26/11 Mumbai Terror Attack: ಹೇಮಂತ್ ಕರ್ಕರೆಯನ್ನು ಕೊಂದಿದ್ದು ಪೊಲೀಸರು, ಕಸಬ್​ ನಿರಪರಾಧಿ ಎಂದ ಕಾಂಗ್ರೆಸ್​ ನಾಯಕ

2008ರ ನವೆಂಬರ್​ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಮೇಲೆ ಗುಂಡು ಹಾರಿಸಿದ್ದು ಪೊಲೀಸರು, ಅಜ್ಮಲ್ ಕಸಬ್ ಅಲ್ಲ ಎಂದು ಕಾಂಗ್ರೆಸ್​ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ.

26/11 Mumbai Terror Attack: ಹೇಮಂತ್ ಕರ್ಕರೆಯನ್ನು ಕೊಂದಿದ್ದು ಪೊಲೀಸರು, ಕಸಬ್​ ನಿರಪರಾಧಿ ಎಂದ ಕಾಂಗ್ರೆಸ್​ ನಾಯಕ
ವಿಜಯ್ ವಾಡೆತ್ತಿವಾರ್
Image Credit source: TV9 Bharatvarsh

Updated on: May 05, 2024 | 2:57 PM

ಮುಂಬೈನ ಭಯೋತ್ಪಾದನಾ ದಾಳಿ(Mumbai Terror Attack)ಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ(Hemant Karkare)ಯನ್ನು ಕೊಂದಿದ್ದು ಉಗ್ರ ಅಜ್ಮಲ್ ಕಸಬ್(Ajmal Kasab)​ ಅಲ್ಲ, ಆತ ನಿರಪರಾಧಿ ಎಂದು ಕಾಂಗ್ರೆಸ್​ ನಾಯಕ ವಿಜಯ್ ವಾಡೆತ್ತಿವಾರ್ ಸಮರ್ಥಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆಸಿದ್ದ ಭಯೋತ್ಪಾದಕ ದಾಳಿಯಲ್ಲಿ ಹೇಮಂತ್ ಕರ್ಕರೆ ಸೇರಿ ಮೂವರು ಪೊಲೀಸರು ಹುತಾತ್ಮರಾಗಿದ್ದರು. ಕಾಂಗ್ರೆಸ್​ ನಾಯಕ ವಾಡೆತ್ತಿಯಾರ್ ನೀಡಿರುವ ಹೇಳಿಕೆಯಲ್ಲಿ ಹೇಮಂತ್​ ಕರ್ಕರೆಯನ್ನು ಕೊಂದಿದ್ದು ಕಸಬ್​ ಅಲ್ಲ, ಪೊಲೀಸರೇ ಗುಂಡು ಹಾರಿಸಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಹಾಗೂ ವಕೀಲ ಉಜ್ವಲ್​ ನಿಕಂ ದ್ರೋಹ ಬಗೆದಿದ್ದು, ವಾಸ್ತವವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಉಜ್ವಲ್​ ಸರ್ಕಾರಿ ವಕೀಲರಾಗಿದ್ದರು. ತನಿಖೆ ವೇಳೆ ಹಲವು ಪ್ರಮುಖ ಮಾಹಿತಿಗಳು ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ. ಉಜ್ವಲ್ ನಿಕಮ್ ಹಲವು ಮಾಹಿತಿಗಳನ್ನು ಬಚ್ಚಿಟ್ಟಿದ್ದರು. ಬಿಜೆಪಿ ಏಕೆ ಇಂತಹ ದೇಶದ್ರೋಹಿಯನ್ನು ಕಣಕ್ಕಿಳಿಸುತ್ತಿದೆ ಎಂದು ವಾಡೆತ್ತಿವಾರ್ ಪ್ರಶ್ನಿಸಿದ್ದಾರೆ.

ವಾಡೆತ್ತಿವಾರ್ ಹೇಳಿಕೆ ನಿರಾಧಾರ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ನಮ್ಮ ಮೈತ್ರಿಯು ನಿಕಂ ಜತೆ ಇದ್ದರೆ ಕಾಂಗ್ರೆಸ್​ ಕಸಬ್​ ಜತೆ ಕೈ ಜೋಡಿಸಿದೆ ಎಂದರು. ಇಂತಹ ಆಧಾರ ರಹಿತ ಆರೋಪದಿಂದ ನಮಗೆ ಬೇಸರವಾಗಿದೆ. ವೋಟಿನ ಲಾಭಕ್ಕಾಗಿ ಜನರು ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ, ವಾಡೆತ್ತಿವಾರ್ ನನ್ನನ್ನು ಮಾತ್ರವಲ್ಲದೆ 26/11 ದಾಳಿಯಲ್ಲಿ ಪ್ರಾಣ ಕಳೆದುಕೊಂಡ 166 ಜನರನ್ನು ಅವಮಾನಿಸಿದ್ದಾರೆ ಎಂದು ನಿಕಂ ಹೇಳಿದ್ದಾರೆ.

ಮತ್ತಷ್ಟು ಓದಿ:Mumbai Terror Attack: 26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಸದಾ ಕಾಡುವ ಕಹಿ ನೆನಪು

ಕಸಬ್ ಅಮಾಯಕ ಎಂದು ಕಾಂಗ್ರೆಸ್ ಹೇಳಿದೆ, ಈ ಪಿತೂರಿಯಲ್ಲಿ ತಾನು ಭಾಗಿಯಾಗಿದ್ದನ್ನು ಪಾಕಿಸ್ತಾನವೂ ಒಪ್ಪಿಕೊಂಡಿತ್ತು.

26/11 ಭಯೋತ್ಪಾದಕ ದಾಳಿ
ಜನರು ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ತೊಡಗಿದ್ದಾಗ ಮಾಯನಗರಿ ಮುಂಬೈನ ಹಲವೆಡೆ ಗುಂಡಿನ ಸದ್ದು ಕೇಳಿಸಿತ್ತು. ಅದುವೇ ನಂತರ 26/11 ಮುಂಬಯಿ ಟೆರರ್‌ ಅಟ್ಯಾಕ್‌ ಎನ್ನುವ ಹೆಸರಿನಿಂದ ಜನರಲ್ಲಿ ಹಾಗೂ ಇತಿಹಾಸದಲ್ಲಿ ಹಾಗೇ ಅಚ್ಚಳಿಯದೆ ಉಳಿದಿದೆ.

ವಿಡಿಯೋ

2008 ನ.21ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್‌ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು.

ಪ್ರಾಣ ಕೊಟ್ಟ ಯೋಧರು, ಪೊಲೀಸರು ಯಾರು?
ನವೆಂಬರ್ 26ರ ರಾತ್ರಿ 9.45 ಕ್ಕೆ ಮುಂಬೈ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆಗೆ ಕರೆ ಬರುತ್ತದೆ. ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ಸಿಗುತ್ತದೆ. ಕೊಂಚ ಸಮಯವೂ ವೇಸ್ಟ್‌ ಮಾಡದೆ ಹೇಮಂತ್‌ ದಾದರ್‌ನಲ್ಲಿದ್ದ ತನ್ನ ಮನೆಯಿಂದ ಡ್ರೈವರ್‌ ಜೊತೆಗೆ ಕಾರಿನಲ್ಲಿ ಸ್ಥಳಕ್ಕೆ ದೌಡಾಯಿಸುತ್ತಾರೆ. ಕ್ಯಾಮಾ ಆಸ್ಪತ್ರೆಯ ಬಳಿ ಉಗ್ರರು ಇರುವ ಮಾಹಿತಿ ಸಿಕ್ಕ ಹಿನ್ನೆಲೆ ಅಲ್ಲಿಗೆ ತೆರಳಿದ ಹೇಮಂತ್‌ ಕರ್ಕರೆಗೆ ಅವರ ಸಹದ್ಯೋಗಿ ಪೊಲೀಸ್‌ ಅಧಿಕಾರಿಗಳಾದ ಅಶೋಕ್ ಕಾಮ್ಟೆ ಮತ್ತು ವಿಜಯ್ ಸಲಸ್ಕರ್ ಸಾಥ್‌ ನೀಡುತ್ತಾರೆ.

ಅದೇ ಸ್ಥಳದಲ್ಲಿ ಉಗ್ರರು ಇರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲೇ ಇರುವ ಕೆಂಪು ಕಾರಿನ ಹಿಂದೆ ಇಬ್ಬರು ಉಗ್ರರು ಅಡಗಿ ಕುಳಿತಿರುವುದು ತಿಳಿದ ಪೊಲೀಸ್‌ ಅಧಿಕಾರಿಗಳು ಗುಂಡಿನ ಚಕಮಕಿ ನಡೆಸಿ ಓರ್ವ ಉಗ್ರ ಅಜ್ಮಲ್‌ ಕಸಬ್‌ನ್ನು ಗಾಯಗೊಳಿಸುವಲ್ಲಿ ಯಶಸ್ಸು ಕಾಣುತ್ತಾರೆ. ಆದರೆ ಮತ್ತೊಬ್ಬ ಉಗ್ರನೊಂದಿಗೆ ಗುಂಡಿನ ದಾಳಿಯಲ್ಲಿ ತೊಡಗಿರುವಾಗು ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆ ಗುಂಡು ತಗುಲಿ ಹುತಾತ್ಮರಾಗುತ್ತಾರೆ.

ಯೋಧ ಸಂದೀಪ್‌ ಉನ್ನಿಕೃಷ್ಣನ್‌
ಮುಂಬೈ ದಾಳಿ ಎಂದಾಗ ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಅವರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕದವರಾದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಏಕಾಂಗಿಯಾಗಿ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು. ತಾಜ್‌ ಹೋಟೆಲ್‌ನೊಳಗೆ ನುಗ್ಗಿದ ಉನ್ನಿ ಕೃಷ್ಣನ್, ತನ್ನ ಸಹದ್ಯೋಗಿಗಳಾದ ಎನ್‌ಎಸ್‌ಜಿ ಕಮಾಂಡೋ ಹಾಗೂ ಹೋಟೆಲ್‌ನಲ್ಲಿದ್ದ ಅತಿಥಿಗಳನ್ನು ಉಗ್ರರಿಂದ ರಕ್ಷಿಸಿದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:52 pm, Sun, 5 May 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us