ಅಮೇಥಿ ಮಾಜಿ ಸಂಸದನಿಗೆ ದೇಗುಲದಲ್ಲಿ ಕುಳಿತುಕೊಳ್ಳುವುದು ಹೇಗೆಂದೇ ಗೊತ್ತಿಲ್ಲ: ಯೋಗಿ ಆದಿತ್ಯನಾಥ್​ ವಾಗ್ದಾಳಿ

ಇತ್ತೀಚೆಗೆ ರಾಹುಲ್​ ಗಾಂಧಿಯವರು ಪದೇಪದೆ ಹಿಂದುತ್ವ, ಹಿಂದೂವಾದದ ಬಗ್ಗೆ ಮಾತನಾಡುತ್ತಿರುವ ಬೆನ್ನಲ್ಲೇ ಯೋಗಿ ಆದಿತ್ಯನಾಥ್​ ಈ ಮಾತುಗಳನ್ನಾಡಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಮೇಥಿ ಮಾಜಿ ಸಂಸದನಿಗೆ ದೇಗುಲದಲ್ಲಿ ಕುಳಿತುಕೊಳ್ಳುವುದು ಹೇಗೆಂದೇ ಗೊತ್ತಿಲ್ಲ: ಯೋಗಿ ಆದಿತ್ಯನಾಥ್​ ವಾಗ್ದಾಳಿ
ಯೋಗಿ ಆದಿತ್ಯನಾಥ್​
Updated By: Lakshmi Hegde

Updated on: Jan 03, 2022 | 7:43 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಹಿಂದುತ್ವ, ಹಿಂದೂವಾದದ ಬಗ್ಗೆ ಏನೇನೂ ಗೊತ್ತಿಲ್ಲ. ಅದು ಬಿಡಿ, ದೇವಸ್ಥಾನದಲ್ಲಿ ಕುಳಿತುಕೊಳ್ಳುವುದು ಹೇಗೆಂದೂ ಗೊತ್ತಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (CM Yogi Adityanath) ಹೇಳಿದ್ದಾರೆ.  ಇಂದು ರಾಹುಲ್ ಗಾಂಧಿಯವರ ಮಾಜಿ ಲೋಕಸಭಾ ಕ್ಷೇತ್ರ ಅಮೇಥಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು,  ಈ ಅಮೇಥಿಯ ಮಾಜಿ ಸಂಸದ (ರಾಹುಲ್ ಗಾಂಧಿ)ನಿಗೆ ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಅವರು ಭೇಟಿ ಕೊಟ್ಟಿದ್ದ ದೇಗುಲದ ಅರ್ಚಕರು ಹೇಳಿಕೊಡಬೇಕಾಯಿತು. ಆದರೆ ತಮ್ಮನ್ನು ತಾವು ಹೆಮ್ಮೆಯ ಹಿಂದು ಎಂದು ಹೇಳಿಕೊಳ್ಳುತ್ತಾರೆ. ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇತ್ತೀಚೆಗೆ ರಾಹುಲ್​ ಗಾಂಧಿಯವರು ಪದೇಪದೆ ಹಿಂದುತ್ವ, ಹಿಂದೂವಾದದ ಬಗ್ಗೆ ಮಾತನಾಡುತ್ತಿರುವ ಬೆನ್ನಲ್ಲೇ ಯೋಗಿ ಆದಿತ್ಯನಾಥ್​ ಈ ಮಾತುಗಳನ್ನಾಡಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕದ ಕಾಲದಲ್ಲಿ ಜನರಿಗೆ ಸಹಾಯ ಮಾಡಲು ಯಾವುದೇ ವಿರೋಧ ಪಕ್ಷದ ಒಬ್ಬೇ ಒಬ್ಬ ನಾಯಕ ಬರಲಿಲ್ಲ. ಕಾರ್ಯಕರ್ತರು ಮುಂದಾಗಲಿಲ್ಲ. ಇಲ್ಲಿನ ಕಾಂಗ್ರೆಸ್​, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರು ಬರಲಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲರೂ ಒಟ್ಟೊಟ್ಟಿಗೇ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೀಗ ರಾಜಕಾರಣದಲ್ಲಿ ವಿಭಜನೆ, ವಿಘಟನೆ ನೀತಿಯನ್ನು ಅಳವಡಿಸಿಕೊಂಡವರು ತಮ್ಮ ವಂಶೀಯರ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಇಂಥವರ ಪೂರ್ವಜರು, ತಾವೆಲ್ಲ ಆಕಸ್ಮಿಕವಾಗಿ ಹಿಂದುಗಳಾಗಿ ಹುಟ್ಟಿದ್ದು ಎಂದು ಹೇಳಿಕೊಳ್ಳುತ್ತಿದ್ದರು. ಅವರನ್ನು ಅವರೆಂದು ಪರಿಪೂರ್ಣ ಹಿಂದುಗಳಂತೆ ಬಿಂಬಿಸಿಕೊಳ್ಳಲಿಲ್ಲ.  ಆದರೆ ನಾವು ಯಾವತ್ತೂ ಮುಚ್ಚುಮರೆ ಮಾಡುವುದಿಲ್ಲ. ನಮಗೆ ಹಿಂದುಗಳು ಎಂದು ಕರೆದುಕೊಳ್ಳಲು ಹಿಂಜರಿಕೆ ಇಲ್ಲ. ನಾನು ಹಿಂದೆ ಮುಖ್ಯಮಂತ್ರಿಯಾಗಿಲ್ಲದೆ ಇದ್ದಾಗಲೂ ಹಿಂದೂ ಎಂದೇ ಹೇಳಿಕೊಳ್ಳುತ್ತಿದ್ದೆ. ಈಗಲೂ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದು ಯೋಗಿ ಹೇಳಿದರು.

ಇದನ್ನೂ ಓದಿ: ಇಸ್ಲಮಾಬಾದ್​ಗೆ ಬರಲು ಇಷ್ಟವಿಲ್ಲದೆ ಇದ್ದರೆ, ವರ್ಚ್ಯುವಲ್ ಆಗಿ ಪಾಲ್ಗೊಳ್ಳಿ; ಸಾರ್ಕ್​ ಶೃಂಗಸಭೆಗೆ ಪಾಕಿಸ್ತಾನದಿಂದ ಭಾರತಕ್ಕೆ ಆಹ್ವಾನ !