ದೆಹಲಿ ಸ್ಫೋಟ ಪ್ರಕರಣ; ಶ್ರೀನಗರದಲ್ಲಿ ಮತ್ತೋರ್ವ ಆರೋಪಿಯ ಬಂಧನ
ಡ್ರೋನ್ಗಳನ್ನು ಮಾರ್ಪಡಿಸುವುದು, ರಾಕೆಟ್ ತಯಾರಿಸುವಲ್ಲಿ ಭಾಗಿಯಾಗಿದ್ದ ದೆಹಲಿಯ ಕಾರ್ ಬಾಂಬರ್ನ ಮತ್ತೊಬ್ಬ ಸಹಾಯಕನನ್ನು NIA ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಆರೋಪಿಯನ್ನು ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯಾ ಬಾಂಬರ್ ಡಾ. ಉಮರ್ ಉನ್ ನಬಿ ಜೊತೆ ನಿಕಟವಾಗಿ ಕೆಲಸ ಮಾಡಿದ್ದ. ಆತನಿಗೆ ಬಾಂಬ್ ತಯಾರಿಕೆಯಲ್ಲಿ ತಾಂತ್ರಿಕ ಸಹಾಯವನ್ನು ಕೂಡ ನೀಡಿದ್ದ.

ನವದೆಹಲಿ, ನವೆಂಬರ್ 17: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ 15 ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಡಜನ್ಗಟ್ಟಲೆ ಜನರನ್ನು ಗಾಯಗೊಳಿಸಿದ ಸ್ಫೋಟಕ್ಕೆ (Delhi Car Blast) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯಾ ಬಾಂಬರ್ ಡಾ. ಉಮರ್ ಉನ್ ನಬಿ ಜೊತೆ ನಿಕಟವಾಗಿ ಕೆಲಸ ಮಾಡಿದ್ದ. ಆತನಿಗೆ ಇವನೇ ತಾಂತ್ರಿಕ ಸಹಾಯವನ್ನು ಕೂಡ ನೀಡಿದ್ದ ಎಂದು ಆರೋಪಿಸಲಾಗಿದೆ.
ಅನಂತ್ನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿಯಾಗಿರುವ ಜಾಸಿರ್ ವಾನಿ, ದೆಹಲಿಯ ದಾಳಿಯ ಹಿಂದಿನ ಸಕ್ರಿಯ ಸಹ-ಸಂಚುಗಾರನಾಗಿದ್ದ. ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟಕ್ಕೆ ಮುಂಚಿತವಾಗಿ ಡ್ರೋನ್ಗಳನ್ನು ಮಾರ್ಪಡಿಸಿ ರಾಕೆಟ್ಗಳನ್ನು ತಯಾರಿಸಲು ಪ್ರಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ಈಗ ದೆಹಲಿಗೆ ಕರೆತರಲಾಗಿದೆ. ಅಲ್ಲಿ ಆತನನ್ನು NIA ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುವುದು.
ಇದನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ ಪ್ರಕರಣ: ಆತ್ಮಹತ್ಯಾ ಬಾಂಬರ್ಗೆ ನೆರವಾಗಿದ್ದ ಅಮೀರ್ ರಷೀದ್ ಬಂಧನ
ಬಾಂಬ್ ಸ್ಫೋಟದ ಹಿಂದಿನ ಪಿತೂರಿಯನ್ನು ಬಯಲು ಮಾಡಲು ವಿವಿಧ ಕೋನಗಳನ್ನು ಅನ್ವೇಷಿಸುವುದನ್ನು ಮುಂದುವರೆಸಿರುವುದಾಗಿ ತನಿಖಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. “ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಹಲವಾರು ತಂಡಗಳು ಹಲವು ಸುಳಿವುಗಳನ್ನು ಹುಡುಕುತ್ತಿವೆ ಮತ್ತು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಲು ರಾಜ್ಯಗಳಾದ್ಯಂತ ಶೋಧ ನಡೆಸುತ್ತಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




