ಬಿಜೆಪಿ ಜತೆ ಆರ್​ಎಲ್​ಡಿ ಮೈತ್ರಿ ಅಂತಿಮ, ಜಯಂತ್ ಚೌಧರಿ ಪಕ್ಷಕ್ಕೆ 2 ಲೋಕಸಭಾ ಸ್ಥಾನ

ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ರಾಷ್ಟ್ರೀಯ ಲೋಕದಳ ಆರ್​ಎಲ್​ಡಿ ಎನ್​ಡಿಎ ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಮೈತ್ರಿಯನ್ನು ಅಂತಿಮಗೊಳಿಸಿದ್ದು ಇನ್ನೆರಡು ಮೂರು ದಿನಗಳಲ್ಲಿ ಬಿಜೆಪಿ-ಆರ್​ಎಲ್​ಡಿ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಲು ಸಜ್ಜಾಗಿದೆ.

ಬಿಜೆಪಿ ಜತೆ ಆರ್​ಎಲ್​ಡಿ ಮೈತ್ರಿ ಅಂತಿಮ, ಜಯಂತ್ ಚೌಧರಿ ಪಕ್ಷಕ್ಕೆ 2 ಲೋಕಸಭಾ ಸ್ಥಾನ
ಜಯಂತ್ ಚೌಧರಿ

Updated on: Feb 09, 2024 | 12:00 PM

ಬಿಜೆಪಿ(BJP) ಜತೆ ಆರ್​ಎಲ್​ಡಿ(RLD) ಮೈತ್ರಿ ಅಂತಿಮಗೊಂಡಿದ್ದು, ಜಯಂತ್ ಚೌಧರಿಯವರ ಪಕ್ಷಕ್ಕೆ 2 ಲೋಕಸಭಾ ಸ್ಥಾನಗಳು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಹಾರದಲ್ಲಿ ನಿತೀಶ್​ ಕುಮಾರ್ ಇಂಡಿಯಾ ಮೈತ್ರಿ ತೊರೆದು ಎನ್​ಡಿಎಗೆ ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್​ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಜಯಂತ್ ಚೌಧರಿ ಕೂಡ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನುವ ಊಹಾಪೋಹ ಈಗ ನಿಜವಾಗುತ್ತಿದೆ.

ಜಯಂತ್ ಚೌಧರಿ 2 ಲೋಕಸಭಾ ಟಿಕೆಟ್ ಹಾಗೂ ಕೇಂದ್ರದಲ್ಲಿ ಸಚಿವ ಸ್ಥಾನದ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ ಈ ಮಧ್ಯೆ ಬಿಜೆಪಿ ತನ್ನ ಹಳೆಯ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಅಕಾಲಿದಳವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ನಡೆದರೆ ದಕ್ಷಿಣದ ಆಂಧ್ರಪ್ರದೇಶದಿಂದ ಪಂಜಾಬ್​ವರೆಗೆ ಎನ್​ಡಿಎ ಬಲಗೊಳ್ಳಲಿದೆ.

ಪಂಜಾಬ್​ನಲ್ಲಿ ಅಮೃತಸರ, ಲೂಧಿಯಾನ, ಜಲಂಧರ್, ಪಠಾಣ್​ಕೋಟ್​ನಂತಹ ನಗರ ಪ್ರದೇಶಗಳಲ್ಲಿ ಅಕಾಲಿದಳದ ಮೈತ್ರಿಯೊಂದಿಗೆ ಬಿಜೆಪಿಯ ಬಲವು ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅಕಾಲಿದಳದ ಮತಗಳು ಮತ್ತು ನಗರ ಪ್ರದೇಶದಲ್ಲಿ ಬಿಜೆಪಿ ಪ್ರಬಲವಾಗಿದೆ.

ಮತ್ತಷ್ಟು ಓದಿ: ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್, ಬಿಜೆಪಿ ಕಡೆ ಮುಖ ಮಾಡಿದ ಆರ್​ಎಲ್​ಡಿ ಮುಖ್ಯಸ್ಥ ಜಯಂತ್ ಚೌಧರಿ

ಫೆಬ್ರವರಿ 11ರಂದು ಶಾಸಕರು ಅಯೋಧ್ಯೆಗೆ ಭೇಟಿ ನೀಡಬೇಕೆಂಬ ಯೋಗಿ ಆದಿತ್ಯನಾಥ್​ ಸರ್ಕಾರದ ಪ್ರಸ್ತಾವನೆಯನ್ನು ಆರ್​ಎಲ್​ಡಿ ಒಪ್ಪಿಕೊಂಡಿದೆ. ಇದೇ ವೇಳೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಲ್ಲಿ ಮೈತ್ರಿ ಬಗ್ಗೆ ಮಾತ್ರ ಚರ್ಚೆ ನಡೆದಿದೆ ಎನ್ನಲಾಗಿದೆ. ಮೂವರು ವೈಎಸ್​ಆರ್ ಕಾಂಗ್ರೆಸ್​ ಸಂಸದರು ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಟಿಡಿಪಿಗೆ ಸೇರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಪಂಜಾಬ್​ ಬಗ್ಗೆ ಮಾತನಾಡುವುದಾದರೆ ಇಲ್ಲಿನ ಬಿಜೆಪಿ ಅಕಾಲಿದಳದೊಂದಿಗೆ ಮೈತ್ರಿ ಬಯಸಿದೆ. ಅಕಾಲಿದಳ ಕೂಡ ಇತ್ತೀಚೆಗೆ ಒಂದು ದೇಶ, ಒಂದು ಚುನಾವಣೆ ಎಂಬ ಸೂತ್ರವನ್ನು ಬೆಂಬಲಿಸಿತ್ತು. ಅಂದಿನಿಂದ ಎರಡೂ ಪಕ್ಷಗಳು ಒಂದಾಗುತ್ತಾರೆ ಎನ್ನುವ ಊಹಾಪೋಹಗಳು ಎದ್ದಿತ್ತು. ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮಾರ್ಚ್​ನಲ್ಲಿ ದಿನಾಂಕಗಳು ಪ್ರಕಟವಾಗುವ ಸಾಧ್ಯತೆ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us