ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ; ಪ್ರಧಾನಿ ಮೋದಿ ಆರೋಪ

|

Updated on: Oct 05, 2024 | 4:27 PM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾಶಿಮ್‌ಗೆ ಭೇಟಿ ನೀಡಿದ್ದು, ಅಲ್ಲಿ ಅವರು ಬಂಜಾರ ಹೆರಿಟೇಜ್ ಮ್ಯೂಸಿಯಂ ಅನ್ನು ಉದ್ಘಾಟಿಸಿದರು. ಹಾಗೇ, 23,300 ಕೋಟಿ ರೂ.ಗಳ ಕೃಷಿ ಮತ್ತು ಪಶುಸಂಗೋಪನೆ ಯೋಜನೆಗಳಿಗೆ ಚಾಲನೆ ನೀಡಿದರು. ಭಾರತದ ಸಂಸ್ಕೃತಿಗೆ ಬಂಜಾರ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅವರನ್ನು ಬದಿಗೊತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ; ಪ್ರಧಾನಿ ಮೋದಿ ಆರೋಪ
ಮೋದಿ
Follow us on

ವಾಶಿಮ್: ಕಾಂಗ್ರೆಸ್ ಅನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ ಎಂದು ಶನಿವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಆ ಪಕ್ಷದ ಅಪಾಯಕಾರಿ ಅಜೆಂಡಾವನ್ನು ಸೋಲಿಸಲು ಜನರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಕಾಂಗ್ರೆಸ್ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡುತ್ತಿದ್ದು, ಅವರ ಸ್ಥಿತಿಯನ್ನು ಸುಧಾರಿಸುತ್ತಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.

“ನಾವೆಲ್ಲರೂ ಒಗ್ಗೂಡಿದರೆ ದೇಶವನ್ನು ವಿಭಜಿಸುವ ಕಾಂಗ್ರೆಸ್​ನ ಪ್ರಯತ್ನ ವಿಫಲಗೊಳ್ಳುತ್ತದೆ. ಕಾಂಗ್ರೆಸ್‌ಗೆ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡಿ ಬಡವರನ್ನು ಉಳಿಸುವುದು ಮಾತ್ರ ಗೊತ್ತು. ಜನರನ್ನು ಒಡೆಯುವುದು ಮಾತ್ರ ಅದಕ್ಕೆ ಗೊತ್ತು. ನಾವು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಇರಬೇಕು. ನಗರ ನಕ್ಸಲರ ಗ್ಯಾಂಗ್‌ನಿಂದ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ” ಎಂದು ಮೋದಿ ಆರೋಪಿಸಿದರು.


ಭಾರತದ ಅಭಿವೃದ್ಧಿಯ ಉದ್ದೇಶವನ್ನು ಹೊಂದಿರದ ಜನರೊಂದಿಗೆ ಕಾಂಗ್ರೆಸ್ ಗಟ್ಟಿಯಾಗಿ ನಿಂತಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಕಿಂಗ್ ಪಿನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯುವಕರನ್ನು ಡ್ರಗ್ಸ್ ಕಡೆಗೆ ತಳ್ಳಿ ಅದರಿಂದ ಬರುವ ಹಣದಿಂದ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ ಎಂದು ಮೋದಿ ಟೀಕಿಸಿದ್ದಾರೆ.


ಇದನ್ನೂ ಓದಿ: ನಮ್ಮ ಸರ್ಕಾರ ಉದ್ಯೋಗ, ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ; ಪ್ರಧಾನಿ ನರೇಂದ್ರ ಮೋದಿ

“ಬ್ರಿಟಿಷರ ಆಳ್ವಿಕೆಯಂತೆ ಈ ಕಾಂಗ್ರೆಸ್ ಕುಟುಂಬವೂ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರನ್ನು ಸಮಾನರು ಎಂದು ಪರಿಗಣಿಸುವುದಿಲ್ಲ. ಭಾರತವನ್ನು ಒಂದೇ ಕುಟುಂಬದಿಂದ ಆಳಬೇಕು ಎಂದು ಅವರು ಭಾವಿಸುತ್ತಾರೆ. ಆದ್ದರಿಂದಲೇ ಅವರು ಯಾವಾಗಲೂ ಬಂಜಾರ ಸಮುದಾಯದ ಬಗ್ಗೆ ಅವಹೇಳನಕಾರಿ ಧೋರಣೆಯನ್ನು ಹೊಂದಿದ್ದಾರೆ” ಎಂದು ಮೋದಿ ಹೇಳಿದ್ದಾರೆ.


“ಬಂಜಾರ ಸಮುದಾಯದ ಸಂತರು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಪ್ರೇರೇಪಿಸಿದರು. ಬ್ರಿಟಿಷರು ಈ ಸಮುದಾಯಕ್ಕೆ ಕಿರುಕುಳ ನೀಡಿದರು, ಆದರೆ ಅವರು ನಮ್ಮ ದೇಶವನ್ನು ಬಿಟ್ಟು ಹೋದ ನಂತರದ ಕಾಂಗ್ರೆಸ್ ಸರ್ಕಾರಗಳು ಈ ಪ್ರವೃತ್ತಿಯನ್ನು ಮುಂದುವರೆಸಿದವು” ಎಂದು ಪ್ರಧಾನಿ ಆರೋಪಿಸಿದರು.


ಇದನ್ನೂ ಓದಿ: ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ರೈತರ ಬದುಕನ್ನು ಹದಗೆಡಿಸಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಕಾಂಗ್ರೆಸ್ ಆಡಳಿತದ ಸರ್ಕಾರಗಳು ರೈತರಿಗೆ ಮತ್ತು ನೀರಾವರಿ ಯೋಜನೆಗಳ ಹಣವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿವೆ. ಕೃಷಿ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡುತ್ತಿದೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಮೋದಿ ಜನರಿಗೆ ಕರೆ ನೀಡಿದರು.


ತೆಲಂಗಾಣದ ಜನರು ಇನ್ನೂ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿ ಆರಂಭಿಸಿದ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ದೇಶವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಮಹಾರಾಷ್ಟ್ರಕ್ಕೆ ಇದೆ ಎಂದು ಹೇಳಿದ ಮೋದಿ, ಕೇಂದ್ರ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವಿನ ಜೊತೆಗೆ ರಾಜ್ಯ ಸರ್ಕಾರ ರೈತರಿಗೆ ಎರಡು ಪಟ್ಟು ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ