.

2019 ರಲ್ಲಿ ಟಿಎಂಸಿ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದ್ದು ಮಾತ್ರವಲ್ಲದೆ ಶೇ 43 ಮತಗಳನ್ನು ಪಡೆದಿತ್ತು. ಬಿಜೆಪಿ ಶೇ 3 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಎಡಪಕ್ಷದ ಅಭ್ಯರ್ಥಿ ಶೇ19ಮತಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗೆ ಸಿಕ್ಕಿದ್ದು ಶೇ.3 ಮತ ಮಾತ್ರ. ಬೆಹಲಾ ಪಶ್ಚಿಮದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 6% ರಷ್ಟಿದ್ದು ಪರಿಶಿಷ್ಟ ಜಾತಿ-ಶೇ 5% ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ 0.4% ರಷ್ಟಿದೆ.

ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ