ಕೊನೆಗೂ ಸಂಸತ್ ವಿಶೇಷ ಅಧಿವೇಶನದ ಅಜೆಂಡಾ ಬಿಡುಗಡೆ ಮಾಡಿದ ಕೇಂದ್ರ; ಇಲ್ಲಿದೆ ವಿವರ

Parliment Special Session Agenda; ದೇಶದ 75 ವರ್ಷಗಳ ಸಂಸದೀಯ ಪಯಣದ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದ್ದು, 4 ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಬುಲೆಟಿನ್ ಪ್ರಕಾರ, ಸಂವಿಧಾನ ರಚನಾ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸದೀಯ ಪಯಣವನ್ನು ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದಂದು ಚರ್ಚಿಸಲಾಗುವುದು.

ಕೊನೆಗೂ ಸಂಸತ್ ವಿಶೇಷ ಅಧಿವೇಶನದ ಅಜೆಂಡಾ ಬಿಡುಗಡೆ ಮಾಡಿದ ಕೇಂದ್ರ; ಇಲ್ಲಿದೆ ವಿವರ
ಸಂಸತ್ ಭವನ
Follow us
|

Updated on: Sep 13, 2023 | 10:45 PM

ನವದೆಹಲಿ ಸೆಪ್ಟೆಂಬರ್ 13: ಸೆಪ್ಟೆಂಬರ್ 18 ರಿಂದ ಆರಂಭವಾಗಲಿರುವ ಸಂಸತ್​ನ ವಿಶೇಷ ಅಧಿವೇಶನ(Special Session of Parliament) ಕಾರ್ಯಸೂಚಿ ಅಥವಾ ಅಜೆಂಡಾವನ್ನು ಕೇಂದ್ರ ಸರ್ಕಾರ ಕೊನೆಗೂ ಬುಧವಾರ ಸಂಜೆ (Parliment Special Session Agenda) ಬಿಡುಗಡೆ ಮಾಡಿದೆ. ಅದರ ಪ್ರಕಾರ, ದೇಶದ 75 ವರ್ಷಗಳ ಸಂಸದೀಯ ಪಯಣದ ಕುರಿತು ಚರ್ಚೆ ನಡೆಯಲಿದ್ದು, 4 ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಬುಲೆಟಿನ್ ಪ್ರಕಾರ, ಸಂವಿಧಾನ ರಚನಾ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸದೀಯ ಪಯಣವನ್ನು ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದಂದು ಚರ್ಚಿಸಲಾಗುವುದು. ಚರ್ಚೆಯ ಸಮಯದಲ್ಲಿ ಸಂಸದೀಯ ಪಯಣದ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು.

ವಿಶೇಷ ಅಧಿವೇಶನದಲ್ಲಿ ಮಂಡನೆ ಮಾಡಲು ಮತ್ತು ಚರ್ಚಿಸಲು ನಾಲ್ಕು ಮಸೂದೆಗಳನ್ನು ಚರ್ಚೆಗೆ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕ್ಯಾಬಿನೆಟ್ ಸಚಿವರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ನೇಮಕಾತಿ ಸೇವಾ ಷರತ್ತುಗಳ ಮಸೂದೆ ಆಗಿದೆ. ಉಳಿದಂತೆ, ವಕೀಲರ ತಿದ್ದುಪಡಿ ಮಸೂದೆ, ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, ಅಂಚೆ ಕಚೇರಿ ಬಿಲ್ ಸೇರಿವೆ.

ಸಂಸತ್ತಿನ ವಿಶೇಷ ಅಧಿವೇಶನ ಕರೆದ ನಂತರ ಕಾರ್ಯಸೂಚಿಯ ಬಗ್ಗೆ ಕುತೂಹಲ ಮೂಡಿತ್ತು. ಅಧಿವೇಶನದ ಅಜೆಂಡಾಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಊಹಾಪೋಹಗಳು ಕೇಳಿಬಂದಿದ್ದವು. ಸರ್ಕಾರ ಲೋಕಸಭೆ ಚುನಾವಣೆಯನ್ನು ಅವಧಿಪೂರ್ವ ಘೋಷಿಸಬಹುದೇ? ದೇಶದ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಬಬಹುದು ಎಂದೆಲ್ಲ ಚರ್ಚೆಯಾಗಿತ್ತು. ಆದರೆ, ಇದೀಗ ಎಲ್ಲ ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ.

ಇದನ್ನೂ ಓದಿ: ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆ: ಸೆಪ್ಟಂಬರ್ 17ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ

ವಿಶೇಷ ಅಧಿವೇಶನದ ಅಜೆಂಡಾವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದವು. ಈ ಮಧ್ಯೆ, ಸಂಸತ್​​ನ ವಿಶೇಷ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ (ಸೆಪ್ಟೆಂಬರ್ 17) ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಈ ವಿಚಾರವಾಗಿ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

ವಿಶೇಷ ಅಧಿವೇಶನವು ಸಂಸತ್ ನ ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಹೊಸ ಕಟ್ಟಡಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ