ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ

West Bengal Assembly Elections 2021: ವಿಶೇಷವೇನೆಂದರೆ ಈ 30 ಚುನಾವಣಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಂಖ್ಯೆ ಜಾಸ್ತಿಯಿದೆ. ಮುಸ್ಲಿಮರ ಜನಸಂಖ್ಯೆ ಶೇ 7ರಷ್ಟಿದೆ. ಒಟ್ಟಾರೆ ಪರಿಸ್ಥಿತಿಯು ಮೇಲ್ನೋಟಕ್ಕೆ ಬಿಜೆಪಿಗೆ ಪೂರಕವಾಗುವಂತೆ ಭಾಸವಾಗುತ್ತಿದೆ.

ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ
ಸುವೇಂದು ಅಧಿಕಾರಿ- ಮಮತಾ ಬ್ಯಾನರ್ಜಿ
Follow us
|

Updated on: Mar 22, 2021 | 7:46 PM

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆ ಮಾರ್ಚ್ 27ರಂದು ಆರಂಭವಾಗಲಿದ್ದು 5 ಜಿಲ್ಲೆಗಳ 30 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಬಂಕುರಾ ಜಿಲ್ಲೆಯಲ್ಲಿ 4 , ಪಶ್ಚಿಮ ಮಿಡ್ನಾಪುರದಲ್ಲಿ 6, ಝಾಗ್ರಾಂನಲ್ಲಿ 4, ಪೂರ್ವ ಮಿಡ್ನಾಪುರ್​ನಲ್ಲಿ 7 ಮತ್ತು ಪುರುಲಿಯಾದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಮತದಾನ ನಡೆಯಲಿದೆ. ವಿಶೇಷವೇನೆಂದರೆ ಈ 30 ಚುನಾವಣಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಂಖ್ಯೆ ಜಾಸ್ತಿಯಿದೆ. ಆದಾಗ್ಯೂ, ಶೇ.19 ಮಂದಿ ಪರಿಶಿಷ್ಟ ಜಾತಿ ಮತ್ತು ಶೇ.15 ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ. ಇಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.7ರಷ್ಟಿದೆ.

ಟಿವಿ9 ಚುನಾವಣಾ ಅಧ್ಯಯನ ತಂಡದ ಪ್ರಕಾರ ಈ ಹಂತದ ಚುನಾವಣೆಯಲ್ಲಿ 14 ಸೀಟುಗಳಲ್ಲಿ ಮಹತೊ ಸಮುದಾಯದ ಮತದಾರರು ಪ್ರಭಾವ ಬೀರಬಹುದು. ಅದೇ ವೇಳೆ 8 ಚುನಾವಣಾ ಕ್ಷೇತ್ರಗಳಲ್ಲಿ ಬೌರಿ ಸಮುದಾಯ (ಪರಿಶಿಷ್ಟ ಜಾತಿ) ಫಲಿತಾಂಶದಲ್ಲಿ ಪ್ರಭಾವ ಬೀರಲಿದೆ. 12 ಸೀಟುಗಳಲ್ಲಿ ಪರಿಶಿಷ್ಟ ಪಂಗಡದ ಜನರ ಪ್ರಮಾಣ ಶೇ.20ಕ್ಕಿಂತ ಜಾಸ್ತಿ ಇದೆ .

ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಡೆಯಲಿರುವ 30 ವಿಧಾನಸಭಾ ಕ್ಷೇತ್ರಗಳ ಮತದಾರರು 2016ರಲ್ಲಿ ಹೇಗೆ ಮತಚಲಾಯಿಸಿದ್ದರು ಎಂಬುದನ್ನು ಈಗ ಪರಿಶೀಲಿಸೋಣ. 30 ಚುನಾವಣಾ ಕ್ಷೇತ್ರಗಳ ಪೈಕಿ 27 (ಶೇ 90) ಸೀಟುಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಜಯಭೇರಿ ಬಾರಿಸಿತ್ತು. ಕಾಂಗ್ರೆಸ್ 2 ಸೀಟುಗಳನ್ನು ಗೆದ್ದಿದ್ದು ಎಡಪಕ್ಷ (ರೆವಲ್ಯೂಷನರಿ ಸೋಷ್ಯಲಿಸ್ಟ್ ಪಾರ್ಟಿ) 1 ಸೀಟು ಗೆದ್ದಿತ್ತು. ಬಿಜೆಪಿ ಖಾತೆ ತೆರೆಯಲಿಲ್ಲ. ಒಟ್ಟು 294 ಕ್ಷೇತ್ರಗಳ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 2016ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರಗಳು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ನಾಟಕೀಯವಾಗಿ ಮೇಲೇರಿತು.

ಈ ಬಾರಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ನಡೆಯುವ 30 ಸೀಟುಗಳ ಪೈಕಿ 20 ಸೀಟುಗಳಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು. ಇದರ ಅರ್ಥ, ಈ ಬಾರಿ ಮೊದಲ ಹಂತದ ಚುನಾವಣೆ ನಡೆಯಲಿರುವ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು 2019ರಲ್ಲಿಯೇ ತನ್ನ ಪ್ರಭಾವವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿತ್ತು. ಈ ಪೈಕಿ, 10 ಸೀಟುಗಳಲ್ಲಿ ಮಾತ್ರ 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಮುನ್ನಡೆ ಸಾಧಿಸಿತ್ತು. 2016ರಲ್ಲಿ ಟಿಎಂಸಿ 211 ಸೀಟು (ಶೇ 72) ಗಳಿಸಿತ್ತು.

ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರ ಆರೋಪ 2019ರ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದನ್ನು ಮನಗಂಡ ಮಮತಾ ಬ್ಯಾನರ್ಜಿ ಈ ಬಾರಿ ಹೆಚ್ಚು ಜಾಗರೂಕತೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. 2016ರಲ್ಲಿ ಈ 30 ಸೀಟುಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ 16 ಮಂದಿಯನ್ನು ಈ ಬಾರಿ ಬದಲಿಸಲಾಗಿದೆ. ಮಹಿಳಾ ಮತದಾರರನ್ನು ಓಲೈಸುವುದಕ್ಕಾಗಿ ಈ 30 ಸೀಟುಗಳಲ್ಲಿ ಟಿಎಂಸಿ 5 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಮೂವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಮತಾ ಬ್ಯಾನರ್ಜಿ ತಮ್ಮ ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಮಹಿಳಾ ಮತದಾರರನ್ನು ಉದ್ದೇಶಿಸಿಯೇ ಮಾತನಾಡುತ್ತಿದ್ದಾರೆ. ಚುನಾವಣೆಗೆ ಪೂರ್ವಭಾವಿಯಾಗಿ ಟಿಎಂಸಿ ಬಾಂಗ್ಲಾ ನಿಜೆರ್ ಮೆಯೆಕೈ ಚೆ (ಬಂಗಾಳಕ್ಕೆ ಅಲ್ಲಿನ ಮಗಳೇ ಬೇಕು) ಎಂಬ ಟ್ಯಾಗ್ ಲೈನ್ ಬಳಸುತ್ತಿದ್ದು, ಮಮತಾ ಅವರು ಇಲ್ಲಿನ ಮಣ್ಣಿನ ಮಗಳು ಎಂದು ಒತ್ತಿ ಹೇಳುತ್ತಿದೆ.

ಬಂಗಾಳದ ಸಂಸ್ಕೃತಿ ಮತ್ತು ಸೊಗಡಿಗೆ ಬಿಜೆಪಿ ಹೊರಗಿನದು. ತಮ್ಮ ಪಕ್ಷ ಮಾತ್ರ ಬಂಗಾಳದ ಸಂಸ್ಕೃತಿಯವನ್ನು ಕಾಪಾಡಬಲ್ಲದು ಎಂದು ಮಮತಾ ಹೇಳುತ್ತಲೇ ಇದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾಮಾನ್ಯ ವರ್ಗದ ಕುಟುಂಬಗಳಿಗೆ ತಿಂಗಳಿಗೆ ₹ 500 ಸಂಬಳ ನೀಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಇದರ ದುಪ್ಪಟ್ಟು ಹಣ ನೀಡುವ ಯೋಜನೆ ತರಲಿದ್ದೇವೆ ಎಂದು ಮಮತಾ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಈ ಯೋಜನೆಯಲ್ಲಿ ಕುಟುಂಬದ ಮಹಿಳಾ ಸದಸ್ಯರಿಗೆ ಹಣ ನೀಡಲಾಗುತ್ತದೆ.

ಎರಡೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಯುವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದನ್ನು ಕಾಣಬಹುದು. ಬಿಜೆಪಿ ಪಕ್ಷದಲ್ಲಿ 25-40 ವಯಸ್ಸಿನ 7 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 41-50 ವಯಸ್ಸಿನ 11 ಅಭ್ಯರ್ಥಿಗಳು, 51-60 ವಯಸ್ಸಿನ 7 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 5 ಅಭ್ಯರ್ಥಿಗಳಿದ್ದಾರೆ.

ಟಿಎಂಸಿ ಕೂಡಾ ಇದೇ ನೀತಿಯನ್ನು ಪಾಲಿಸಿದೆ. ಪ್ರಸ್ತುತ ಪಕ್ಷದಲ್ಲಿ 25-40 ವರ್ಷ ವಯಸ್ಸಿನ 8 ಅಭ್ಯರ್ಥಿಗಳು 41-50 ವಯಸ್ಸಿನ 9 ಅಭ್ಯರ್ಥಿಗಳು, 51-60 ವಯಸ್ಸಿನ ಐವರು, 60ಕ್ಕಿಂತ ಹೆಚ್ಚು ವಯಸ್ಸಿನ 8 ಅಭ್ಯರ್ಥಿಗಳು ಇದ್ದಾರೆ. ಶೇ. 29 ಮತದಾರರರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಎರಡೂ ಪಕ್ಷಗಳನ್ನು ಅವರನ್ನು ಓಲೈಸಲು ಪ್ರಯತ್ನಿಸುತ್ತಿವೆ.

ಮೊದಲ ಹಂತದ ಚುನಾವಣೆಯಲ್ಲಿ ಟಿಎಂಸಿ ಪಕ್ಷದಿಂದ ಮೇದಿನಿಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಏಕೈಕ ಸೆಲೆಬ್ರಿಟಿಯಾಗಿದ್ದಾರೆ ಜೂನ್ ಮಾಲಿಯಾ. ಇನ್ನೊಂದೆಡೆ, ಸುದೇಶ್ ಮಹತೊ ನೇತೃತ್ವದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಪಾರ್ಟಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಪಕ್ಷದ ಅಭ್ಯರ್ಥಿ ಪುರುಲಿಯಾ ಜಿಲ್ಲೆಯ ಬಾಘಮುಂಡಿ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಹತೊ ಸಮುದಾಯದವರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

2019ರ ಲೋಕಸಭೆ ಚುನಾವಣೆ ಮಾದರಿಯಲ್ಲಿಯೇ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ರಾಜಕೀಯ ಲಾಭ ಪಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬಿಜೆಪಿ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿನ ಭ್ರಷ್ಟಾಚಾರ ಮತ್ತು ‘ಕಟ್​ಮನಿ’ಯಿಂದಾಗಿ (ಕಮಿಷನ್) ಹಿಂದುಳಿದ ಜಿಲ್ಲೆಗಳ ಜನರಿಗೆ ಸಮಸ್ಯೆಯುಂಟಾಗಿದೆ ಎಂಬುದನ್ನು ಬಿಜೆಪಿ ಹೈಲೈಟ್ ಮಾಡಿದೆ.

ಮತದಾರರನ್ನು ಓಲೈಸುವ ವಿಚಾರದಲ್ಲಿ ಟಿಎಂಸಿ ಕೂಡಾ ಹಿಂದೆ ಬಿದ್ದಿಲ್ಲ. ಮಹತೊ ಸಮುದಾಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರದೇಶದಲ್ಲಿರುವ ಯುವಜನರಿಗೆ ಉದ್ಯೋಗ ನೀಡಲು ವಿಶೇಷ ಪೊಲೀಸ್ ಪಡೆಗೆ ಜಂಗಲ್ ಮಹಲ್ ಬೆಟಾಲಿಯನ್ ಎಂದು ಹೆಸರಿಡಲಾಗಿದೆ. ಮಮತಾ ಬ್ಯಾನರ್ಜಿ ಮತ್ತು ಆಕೆಯ ಅಳಿಯ ಸಂಸದ ಅಭಿಷೇಕ್ ಬ್ಯಾನರ್ಜಿ ಈ ಪ್ರದೇಶದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ . 2019ರ ಚುನಾವಣೆಯ ಆಘಾತದ ನಂತರ ಪಶ್ಚಿಮಬಂಗಾಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿರಿಯ ನಾಗರಿಕರಿಗೆ ತಿಂಗಳಿಗೆ ₹ 1,000 ಪಿಂಚಣಿ ನೀಡುವ ಯೋಜನೆ ತಂದಿತ್ತು.

ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ನೇಪಾಳ್ ಮಹತೊ ಅವರನ್ನು ಪುರುಲಿಯಾದ ಬಾಘಮುಂಡಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಟಿಎಂಸಿ ಅಭ್ಯರ್ಥಿ ಉಜ್ವಲ್ ಕುಮಾರ್ ಪುರುಲಿಯಾ ಜಿಲ್ಲೆಯ ಜೋಯ್ ಪುರ್ ಕ್ಷೇತ್ರದಿಂದ ನಾಮಪತ್ರ ಹಿಂಪಡೆದಿದ್ದು, ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆಯಲಿದೆ.

ಟಿಎಂಸಿ ಸರ್ಕಾರದಲ್ಲಿನ ಮಾಜಿ ಸಚಿವ, ಇತ್ತೀಚೆಗೆ ಬಿಜೆಪಿ ಸೇರಿದ ಸುವೇಂದು ಅಧಿಕಾರಿಗೆ ಮೊದಲ ಹಂತದ ಚುನಾವಣೆ ನಿರ್ಣಾಯಕವಾಗಲಿದೆ. ಪೂರ್ವ ಮಿಡ್ನಾಪುರದಲ್ಲಿ ಸುವೇಂದು ಪ್ರಭಾವಿ ಆಗಿದ್ದಾರೆ. ಇಲ್ಲಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಚುನಾವಣೆ ಎದುರಿಸಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 6 ಲೋಕಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. 2016ರಲ್ಲಿ ಟಿಎಂಸಿ 7 ಸೀಟುಗಳನ್ನು ಗೆದ್ದಿತ್ತು.

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಯಾವ ರೀತಿ ಪ್ರಭಾವ ಬೀರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಾಬಲ್ಯವಿರುವ ಪ್ರದೇಶದಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಮಹತೋ ಜಾತಿ, ಪರಿಶಿಷ್ಟ ಪಂಗಡ, ಬೌರಿ ಮತ್ತು ಸುವೇಂದು ಅಧಿಕಾರಿ ಅಂಶಗಳು ಬಿಜೆಪಿಗೆ ಲಾಭವುಂಟುಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ