ಸತ್ತವರನ್ನೂ ಬಿಡದ ಕಳ್ಳರು, ಸಮಾಧಿ ಅಗೆದು ಹೆಣದ ಮೇಲಿದ್ದ ಬಂಗಾರ ದೋಚಿದ ಪಾಪಿಗಳು

ಕೊಯಮತ್ತೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಮಾಧಿ ಅಗೆದು ಮೃತದೇಹದ ಮೇಲಿದ್ದ 24 ಗ್ರಾಂ ಚಿನ್ನದ ಸರವನ್ನು ಕಳ್ಳರು ದೋಚಿದ್ದಾರೆ. ಮೀನುಗಾರ ನಾಗರಾಜ್ ನಿಧನರಾದಾಗ, ಕುಟುಂಬಸ್ಥರು ಅವರ ಪ್ರೀತಿಯ ಸರವನ್ನು ಶವದ ಜೊತೆಯಲ್ಲೇ ಸಮಾಧಿ ಮಾಡಿದ್ದರು. ಈ ಕೃತ್ಯದ ಹಿಂದೆ ಸ್ಮಶಾನದ ಉಸ್ತುವಾರಿ ಸೇರಿದಂತೆ ಮೂವರು ಆರೋಪಿಗಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಸತ್ತವರನ್ನೂ ಬಿಡದ ಕಳ್ಳರು, ಸಮಾಧಿ ಅಗೆದು ಹೆಣದ ಮೇಲಿದ್ದ ಬಂಗಾರ ದೋಚಿದ ಪಾಪಿಗಳು
ಚಿನ್ನದ ಸರ-ಸಾಂದರ್ಭಿಕ ಚಿತ್ರ
Image Credit source: News Arena

Updated on: Jun 23, 2026 | 11:17 AM

ಕೊಯಮತ್ತೂರು, ಜೂನ್ 23: ಸಮಾಧಿ ಅಗೆದು ಹೆಣದ ಮೇಲಿದ್ದ ಬಂಗಾರ(Gold)ವನ್ನು ಕಳ್ಳರು ದೋಚಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಮೀನು ಮಾರಾಟಗಾರರೊಬ್ಬರು ನಿಧನರಾಗಿದ್ದರು. ಅವರ ಕೊರಳಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ತೆಗೆಯುವುದು ಬೇಡವೆಂದು ಕುಟುಂಬದವರು ಶವದ ಜತೆ ಮಣ್ಣು ಮಾಡಿದ್ದರು. ಅದನ್ನು ತಿಳಿದಿದ್ದ ಕಳ್ಳರು ರಾತ್ರಿ ಸಮಾಧಿಯನ್ನು ಅಗೆದು ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮೃತರ ಕುಟುಂಬಸ್ಥರನ್ನು ಹಾಗೂ ಸ್ಥಳೀಯರನ್ನು ತೀವ್ರ ದಿಗ್ಭ್ರಮೆಗೊಳಿಸಿದೆ.

ಕೊಯಮತ್ತೂರಿನ ಸೌರಿಪಾಳ್ಯಂ ನಿವಾಸಿಯಾಗಿದ್ದ 60 ವರ್ಷದ ಮೀನು ಮಾರಾಟಗಾರ ನಾಗರಾಜ್ ಅವರು ಜೂನ್ 6 ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಮರುದಿನ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ನಾಗರಾಜ್ ಅವರು ಬದುಕಿದ್ದಾಗ ಮೀನಿನ ಆಕಾರದ ಪೆಂಡೆಂಟ್ ಹೊಂದಿದ್ದ 24 ಗ್ರಾಂ ಚಿನ್ನದ ಸರವನ್ನು ಅತ್ಯಂತ ಪ್ರೀತಿಯಿಂದ ಸದಾ ಧರಿಸುತ್ತಿದ್ದರು.

ಆ ಸರದ ಮೇಲಿದ್ದ ಅವರ ಬಾಂಧವ್ಯ ಹಾಗೂ ಇಚ್ಛೆಗೆ ಗೌರವ ನೀಡಿ, ಕುಟುಂಬಸ್ಥರು ಅಂತ್ಯಕ್ರಿಯೆಯ ವೇಳೆಯೂ ಆಭರಣವನ್ನು ತೆಗೆಯದೆ ಹಾಗೇ ಸರದ ಸಮೇತ ನಾಗರಾಜ್ ಅವರ ದೇಹವನ್ನು ಮಣ್ಣು ಮಾಡಿದ್ದರು.

ಮತ್ತಷ್ಟು ಓದಿ: Video: ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಬೈಕ್ ಸ್ಟಾರ್ಟ್ ಆಗದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಖದೀಮ!

ನಾಗರಾಜ್ ಅವರ ಮಗ ವೆಂಕಟೇಶ್ ಕುಮಾರ್ ಮತ್ತು ಸಂಬಂಧಿಕರು ಜೂನ್ 22ರ ಸುಮಾರಿಗೆ 16 ನೇ ದಿನದ ಪುಣ್ಯತಿಥಿ ಕಾರ್ಯಗಳನ್ನು ಮಾಡಲು ಸಮಾಧಿ ಜಾಗಕ್ಕೆ ಹೋಗಿದ್ದರು. ಈ ವೇಳೆ ಸಮಾಧಿಯ ಸುತ್ತಲಿನ ಮಣ್ಣು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು, ಹೊಸದಾಗಿ ಅಗೆದಂತೆ ಕಾಣಿಸಿದೆ. ಇದರಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ.

ಕುಟುಂಬಸ್ಥರು ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವ ಕಾರ್ತಿಕೇಯನ್ (27) ಎಂಬಾತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಹೊರಬಿದ್ದಿದೆ. ತಡರಾತ್ರಿ ಇಬ್ಬರು ಸ್ಥಳೀಯ ವ್ಯಕ್ತಿಗಳು ಸ್ಮಶಾನಕ್ಕೆ ಅಕ್ರಮವಾಗಿ ನುಗ್ಗಿ, ನಾಗರಾಜ್ ಅವರ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಓಡಿಹೋಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಪ್ರಸ್ತುತ ಮಗ ವೆಂಕಟೇಶ್ ಕುಮಾರ್ ನೀಡಿದ ದೂರಿನ ಮೇರೆಗೆ ಪೀಲಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದಾಗಿನಿಂದ ಸ್ಮಶಾನದ ಕೇರ್ ಟೇಕರ್ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us