ಅಯೋಧ್ಯೆ ರಾಮ ಮಂದಿರ, ಯೋಗಿ ಆದಿತ್ಯನಾಥ್​ಗೆ ಬಾಂಬ್ ದಾಳಿ ಬೆದರಿಕೆ

ಬೆದರಿಕೆ ಇ-ಮೇಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಎಡಿಜಿ ಅಮಿತಾಬ್ ಯಶ್ ಮತ್ತು ದೇವೇಂದ್ರ ತಿವಾರಿ ಅವರನ್ನು ಗೋಸೇವಕರು ಎಂದು ಬಣ್ಣಿಸಲಾಗಿದೆ. ಅವರನ್ನು ಬಾಂಬ್ ಸ್ಫೋಟಿಸಿ ಸಾಯಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೇವೇಂದ್ರ ಅವರ ಪ್ರಕಾರ, ಈ ಹಿಂದೆಯೂ ಸಹ ಅವರಿಗೆ ಇಂತಹ ಬೆದರಿಕೆಗಳು ಬಂದಿವೆ. ಈ ಬಾರಿ ಅಯೋಧ್ಯೆಯ ರಾಮ ಮಂದಿರ ಹಾಗೂ ಸಿಎಂ ಅವರನ್ನೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಯೋಧ್ಯೆ ರಾಮ ಮಂದಿರ, ಯೋಗಿ ಆದಿತ್ಯನಾಥ್​ಗೆ ಬಾಂಬ್ ದಾಳಿ ಬೆದರಿಕೆ
ಅಯೋಧ್ಯೆ ರಾಮ ಮಂದಿರ, ಯೋಗಿ ಆದಿತ್ಯನಾಥ್​ಗೆ ಬಾಂಬ್ ದಾಳಿ ಬೆದರಿಕೆ

Updated on: Jan 01, 2024 | 12:38 PM

ಅಯೋಧ್ಯೆ, ಜನವರಿ 1: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ, ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ದಾಳಿ ಮೂಲಕ ಸ್ಫೋಟಿಸುವ ಸಂದೇಶವುಳ್ಳ ಇ-ಮೇಲ್ ಬಂದಿರುವುದು (Bomb Threat) ಆತಂಕ ಸೃಷ್ಟಿಸಿದೆ. ಬಾಂಬ್ ದಾಳಿ ಬೆದರಿಕೆ ಸಂದೇಶದ ಇ-ಮೇಲ್​ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿ, ತನಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಬಂಧ ಇದೆ ಎಂದೂ ಹೇಳಿಕೊಂಡಿದ್ದಾನೆ. ಪ್ರಕರಣದ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಂಬ್ ದಾಳಿ ಬೆದರಿಕೆ ಸಂದೇಶವನ್ನು ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಕಳುಹಿಸಲಾಗಿದೆ. ಮೇಲ್‌ನಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ. ಮೇಲ್ ಕಳುಹಿಸಿದವನು ತನ್ನನ್ನು ಜುಬೈರ್ ಹುಸೇನ್ ಖಾನ್ ಎಂದು ಗುರುತಿಸಿಕೊಂಡಿದ್ದು, ಐಎಸ್‌ಐ ಜತೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾನೆ.

ದೇವೇಂದ್ರ ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ಬೆದರಿಕೆ ಇ-ಮೇಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಎಡಿಜಿ ಅಮಿತಾಬ್ ಯಶ್ ಮತ್ತು ದೇವೇಂದ್ರ ತಿವಾರಿ ಅವರನ್ನು ಗೋಸೇವಕರು ಎಂದು ಬಣ್ಣಿಸಲಾಗಿದೆ. ದೇವೇಂದ್ರ ಅವರ ಪ್ರಕಾರ, ಇದು ಮೊದಲ ಬಾರಿಗೆ ಅಲ್ಲ, ಈ ಹಿಂದೆಯೂ ಸಹ ಅವರಿಗೆ ಇಂತಹ ಬೆದರಿಕೆಗಳು ಬಂದಿವೆ.

ಇದನ್ನೂ ಓದಿ: ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಪಠಿಸುವಂತೆ ಮುಸ್ಲಿಮರಿಗೆ ಆರ್​​ಎಸ್​ಎಸ್​​ ನಾಯಕ ಮನವಿ

ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ದೇವೇಂದ್ರ ತಿವಾರಿ ಆರೋಪಿಸಿದ್ದಾರೆ. ಪೊಲೀಸರು ತನಿಖೆಯ ಭರವಸೆ ಮಾತ್ರ ನೀಡಿದ್ದರು. ಬಳಿಕ ಮೌನ ವಹಿಸಿದ್ದರು ಎಂದು ಅವರು ದೂರಿದ್ದಾರೆ. ಇದೀಗ ರಾಮ ಮಂದಿರ, ಸಿಎಂ ಅವರನ್ನೂ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಡಿಸೆಂಬರ್ 27ರ ಸಂಜೆ ದೇವೇಂದ್ರ ಅವರ ಮೇಲ್ ಐಡಿಗೆ ಬೆದರಿಕೆಯ ಇ-ಮೇಲ್ ಸಂದೇಶ ಬಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ