Delhi Rains: ದೆಹಲಿಯಲ್ಲಿ ಹೆಚ್ಚಿದ ಮಳೆಯ ಆರ್ಭಟ; ನೀರು ತುಂಬಿದ ಬಸ್​ನಲ್ಲೇ ಜನರ ಸಂಚಾರ

ಇನ್ನೂ 4 ದಿನಗಳ ಕಾಲ ನವದೆಹಲಿಯ ಸುತ್ತಮುತ್ತ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Delhi Rains: ದೆಹಲಿಯಲ್ಲಿ ಹೆಚ್ಚಿದ ಮಳೆಯ ಆರ್ಭಟ; ನೀರು ತುಂಬಿದ ಬಸ್​ನಲ್ಲೇ ಜನರ ಸಂಚಾರ
ಮಳೆ
Edited By:

Updated on: Jul 27, 2021 | 4:29 PM

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 100 ಮಿ.ಮೀ. ಮಳೆಯಾಗಿದೆ. ಮಳೆಯಿಂದ ದೆಹಲಿಯ (Delhi Rains) ರಸ್ತೆಗಳಲ್ಲಿ ನೀರು ನಿಂತಿದ್ದು, ಆಟೋ, ಬಸ್​ಗಳ ಒಳಗೆ ಕೂಡ ನೀರು ತುಂಬಿದೆ. ಇದರಿಂದ ಪ್ರಯಾಣಿಕರು ನೀರು ನಿಂತ ಬಸ್​ಗಳಲ್ಲೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ದೆಹಲಿಯ ಮಳೆಯ ಆರ್ಭಟದ ವಿಡಿಯೋಗಳು ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ.

ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಲ್ಲೂ ಮಳೆ ಹೆಚ್ಚಾಗಿದೆ. ದೆಹಲಿಯ ಪಲಾಂ ಎಂಬ ಪ್ರದೇಶದಲ್ಲಿ ಚಲಿಸುವ ಬಸ್​ನೊಳಗೆ ಕೆಸರು ತುಂಬಿದ ನೀರು ನುಗ್ಗಿ ಪ್ರಯಾಣಿಕರು ಪರದಾಡಬೇಕಾಯಿತು. ಆ ವಿಡಿಯೋ ಕೂಡ ವೈರಲ್ ಆಗಿದೆ.

ಇನ್ನೂ 4 ದಿನಗಳ ಕಾಲ ನವದೆಹಲಿಯ ಸುತ್ತಮುತ್ತ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ಕೂಡ ಜುಲೈ 29ರವರೆಗೆ ಭಾರೀ ಮಳೆಯಾಗಲಿದೆ. ಬಳಿಕ, ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದೆ.

ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಾಕೇತ್ ಮೆಟ್ರೋ ಸ್ಟೇಷನ್​ನ ಗೇಟ್​ಗಳನ್ನು ಮುಚ್ಚಲಾಗಿದೆ. ಮಳೆ ಕಡಿಮೆಯಾಗುವವರೆಗೂ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚರಿಸುವುದಿಲ್ಲ. ಮಳೆಯಿಂದ ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ಬಹುತೇಕ ರಸ್ತೆಗಳಲ್ಲಿ 2 ಅಡಿ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಈ ನಡುವೆ ಪ್ರವಾಹ, ಭೂಕುಸಿತದಿಂದಾಗಿ ಮಹಾರಾಷ್ಟ್ರದ 192 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 25 ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಇದುವರೆಗೂ ಮಹಾರಾಷ್ಟ್ರ ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 3.7 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದ ಪ್ರವಾಹಕ್ಕೆ 192 ಜನ ಬಲಿ; ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ

Maharashtra Rains: 9 ಲಕ್ಷ ರೂ. ಹಣ ಕಾಪಾಡಲು ಮಳೆಯಲ್ಲೇ 7 ಗಂಟೆ ಬಸ್ ಮೇಲೆ ಹತ್ತಿ ಕುಳಿತ ಡಿಪೋ ಮ್ಯಾನೇಜರ್!

(Delhi Rains Leaves Roads Flooded Rain Water Enters Moving Bus IMD Predicts Heavy Rain for 4 More Days)