ಇಡಿ ಬಂಧನ ವಿರೋಧಿಸಿ ಕೇಜ್ರಿವಾಲ್ ಅರ್ಜಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

|

Updated on: Apr 03, 2024 | 6:13 PM

Delhi High Court Reserves Verdict On Arvind Kejriwal's Plea: ಜಾರಿ ನಿರ್ದೇಶಲಯ ತನ್ನನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿದೆ. ಇಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಇಡಿ ಪರವಾಗಿ ಎಎಸ್​ಜಿ ರಾಜು ಅವರು ವಾದಿಸಿದರೆ, ದೆಹಲಿ ಸಿಎಂ ಪರವಾಗಿ ಅಭಿಷೇಕ್ ಸಿಂಘ್ವಿ ವಕಾಲುತ ವಹಿಸಿದ್ದರು. ಸಾಕಷ್ಟು ಬಾರಿ ಸಮನ್ಸ್ ಕೊಟ್ಟರೂ ವಿಚಾರಣೆಗೆ ಹಾಜರಾಗದ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಮಾರ್ಚ್ 21ರಂದು ಬಂಧಿಸಿದ್ದರು. ಏಪ್ರಿಲ್ 1ರಿಂದ ಕೇಜ್ರಿವಾಲ್ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ.

ಇಡಿ ಬಂಧನ ವಿರೋಧಿಸಿ ಕೇಜ್ರಿವಾಲ್ ಅರ್ಜಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ, ಏಪ್ರಿಲ್ 3: ಲಿಕರ್ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED- Enforcement Directorate) ತನ್ನನ್ನು ಬಂಧಿಸಿರುವುದನ್ನು ವಿರೋಧಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪೂರ್ಣಗೊಳಿಸಿದೆ. ಇಂದು ಬುಧವಾರ ದೆಹಲಿ ಉಚ್ಚ ನ್ಯಾಯಾಲಯ ಈ ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಮಾರ್ಚ್ 21ರಂದು ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಸದ್ಯ ನ್ಯಾಯಾಂಗದ ಕಸ್ಟಡಿಯಲ್ಲಿದ್ದಾರೆ. ಮಾರ್ಚ್ 22ರಂದು ಕೆಳಗಿನ ನ್ಯಾಯಾಲಯ (ಟ್ರಯಲ್ ಕೋರ್ಟ್) ಕೇಜ್ರಿವಾಲ್ ಅವರನ್ನು ಆರು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ನಂತರ ಮತ್ತಷ್ಟು ನಾಲ್ಕು ದಿನ ಅವರ ಕಸ್ಟಡಿ ಅವಧಿ ವಿಸ್ತರಣೆ ಆಗಿತ್ತು. ಅಲ್ಲಿಗೆ 10 ದಿನಗಳ ಕಾಲ ಅವರು ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದರು. ಎಪ್ರಿಲ್ 1ರಂದು ಅವರನ್ನು ನ್ಯಾಯಾಂಗ ಕಸ್ಟಡಿಗೆ ವರ್ಗಾಯಿಸಲಾಗಿದೆ. ಏಪ್ರಿಲ್ 15ರವರೆಗೂ ಅವರು ಜುಡಿಷಿಯಲ್ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ. ಈಗ ಉಚ್ಚ ನ್ಯಾಯಾಲಯವು ಕೇಜ್ರಿವಾಲ್​ರಿಗೆ ಜಾಮೀನು ನೀಡಿ ಅವರನ್ನು ಬಂಧಮುಕ್ತಗೊಳಿಸುತ್ತದಾ ಕಾದು ನೋಡಬೇಕು.

ಇದನ್ನೂ ಓದಿ: ಕಾಂಗ್ರೆಸ್ ಘರ್ ಘರ್ ಗ್ಯಾರಂಟಿ; ಐದು ನ್ಯಾಯ, 25 ಭರವಸೆಗಳು ಯಾವುವು? ಇಲ್ಲಿದೆ ಪಟ್ಟಿ

ಇಡಿಯಿಂದ ಬಂಧನವಾಗಿರುವುದನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಪೀಠ ತತ್​ಕ್ಷಣಕ್ಕೆ ಜಾಮೀನು ಕೊಡುವ ಮನಸು ತೋರಲಿಲ್ಲ. ಕೇಜ್ರಿವಾಲ್ ವಿರುದ್ಧ ಪ್ರಬಲವಾದ ಸಾಕ್ಷ್ಯಗಳಿವೆ. ಅಬಕಾರಿ ಪ್ರಕರಣದಲ್ಲಿ ಅವರೇ ಸೂತ್ರಧಾರರಾಗಿದ್ದಾರೆ. ಅವರಿಂದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಆಗಿರುವುದಕ್ಕೆ ಪುರಾವೆಗಳಿವೆ. ಕೇಜ್ರಿವಾಲ್ ಎಸಗಿದ ಈ ಹಣಕಾಸು ಅಕ್ರಮದಿಂದ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚು ಲಾಭವಾಗಿದೆ ಎಂದು ಜಾರಿ ನಿರ್ದೇಶನಾಲಯವು ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಪೀಠದ ಮುಂದೆ ವಾದ ಮುಂದಿಟ್ಟಿತು.

ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಹಾಗು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ವಕಾಲುತ ವಹಿಸಿದ್ದರು. ಇಡಿ ಪರವಾಗಿ ಅಡಿಶನಲ್ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ