ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮದ್ಯ ಸೇವಿಸಿದ್ದ ಬಾರ್ ಕೆಡವಿದ ಬಿಎಂಸಿ

|

Updated on: Jul 10, 2024 | 1:54 PM

ಅಪಘಾತಕ್ಕೂ ಮುನ್ನ ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಆರೋಪಿಗಳು ತೆರಳಿದ್ದ ಜುಹುನಲ್ಲಿರುವ ಬಾರ್‌ನ ಅಕ್ರಮ ಭಾಗವನ್ನು ಬಿಎಂಸಿ ಬುಧವಾರ ನೆಲಸಮಗೊಳಿಸಿದೆ. ಗುದ್ದೋಡು ಪ್ರಕರಣದ ಆರೋಪಿ ಮಿಹಿರ್ ಶಾ, ಕಾರು ಚಲಾಯಿಸುವ ಮುನ್ನ ಇದೇ ಬಾರ್​​ನಿಂದ ಮದ್ಯ ಸೇವಿಸಿದ್ದರು.​​ 24 ವರ್ಷದ ಮಿಹಿರ್​​​ಗೆ ಮದ್ಯ ನೀಡುವ ಮೂಲಕ ಬಾರ್ ಮ್ಯಾನೇಜರ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಎಂಸಿ ಬಾರ್​​ನ್ನು ಸೀಲ್ ಮಾಡಿತ್ತು.

ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮದ್ಯ ಸೇವಿಸಿದ್ದ ಬಾರ್ ಕೆಡವಿದ ಬಿಎಂಸಿ
ಜುಹುನಲ್ಲಿರುವ ಬಾರ್ ಕೆಡವಿದ ಬಿಎಂಸಿ
Follow us on

ಮುಂಬೈ ಜುಲೈ 10: ಮುಂಬೈ ಬಿಎಂಡಬ್ಲ್ಯು(BMW) ಹಿಟ್ ಅಂಡ್ ರನ್ ಪ್ರಕರಣದ (Hit and Run case) ಆರೋಪಿ, ಶಿವಸೇನಾ ಮುಖಂಡ ರಾಜೇಶ್ ಅವರ ಪುತ್ರ ಮಿಹಿರ್ ಶಾ (Mihir Shah) ಅವರಿಗೆ ಮದ್ಯ ನೀಡಿದ್ದ ಆರೋಪದ ಮೇಲೆ ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ಬಾರ್​​ನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಬುಧವಾರ ನೆಲಸಮ ಮಾಡಿದೆ.

ಮುಂಬೈ ಪೊಲೀಸರು ಮಂಗಳವಾರ ಸ್ಥಳವನ್ನು ಶೋಧಿಸಿ ಸೀಲ್ ಮಾಡಿದ ನಂತರ  ಬಿಎಂಸಿ ಈ ಕಾರ್ಯಾಚರಣೆ ಮಾಡಿದೆ. ಮುಂಬೈನ ವರ್ಲಿಯಲ್ಲಿ ಮಿಹಿರ್ ಶಾ ಚಲಾಯಿಸುತ್ತಿದ್ದ  ಬಿಎಂಡಬ್ಲ್ಯು ಕಾರು  ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು  ದ್ವಿಚಕ್ರ ಸವಾರ ಪ್ರದೀಪ್ ನಖವಾ (50) ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಪ್ರದೀಪ್  ಅವರ ಪತ್ನಿ ಕಾವೇರಿ (45) ಸಾವಿಗೀಡಾಗಿದ್ದರು. ಈ ಅಪಘಾತ ಸಂಭವಿಸುವ ಗಂಟೆಗಳ ಮೊದಲು ಶಾ ಮತ್ತು ಆತ ಸ್ನೇಹಿತರು ಶನಿವಾರ ರಾತ್ರಿ ಬಾರ್‌ಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.

ಬಿಎಂಸಿ ಬಾರ್​​ ಧ್ವಂಸ ಮಾಡುತ್ತಿರುವುದು

ಜುಹುದಲ್ಲಿನ ಗ್ಲೋಬಲ್ ತಪಸ್ ಬಾರ್ ಅನ್ನು ನಾಗರಿಕ ಸಂಸ್ಥೆಯು ಕೂಲಂಕಷವಾಗಿ ಪರಿಶೀಲಿಸಿ ಸೀಲ್ ಮಾಡಿತ್ತು. ಇನ್ನೂ 24 ವರ್ಷಗಳನ್ನು ಪೂರೈಸದ ಮಿಹಿರ್‌ಗೆ ಬಾರ್ ಮ್ಯಾನೇಜರ್ ಮದ್ಯ ಪೂರೈಸಿದ್ದರು. ಮಹಾರಾಷ್ಟ್ರದಲ್ಲಿ ಕಾನೂನು ಪ್ರಕಾರ ಕುಡಿಯುವ ವಯಸ್ಸು 25  ಆಗಿದ್ದು ಇದನ್ನು ಉಲ್ಲಂಘಿಸಿ ಬಾರ್​​ನಲ್ಲಿ ಮದ್ಯ ನೀಡಲಾಗಿತ್ತು. ಬಾರ್ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಬಿಎಂಸಿ ಕೆಡವಿದೆ.

ಇದಕ್ಕೂ ಮೊದಲು, ರಾಜ್ಯ ಅಬಕಾರಿ ಇಲಾಖೆಯು ಶನಿವಾರ ರಾತ್ರಿ ಮಿಹಿರ್ ಮತ್ತು ಅವರ ಸ್ನೇಹಿತರು ಭೇಟಿ ನೀಡಿದ ಜುಹು ಬಾರ್‌ಗೆ ಮೊಹರು ಹಾಕಿತು. ನಿಯಮ ಉಲ್ಲಂಘನೆಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬಾರ್‌ಗೆ ಸೀಲ್‌ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿMumbai BMW crash: ಮುಂಬೈ ಬಿಎಂಡಬ್ಲ್ಯು ಗುದ್ದೋಡು ಪ್ರಕರಣದ ಆರೋಪಿ ಮಿಹಿರ್ ಶಾ ಬಂಧನ

ಭಾನುವಾರ ಬೆಳಗ್ಗೆ ವರ್ಲಿ ಪ್ರದೇಶದಲ್ಲಿ  ಮಿಹಿರ್ ಚಲಾಯಿಸುತ್ತಿದ್ದ ಕಾರು ಸ್ಕೂಟರ್​​ಗೆ ಡಿಕ್ಕಿ ಹೊಡೆದಿದ್ದು, ಸ್ಕೂಟರ್​​ನಲ್ಲಿ ಹಿಂಬದಿ ಸವಾರರಾಗಿದ್ದ  ಕಾವೇರಿ ನಖ್ವಾ ಅವರನ್ನು ಸುಮಾರು 1.5 ಕಿಮೀ ಎಳೆದೊಯ್ದಿತ್ತು.  ಈ ಅಪಘಾತ ನಡೆದ ಕೂಡಲೇ ಮಿಹಿರ್ ಕಾರು ನಿಲ್ಲಿಸಿ, ತನ್ನ ಚಾಲಕನೊಂದಿಗೆ ಸೀಟನ್ನು ಬದಲಾಯಿಸಿಕೊಂಡು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ

  • ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ವರ್ಲಿ ಹಿಟ್ ಅಂಡ್ ರನ್ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು.
  • ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾ ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
  • ಭಾನುವಾರ ಬೆಳಗ್ಗೆಯಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ 24 ವರ್ಷದ ಮಿಹಿರ್ ಅವರನ್ನು ಮುಂಬೈ ಸಮೀಪದ ವಿರಾರ್‌ನಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಮಿಹಿರ್‌ನ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಥಾಣೆ ಜಿಲ್ಲೆಯ ಶಹಾಪುರದಿಂದ ವಿಚಾರಣೆಗಾಗಿ ಮುಂಬೈಗೆ ಕರೆತರಲಾಯಿತು. ಅವರನ್ನು ಇತರ 10 ಮಂದಿಯೊಂದಿಗೆ ವಿಚಾರಣೆ ನಡೆಸಲಾಗುತ್ತಿದೆ.
  • ಮಿಹಿರ್ ಶಾ ಅವರ ರಾಜಕಾರಣಿ ತಂದೆ ರಾಜೇಶ್ ಶಾ ಅವರು ತಮ್ಮ ಮಗ ಪರಾರಿಯಾಗುವುದನ್ನು ಖಚಿತಪಡಿಸಿದ್ದಾರೆ ಮತ್ತು ಅಪಘಾತದ ನಂತರ ಬಿಎಂಡಬ್ಲ್ಯು ಕಾರನ್ನು ಬೇರೆಡೆಗೆ ಸಾಗಿಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Wed, 10 July 24