ಭಾರತದ ಎಲ್ಲ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ ಏಪ್ರಿಲ್​ 14ಕ್ಕೆ; ತಾರತಮ್ಯ ಇಲ್ಲವೇ ಇಲ್ಲವೆಂದ ಪ್ರಧಾನಿ ಮೋದಿ

| Updated By: Lakshmi Hegde

Updated on: Mar 29, 2022 | 1:11 PM

ಏಪ್ರಿಲ್​ 6-14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನ ಆಚರಿಸಲಾಗುವುದು. ಏಪ್ರಿಲ್​ 6ರಂದು ಪಕ್ಷದ ಸಂಸ್ಥಾಪನಾ ದಿನ. ಅಂದು ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಭಾರತದ ಎಲ್ಲ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ ಏಪ್ರಿಲ್​ 14ಕ್ಕೆ; ತಾರತಮ್ಯ ಇಲ್ಲವೇ ಇಲ್ಲವೆಂದ ಪ್ರಧಾನಿ ಮೋದಿ
ಬಿಜಪಿ ಸಂಸದೀಯ ಸಭೆ
Follow us on

ಇಂದು ದೆಹಲಿಯ ಅಂಬೇಡ್ಕರ್​ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ (BJP Parliamentary Meet) ನಡೆದಿತ್ತು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಶಾ ಇತರರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಏಪ್ರಿಲ್​ 6ರಿಂದ 14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತದ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನು ಏಪ್ರಿಲ್​ 14ರಂದು ಉದ್ಘಾಟಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ. ಅಂದಹಾಗೇ, ಈ ಮ್ಯೂಸಿಯಂ ತೀನ್​ ಮೂರ್ತಿ ಭವನ್​​ದಲ್ಲಿ ನಿರ್ಮಾಣವಾಗಿದ್ದು, ಮಾಜಿ ಪ್ರಧಾನಮಂತ್ರಿಗಳಿಗೆ ಸಂಬಂಧಪಟ್ಟ ಮಹತ್ವದ ವಿಚಾರಗಳ ಸಂಗ್ರಹವಾಗಿದೆ. ನಾವು ಎಲ್ಲರನ್ನೂ ಒಂದೇ ರೀತಿ ನೋಡುತ್ತೇವೆ, ಗೌರವಿಸುತ್ತೇವೆ. ಯಾರ ಬಗ್ಗೆಯೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಫೆಬ್ರವರಿ-ಮಾರ್ಚ್​​ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದು, ಸರ್ಕಾರ ರಚನೆ ಮಾಡಿದ ಬಳಿಕ ಬಿಜೆಪಿ ಇದೇ ಮೊದಲ ಬಾರಿಗೆ ಸಂಸದೀಯ ಸಭೆ ನಡೆಸಿದೆ. ಇದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅರ್ಜುನ್​ ರಾಮ್​ ಮೇಘ್ವಾಲ್​, ಈ ಸಭೆಯಲ್ಲಿ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​  ಯೋಜನೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಯೋಜನೆಯ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಿದ್ದಕ್ಕೆ ನಾವೆಲ್ಲರೂ ಪ್ರಧಾನಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಏಪ್ರಿಲ್​ 6-14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನ ಆಚರಿಸಲಾಗುವುದು. ಏಪ್ರಿಲ್​ 6ರಂದು ಪಕ್ಷದ ಸಂಸ್ಥಾಪನಾ ದಿನ. ಅಂದು ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಂತರ 14ರವರೆಗೂ ಅಂದರೆ ಅಂಬೇಡ್ಕರ್ ಜಯಂತಿಯವರೆಗೂ ಪ್ರತಿ ರಾಜ್ಯದಲ್ಲಿ ಬ್ಲಾಕ್​ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಂದರೆ ಕೆರೆಗಳನ್ನು ಸ್ವಚ್ಛಗೊಳಿಸುವುದು, ಆರೋಗ್ಯ ಶಿಬಿರದಂತಹ ಸಾಮಾಜಿಕ ಕೆಲಸಗಳನ್ನು ಮಾಡಲಾಗುವುದು.  ಇನ್ನು 6ನೇ ತಾರೀಖಿನಂದು ಬೆಳಗ್ಗೆ ಪಕ್ಷದ ಧ್ವಜ ಹಾರಿಸಲಾಗುವುದು. 9.45ಕ್ಕೆ ಪ್ರಧಾನಿ ಮೋದಿ ಭಾಷಣ ಇದೆ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯನ್ನೇ ಕೊಂದ ಪತ್ನಿ; ಪ್ರಿಯಕರ ನಾಗೇಶ್, ಅಣ್ಣ ನಾರಾಯಣಸ್ವಾಮಿ ಬಂಧನ