ಯುವಕರು, ರೈತರು, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧ: ಜೋಶಿ

|

Updated on: Jul 27, 2024 | 1:05 PM

ದೇಶದ 20 ಕಡೆ ರೈಲ್ವೆ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದೆ. ತೆಲಂಗಾಣದಲ್ಲೂ ರಸ್ತೆ ಸೇರಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಜಿಎಸ್​​​ಟಿ ಪರಿಹಾರ ಸೇರಿ ಹಲವು ಅನುದಾನಗಳನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಯುವಕರು, ರೈತರು, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧ: ಜೋಶಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Follow us on

ಹೈದರಾಬಾದ್​, ಜುಲೈ 27: ನರೇಂದ್ರ ಮೋದಿಯವರು (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಿದ್ದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಡತನದ ವಿರುದ್ಧ ಮೋದಿ ಸರ್ಕಾರ ಪ್ರಬಲವಾಗಿ ಹೋರಾಡುತ್ತಿದೆ. ದೇಶದ ಆರ್ಥಿಕತೆ ವೇಗದ ಗತಿಯಲ್ಲಿ ಸಾಗುತ್ತಿದೆ. ಹಣದುಬ್ಬರ ನಿಯಂತ್ರಿಸಲು ಸರ್ಕಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಯುವಕರು, ರೈತರು, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. 10 ವರ್ಷಗಳಿಂದ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನೀಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ ಜೋಶಿಯವರು ಇಂದು (ಜುಲೈ 27) ಹೈದರಾಬಾದ್​​ನ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಬಜೆಟ್​​ನಲ್ಲಿ ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಕೇಂದ್ರ ಬಜೆಟ್​ನಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 3 ಕೋಟಿ ಮನೆ ಕಟ್ಟಲಾಗುತ್ತದೆ. ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ದೇಶದ 20 ಕಡೆ ರೈಲ್ವೆ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದೆ. ತೆಲಂಗಾಣದಲ್ಲೂ ರಸ್ತೆ ಸೇರಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಜಿಎಸ್​​​ಟಿ ಪರಿಹಾರ ಸೇರಿ ಹಲವು ಅನುದಾನಗಳನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕುಪ್ವಾರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ; ಇಬ್ಬರು ಯೋಧರಿಗೆ ಗಾಯ

ನವೀಕರಿಸಬಹುದಾದ ಇಂಧನಗಳಿಗೂ ಅನುದಾನ ನೀಡಲಾಗಿದೆ. ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರಧಾನ ಮಂತ್ರಿ ಕಲ್ಯಾಣ ಅನ್ನ ಯೋಜನೆ ಮುಂದಿನ ಐದು ವರ್ಷದವರೆಗೆ ವಿಸ್ತರಿಸಲಾಗಿದೆ. 80 ಕೋಟಿ ಫಲಾನುಭವಿಗಳು ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಬುಡಕಟ್ಟು ಜನಾಂಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಭಾರತ ಉತ್ಪಾದನೆಯಲ್ಲಿ ವೇಗ ಪಡೆದುಕೊಂಡಿದೆ. 12 ಇಂಡಸ್ಟ್ರಿಯಲ್​ ಪಾರ್ಕ್​ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಡವರನ್ನು ಮೇಲೇತ್ತುವುದು ಮತ್ತು ಸದೃಡಗೊಳಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಕೊರೊನಾಕ್ಕಿಂತ ಮುಂಚೆ ಜಾಗತಿಕ ಆರ್ಥಿಕತೆ ಕುಸಿದಿತ್ತು. ಭಾರತದ ಆರ್ಥಿಕ ಏರಿಕೆಯಾಗುತ್ತಿದೆ. ಭಾರತ ಜಾಗತಿಕವಾಗಿ ಶೈನ್​ ಆಗುತ್ತಿದೆ. ಈ ಬಾರಿಯ ಬಜೆಟ್ ಬಡವರು, ಸ್ತ್ರೀ, ಯುವಕರು ಮತ್ತು ರೈತರಿಗಾಗಿ ಮೀಸಲಾಗಿದೆ ಎಂದರು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ