AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಚುನಾವಣೆಗೆ ಕಾಂಗ್ರೆಸ್​ನಿಂದ ‘ಜೀವನ ರಕ್ಷಾ ಯೋಜನೆ’ ಘೋಷಣೆ; 25 ಲಕ್ಷ ರೂ. ಆರೋಗ್ಯ ವಿಮೆಯ ಭರವಸೆ

ದೆಹಲಿ ಚುನಾವಣೆ 2025 ದಿನಾಂಕ ಈಗಾಗಲೇ ಘೋಷಣೆಯಾಗಿದೆ. ದೆಹಲಿಯ ವಿಧಾನಸಭಾ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದೆ. ಮತಗಳ ಎಣಿಕೆಯನ್ನು ಫೆಬ್ರವರಿ 8ಕ್ಕೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿದ್ದು, ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿವೆ.

ದೆಹಲಿ ಚುನಾವಣೆಗೆ ಕಾಂಗ್ರೆಸ್​ನಿಂದ 'ಜೀವನ ರಕ್ಷಾ ಯೋಜನೆ' ಘೋಷಣೆ; 25 ಲಕ್ಷ ರೂ. ಆರೋಗ್ಯ ವಿಮೆಯ ಭರವಸೆ
Congress Launches 'jeevan Raksha Yojana
ಸುಷ್ಮಾ ಚಕ್ರೆ
|

Updated on: Jan 08, 2025 | 5:02 PM

Share

ನವದೆಹಲಿ: ಕಾಂಗ್ರೆಸ್ ದೆಹಲಿಯಲ್ಲಿ ಇಂದು ‘ಜೀವನ ರಕ್ಷಾ ಯೋಜನೆ’ ಪ್ರಾರಂಭಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಈ ಯೋಜನೆಯಡಿ 25 ಲಕ್ಷ ರೂ. ಆರೋಗ್ಯ ವಿಮೆ ನೀಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ. ದೆಹಲಿ ಜನತೆಗೆ ಕಾಂಗ್ರೆಸ್‌ನಿಂದ ಇದು ಎರಡನೇ ಗ್ಯಾರಂಟಿಯಾಗಿದೆ. ಇದಕ್ಕೂ ಮೊದಲು ಜನವರಿ 6ರಂದು ಕಾಂಗ್ರೆಸ್ ‘ಪ್ಯಾರಿ ದೀದಿ ಯೋಜನೆ’ ಎಂಬ ಯೋಜನೆಯನ್ನು ಪ್ರಾರಂಭಿಸಿತ್ತು. ಆ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವುದಾಗಿ ಘೋಷಿಸಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಎರಡೂ ಯೋಜನೆಗಳನ್ನು ಪ್ರಮುಖವಾಗಿ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

ಇಂದು ದೆಹಲಿಯಲ್ಲಿ ಮಾತನಾಡಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಮುಂಬರುವ ಚುನಾವಣೆಯ ಪ್ರಣಾಳಿಕೆಯಲ್ಲಿ ‘ಜೀವನ ರಕ್ಷಾ ಯೋಜನೆ’ಯನ್ನು ಸೇರಿಸಲು ದೆಹಲಿ ಕಾಂಗ್ರೆಸ್ ನಿರ್ಧರಿಸಿದೆ. ಈ ಯೋಜನೆಯಡಿಯಲ್ಲಿ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು. ರಾಜಸ್ಥಾನದಲ್ಲಿ ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಲಾಯಿತು. ಎಲ್ಲಾ ನಿವಾಸಿಗಳಿಗೆ 25 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಯಾವುದೇ ಕಡ್ಡಾಯ ಷರತ್ತುಗಳು ಅಥವಾ ನಿರ್ಬಂಧಗಳಿಲ್ಲದೆ ಈ ಯೋಜನೆಯ ಲಾಭ ಪಡೆಯಬಹುದು ಎಂದಿದ್ದಾರೆ.

ಇದನ್ನೂ ಓದಿ: Delhi Assembly Elections 2025: ದೆಹಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ

ಮುಂದೆ ರಾಜಸ್ಥಾನದ ಚಿರಂಜೀವಿ ಯೋಜನೆಯಂತೆ ‘ಜೀವನ ರಕ್ಷಾ ಯೋಜನೆ’ಯೂ ಕೆಲಸ ಮಾಡಲಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. “ನಾವು ರಾಜಸ್ಥಾನದಲ್ಲಿ ‘ಆರೋಗ್ಯದ ಹಕ್ಕು’ ಕಾಯಿದೆಯನ್ನು ಜಾರಿ ಮಾಡಿದ್ದೇವೆ. ಇದರಲ್ಲಿ ಸಾರ್ವಜನಿಕರಿಗೆ ಹಕ್ಕುಗಳನ್ನು ನೀಡಲಾಗಿದೆ ಮತ್ತು ಈ ಕಾಯಿದೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದೆ. ಇದು ರಾಜಸ್ಥಾನದಲ್ಲಿ ಕ್ರಾಂತಿಕಾರಿ ಯೋಜನೆಯಾಗಿದೆ. ಜೀವನ್ ರಕ್ಷಾ ಯೋಜನೆಯು ದೆಹಲಿಗೆ ಒಂದು ಗೇಮ್ ಚೇಂಜರ್ ಯೋಜನೆಯಾಗಿದೆ ಮತ್ತು ನಾವು ಅದರ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ ಎಂದಿದ್ದಾರೆ.

“ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮಾಡಿಕೊಂಡ ಒಪ್ಪಂದವು ದೊಡ್ಡ ತಪ್ಪು ಎಂದು ನಾವು ಒಪ್ಪಿಕೊಳ್ಳುತ್ತೇವೆ, ನಾವು ತಪ್ಪನ್ನು ಪುನರಾವರ್ತಿಸುವುದಿಲ್ಲ. ನಿಮ್ಮ ಆಡಳಿತ ವಿರೋಧಿ ಧೋರಣೆಯಿಂದಾಗಿ ದೆಹಲಿಯ ಜನರು ಈಗ ಕಾಂಗ್ರೆಸ್ ಮೇಲೆ ವಿಶ್ವಾಸ ಇರಿಸಿದ್ದಾರೆ.” ಎಂದು ಕಾಂಗ್ರೆಸ್ ಚುನಾವಣಾ ಉಸ್ತುವಾರಿ ದೇವೇಂದ್ರ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸವನ್ನು 2ನೇ ಬಾರಿ ಕಿತ್ತುಕೊಂಡಿದೆ; ದೆಹಲಿ ಸಿಎಂ ಅತಿಶಿ ಆರೋಪ

ಭಾರತೀಯ ಚುನಾವಣಾ ಆಯೋಗವು ಜನವರಿ 7ರಂದು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿತು. ದಿನಾಂಕಗಳ ಘೋಷಣೆಯೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಮಾದರಿ ನೀತಿ ಸಂಹಿತೆ (MCC) ಸಹ ಜಾರಿಗೆ ಬಂದಿದೆ. ಫೆಬ್ರವರಿ 5ರಂದು ದೆಹಲಿಯ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ