ಮೃತ ಮಗಳಿಂದ ಪೋಷಕರಿಗೆ ವಿಡಿಯೋ ಕಾಲ್! ಇದು ನಿಜವೇ? ಕುತೂಹಲಕಾರಿ ಸಂಗತಿ ಇಲ್ಲಿದೆ

ಕಾಣೆಯಾಗಿದ್ದ ಯುವತಿಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿತ್ತು. ಈಕೆ ತನ್ನ ಮಗಳೆಂದು ಭಾವಿಸಿದ ಬೀಹಾರದ ಕುಟುಂಬವೊಂದು ಆಕೆಯ ಮೃತದೇಹದ ಅಂತ್ಯಸಂಸ್ಕಾರ ನಡೆಸಿದೆ. ತಿಂಗಳ ನಂತರ ಯುವತಿಯೊಬ್ಬಳು ವಿಡಿಯೋ ಕಾಲ್ ಮಾಡಿ ಅಪ್ಪಾ.. ನಾನು ಬದುಕಿದ್ದೇನೆ ಎಂದು ಹೇಳಿದಾಗ ಮಗಳು ನಮ್ಮನ್ನು ಬಿಟ್ಟು ಹೋದಳಲ್ಲಾ ಎಂದು ಕೊರಗುತ್ತಿದ್ದ ವ್ಯಕ್ತಿ ದಿಗ್ಭ್ರಮೆಗೊಂಡಿದ್ದಾರೆ.

ಮೃತ ಮಗಳಿಂದ ಪೋಷಕರಿಗೆ ವಿಡಿಯೋ ಕಾಲ್! ಇದು ನಿಜವೇ? ಕುತೂಹಲಕಾರಿ ಸಂಗತಿ ಇಲ್ಲಿದೆ
ತನ್ನ ಮಗಳೆಂದು ಭಾವಿಸಿ ಬೇರೊಬ್ಬ ಯುವತಿಯ ಮೃತದೇಹದ ಅಂತ್ಯಸಂಸ್ಕಾರ ನಡೆಸಿದ್ದ ಪೋಷಕರಿಗೆ ಶಾಕ್ ಕೊಟ್ಟ ವಿಡಿಯೋ ಕಾಲ್ (ಸಾಂದರ್ಭಿಕ ಚಿತ್ರ)
Rakesh Nayak Manchi

Updated on: Aug 21, 2023 | 10:14 PM

ಬಿಹಾರ, ಆಗಸ್ಟ್ 21: ಕಾಣೆಯಾಗಿದ್ದ ಯುವತಿಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲೆಯೊಂದರ ಬಳಿ ಪತ್ತೆಯಾಗಿತ್ತು. ಈಕೆ ತನ್ನ ಮಗಳೆಂದು ಭಾವಿಸಿದ ಬೀಹಾರದ (Bihar) ಕುಟುಂಬವೊಂದು ಆಕೆಯ ಮೃತದೇಹದ ಅಂತ್ಯಸಂಸ್ಕಾರ ನಡೆಸಿದೆ. ತಿಂಗಳ ನಂತರ ಯುವತಿಯೊಬ್ಬಳು ವಿಡಿಯೋ ಕಾಲ್ ಮಾಡಿ ಅಪ್ಪಾ.. ನಾನು ಬದುಕಿದ್ದೇನೆ ಎಂದು ಹೇಳಿದಾಗ ಆಕೆಯ ತಂದೆ ದಿಗ್ಭ್ರಮೆಗೊಂಡಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿಯ ಮಗಳು ಒಂದು ತಿಂಗಳು ಎಲ್ಲಿದ್ದಳು? ಸುಟ್ಟ ದೇಹ ಯಾರದ್ದು? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಒಂದು ತಿಂಗಳ ಹಿಂದೆ ಬಿಹಾರದ ಪಾಟ್ನಾದಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಬಳಿಕ ಸ್ಥಳೀಯ ಕಾಲುವೆಯಲ್ಲಿ ಯುವತಿಯ ಮೃತದೇಹ ಪತ್ತೆಯಾದಾಗ ತಮ್ಮ ಮಗಳೆಂದು ಭಾವಿಸಿ ಪೋಷಕರು ಅಂತಿಮ ಸಂಸ್ಕಾರ ನಡೆಸಿದ್ದಾರೆ. ಶವ ಸಂಸ್ಕಾರ ಮುಗಿದ ಒಂದು ತಿಂಗಳ ನಂತರ ಮಗಳು ಅಪ್ಪನಿಗೆ ವಿಡಿಯೋ ಕಾಲ್ ಮಾಡಿ ‘ಅಪ್ಪಾ ನಾನಿನ್ನೂ ಬದುಕಿದ್ದೇನೆ ಎಂದು ಹೇಳಿದ್ದಾಳೆ.

ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಸುಟ್ಟು ಕರಕಲಾದ ಶವ ಇನ್ನೊಬ್ಬ ಯುವತಿಯದ್ದು ಎಂದು ತಿಳಿದು ಬಂದಿದೆ. ತಪ್ಪಾಗಿ ತಮ್ಮ ಮಗಳದ್ದು ಎಂದು ಭಾವಿಸಿ ಅಂತಿಮ ಸಂಸ್ಕಾರ ನಡೆಸಿದ್ದೇವೆ ಎಂದು ಯುವತಿಯ ತಂದೆ ಹೇಳಿದ್ದಾರೆ.

ಇದನ್ನೂ ಓದಿ: ಯುಕೆ ನರ್ಸ್ ಲೂಸಿ ಲೆಟ್ಬಿ ಶಿಶುಗಳನ್ನು ಕೊಲೆ ಮಾಡಿದ್ದೇಕೆ? ತನಿಖೆಯಲ್ಲಿ ಹೊರಬಂದ ಉದ್ದೇಶಗಳ ಪಟ್ಟಿ ಇಲ್ಲಿದೆ

ಅಂಶು ಎಂಬಾಕೆ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈಕೆಯ ಪತ್ತೆಗೆ ಪೋಷಕರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಮಗಳು ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದರು. ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಈ ನಡುವೆ ನಾಲೆಯಲ್ಲಿ ಶವ ಪತ್ತೆಯಾಗಿದೆ. ಆದರೆ ಕುಟುಂಬದ ಸದಸ್ಯರಿಗೆ ಆಕೆಯ ಮುಖವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮೇಲಿದ್ದ ಬಟ್ಟೆಯನ್ನು ಆಧರಿಸಿ ಅದು ತಮ್ಮ ಮಗಳೆಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ತನ್ನ ತಂದೆಗೆ ವಿಡಿಯೋ ಕಾಲ್ ಮಾಡಿ ತಾನು ಬದುಕಿರುವ ಸತ್ಯಸಂಗತಿಯನ್ನು ಹೇಳಿದ್ದಾಳೆ. ಅಲ್ಲದೆ, ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಓಡಿಬಂದು ಮದುವೆಯಾಗಿದ್ದಾಗಿ ತಿಳಿಸುತ್ತಾಳೆ.

ಘಟನೆ ಸಂಬಂಧ ಅಕ್ಬರ್‌ಪುರ ಎಸ್‌ಎಚ್‌ಒ (ಠಾಣಾಧಿಕಾರಿ) ಸೂರಜ್ ಪ್ರಸಾದ್ ಮಾತನಾಡಿ, ಅಂಶು ಪ್ರಸ್ತುತ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ. ಸದ್ಯ ಈಕೆಯ ಪೋಷಕರು ಯಾರ ದೇಹವನ್ನು ಸುಟ್ಟರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Mon, 21 August 23

Loading...
Unable to load recommendations.
Follow Us