
ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ಜೋಸೆಫ್ ವಿಜಯ್ (CM Joseph Vijay) ನಿರೀಕ್ಷೆಗೂ ಮೀರಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್ನ ಐವರು ಶಾಸಕರು, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು ಶಾಸಕರು, ಸಿಪಿಐ(ಎಂ) ಇಬ್ಬರು, ಐಯುಎಂಎಲ್ ಪಕ್ಷದ ಇಬ್ಬರು ಶಾಸಕರು ಶಾಸಕರು ಸೇರಿದಂತೆ ಒಟ್ಟು 144 ಜನ ಶಾಸಕರ ಬೆಂಬಲ ದೊರೆತಿದೆ. ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) 107 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತಕ್ಕೆ 118 ಸ್ಥಾನಗಳು ಬೇಕಿರುವ ಕಾರಣ ಸರ್ಕಾರ ರಚನೆ ತುಸು ವಿಳಂಬವಾಗಿತ್ತು.
ಎಐಎಡಿಎಂಕೆಯ 25 ಮಂದಿ ಬಂಡಾಯ ಶಾಸಕರೂ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ವೇಲುಮಣಿ ಮತ್ತು ಷಣ್ಮುಗಂ ಶಾಸಕರು ನೇತೃತ್ವದ ಬಂಡಾಯ ಶಾಸಕರು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನಿಲುವನ್ನು ಧಿಕ್ಕರಿಸಿ ವಿಜಯ್ ಸರ್ಕಾರವನ್ನು ಬೆಂಬಲಿಸಿದ್ದಾರೆ.
ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು, ವಿಶ್ವಾಸಮತ ಯಾಚನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ, ಕೇವಲ 1.72 ಕೋಟಿ ಜನರು ಟಿವಿಕೆಗೆ ಮತ ಹಾಕಿದ್ದಾರೆ. ಉಳಿದ ಶೇ 65 ಜನರು ಟಿವಿಕೆ ವಿರುದ್ಧ ಮತ ಹಾಕಿದ್ದಾರೆ. ಟಿವಿಕೆಗೆ ಮತ ಹಾಕಿದ ಜನರಿಗೂ ಈಗ ಜ್ಞಾನೋದಯವಾಗುತ್ತಿದೆ. 118 ರ ಬಹುಮತದ ಚಿಹ್ನೆಯನ್ನು ಹೊಂದಿರುವ ಪಕ್ಷ ಮಾತ್ರ ಸರ್ಕಾರ ರಚಿಸಬಹುದು. ಟಿವಿಕೆ ನಾಯಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಈಗ ಜನರನ್ನು ಭೇಟಿ ಮಾಡಿ ಧನ್ಯವಾದ ಹೇಳುವುದಕ್ಕೂ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ (ತಿರುಪತ್ತೂರು ಶಾಸಕ ಆರ್. ಸೀನಿವಾಸ ಸೇತುಪತಿ) ವಿಶ್ವಾಸಮತದಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿರುವುದರಿಂದ ಟಿವಿಕೆ ಈಗ ಕೇವಲ 106 ಸದಸ್ಯರನ್ನು ಹೊಂದಿದೆ. ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷಗಳಿಂದ ಬೆಂಬಲವನ್ನು ಟಿವಿಕೆ ಪಡೆದುಕೊಂಡಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.
ಇದನ್ನೂ ಓದಿ: ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
‘ಎಐಎಡಿಎಂಕೆ ಎರಡು ಭಾಗವಾಗಿದೆ. ಈ ರಾಜಕೀಯ ಬದಲಾವಣೆಯ ಹಿಂದೆ ಯಾವ ಲೆಕ್ಕಾಚಾರ ಇದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಹೆಸರಿಸಲು ಸಹ ನೀವು (ಟಿವಿಕೆ) ನಿರಾಕರಿಸಿದ್ದೀರಿ ಮತ್ತು ಅವರನ್ನು ‘ಇತರ ಪಕ್ಷಗಳು’ ಎಂದು ಮಾತ್ರ ಉಲ್ಲೇಖಿಸಿದ್ದೀರಿ. ಆದರೆ ಈಗ ನೀವು ಅದೇ ನಾಯಕರನ್ನು ಭೇಟಿಯಾಗುತ್ತಿದ್ದೀರಿ, ಮತ್ತು ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾವು ವಿಧಾನಸಭೆಯಿಂದ ಹೊರನಡೆಯುತ್ತಿದ್ದೇವೆ. ನಾವು ಹೊರನಡೆದ ನಂತರ, ನಿಮಗೆ ಬಹುಮತ ಸಿಗುತ್ತದೆ. ನಮ್ಮ ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ರಾಜಕೀಯಗೊಳಿಸಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು. ನಂತರ ಡಿಎಂಕೆ ಸದಸ್ಯರು ಸಬಾತ್ಯಾಗ ಮಾಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:49 am, Wed, 13 May 26