ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಫೆ.24) ಕೇರಳದ ಕೊಲ್ಲಮ್ನಲ್ಲಿ ಮೀನುಗಾರರ ಸಮುದಾಯದ ಜನರೊಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ಥಳೀಯ ಮೀನುಗಾರ ಸಮುದಾಯದ ಜನರ ಬದುಕು-ಬವಣೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಅವರೊಂದಿಗೆ ಒಡನಾಡಿದರು.
ವಯನಾಡ್ ಲೋಕಸಭಾ ಸದಸ್ಯರೂ ಆಗಿರುವ ರಾಹುಲ್ ಗಾಂಧಿ, ಕೆಲವು ಮೀನುಗಾರರೊಂದಿಗೆ, ದೋಣಿಯಲ್ಲಿ ಸಮುದ್ರಕ್ಕಿಳಿದರು. ಸುಮಾರು ಒಂದು ಗಂಟೆಯ ಕಾಲ ದೋಣಿಯಲ್ಲಿ ಮೀನುಗಾರರೊಂದಿಗೆ ಸಮಯ ಕಳೆದರು. ಬಲೆ ಬೀಸಿ ಮಿನು ಹಿಡಿಯಲು ರಾಹುಲ್ ಪ್ರಯತ್ನಿಸಿದರು.
ದಡಕ್ಕೆ ಹಿಂದಿರುಗಿದ ನಂತರ ಮಾತನಾಡಿದ ರಾಹುಲ್, ಮೀನುಗಾರರು ಅನುಭವಿಸುತ್ತಿರುವ ಕಷ್ಟ ತಿಳಿಯಿತು ಎಂದರು. ನೆರೆದಿದ್ದವರನ್ನು ‘ಸಹೋದರರೇ’ (Brothers) ಎಂದು ಸಂಬೋಧಿಸಿದರು.
ಕೇರಳದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಮೇಪ್ಪಾಡಿ ಎಂಬಲ್ಲಿಗೆ ತೆರಳುತ್ತಿದ್ದಾಗ 93 ವರ್ಷದ ಹಿರಿಯರೊಬ್ಬರನ್ನು ಭೇಟಿಯಾದರು.
ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ವಯನಾಡ್ನ ತ್ರಿಕ್ಕೈಪಟ್ಟದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದರು. ಮೂರು ದಿನಗಳ ಕೇರಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಸಾರ್ವಜನಿಕ ಪ್ರಚಾರ ಯಾತ್ರೆ ಕೈಗೊಂಡ ರಾಹುಲ್ ಗಾಂಧಿ, ಬಳಿಕ ಉದ್ಯೋಗಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿರುವ ಯುವ ಜನರನ್ನು ಭೇಟಿ ಮಾಡಿದರು. ಯುವಕರು ಪಬ್ಲಿಕ್ ಸರ್ವೀಸ್ ಕಮಿಷನ್ ಮೊದಲಿಗರಾಗಿದ್ದು ನಿರುದ್ಯೋಗ ಸಮಸ್ಯೆಯ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಮಣಪ್ಪುರಂ ರೈಲ್ವೇ ಪ್ಲಾಟ್ಫಾರಂ ಉದ್ಘಾಟನೆ ವೇಳೆ, ಮಕ್ಕಳ ಜತೆಗೆ ರಾಹುಲ್ ಗಾಂಧಿ ಕಂಡಿದ್ದು ಹೀಗೆ.
ಮಣಪ್ಪುರಂನ ವಾಣಿಯಂಬಲಮ್ ಎಂಬಲ್ಲಿ ರೈಲ್ವೇ ಪ್ಲಾಟ್ಫಾರಂ ಉದ್ಘಾಟಿಸಿದ ರಾಹುಲ್ ಗಾಂಧಿಗೆ ಅಭಿಮಾನಿಗಳಿಬ್ಬರು ಹೂ ನೀಡಿ ಸಂಭ್ರಮಪಟ್ಟರು.
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಕೇರಳದಲ್ಲಿ ಪ್ರಸ್ತುತ ಕಮ್ಯುನಿಸ್ಟ್ ಪಕ್ಷವು ಆಡಳಿತ ನಡೆಸುತ್ತಿದೆ. ಮುಂಬರುವ ಅವಧಿಗೆ ಕಾಂಗ್ರೆಸ್ ಪಕ್ಷ ಆಡಳಿತ ವಹಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಪ್ರಚಾರ ಕೈಗೊಂಡಿದ್ದಾರೆ.
Published On - 8:14 pm, Wed, 24 February 21