
ನವದೆಹಲಿ, ಸೆಪ್ಟೆಂಬರ್ 9: 2025ರ ನವೆಂಬರ್ 10ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಭವಿಸಿದ ಭೀಕರ ಕಾರು ಸ್ಫೋಟವು ಆಕಸ್ಮಿಕವಲ್ಲ, ಅದೊಂದು ಯೋಜಿತ ಆತ್ಮಾಹುತಿ ಬಾಂಬ್ ದಾಳಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ 7,500 ಪುಟಗಳ ಚಾರ್ಜ್ಶೀಟ್ನಲ್ಲಿ ಸ್ಪಷ್ಟಪಡಿಸಿದೆ. ಈ ದಾಳಿಯ ಮುಖ್ಯ ರೂವಾರಿ ಹಾಗೂ ಉಗ್ರಗಾಮಿ ಉಮರ್ ಉನ್ ನಬಿ ತಾನು ಚಲಾಯಿಸುತ್ತಿದ್ದ ಐ20 ಕಾರಿನ ಒಳಗಿನಿಂದಲೇ ಕಮಾಂಡ್ ಮೆಕಾನಿಸಂ ಬಳಸಿ ಐಇಡಿ ಸಾಧನವನ್ನು ಸ್ಫೋಟಿಸಿದ್ದ ಎಂಬುದು ಫಾರೆನ್ಸಿಕ್ ತನಿಖೆಯಿಂದ ಸಾಬೀತಾಗಿದೆ.
ಆತ್ಮಾಹುತಿ ದಾಳಿ ಸಾಬೀತು:
ಬಾಂಬ್ ಸ್ಫೋಟದ ಸ್ಥಳದಲ್ಲಿದ್ದ ದೇಹದ ಭಾಗಗಳ ಡಿಎನ್ಎ ಪರೀಕ್ಷೆ ಹಾಗೂ ಉಮರ್ ನಬಿಯ ಮಾದರಿಗಳು ಒಂದೇ ಎಂದು ದೃಢಪಟ್ಟಿವೆ. ಅಲ್ಲದೆ, ಆತನ ದೇಹದ ಮಾದರಿಗಳಲ್ಲಿ ಮತ್ತು ಚಪ್ಪಲಿಗಳಲ್ಲಿ ಸ್ಫೋಟಕಗಳಾದ ಟಿಎಟಿಪಿ ಹಾಗೂ ಅಮೋನಿಯಂ ನೈಟ್ರೇಟ್ ರಾಸಾಯನಿಕಗಳ ಕುರುಹುಗಳು ಪತ್ತೆಯಾಗಿದೆ. ಇದರಿಂದ ಆತ ಕಾರಿನೊಳಗಿದ್ದುಕೊಂಡೇ ಬಾಂಬ್ ಸ್ಫೋಟಿಸಿರುವುದು ಖಚಿತವಾಗಿದೆ.
‘ಅನ್ಸಾರ್ ಗಜ್ವತ್-ಉಲ್-ಹಿಂದ್’ ಸಂಘಟನೆಯ ನಂಟು:
ಫರೀದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ವೈದ್ಯನಾಗಿದ್ದ ಉಮರ್ ನಬಿ, ಅಲ್-ಖೈದಾ ಬೆಂಬಲಿತ ‘ಅನ್ಸಾರ್ ಗಜ್ವತ್-ಉಲ್-ಹಿಂದ್’ ನಿಷ್ಕ್ರಿಯ ಉಗ್ರ ಸಂಘಟನೆಯನ್ನು ಮರುಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 2022ರಿಂದಲೇ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸಿ, ದೆಹಲಿ-ಎನ್ಸಿಆರ್ನಲ್ಲಿ ರಹಸ್ಯ ಸಭೆಗಳನ್ನು ನಡೆಸುತ್ತಿದ್ದ.
ಇದನ್ನೂ ಓದಿ: ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಕೆಂಪುಕೋಟೆಯನ್ನೇ ದಾಳಿಗೆ ಆಯ್ಕೆ ಮಾಡಿಕೊಂಡಿದ್ದೇಕೆ?:
ಭಾರತೀಯ ಸಾರ್ವಭೌಮತ್ವದ ಮತ್ತು ಸರ್ಕಾರದ ‘ಪ್ರತೀಕ’ ಎಂಬ ಕಾರಣಕ್ಕೆ ಕೆಂಪುಕೋಟೆಯನ್ನು ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 2023ರ ಡಿಸೆಂಬರ್ನಿಂದಲೇ ಕೆಂಪುಕೋಟೆಯ ಸುತ್ತಮುತ್ತ ಹಲವು ಬಾರಿ ಪರಿಶೀಲನೆ ನಡೆಸಲಾಗಿತ್ತು. ಶ್ರೀನಗರದಲ್ಲಿ ಆತನ ಸಹಚರರನ್ನು ಪೊಲೀಸರು ಬಂಧಿಸಲು ತೊಡಗಿದಾಗ, ತನಿಖಾ ಸಂಸ್ಥೆಗಳು ತನ್ನನ್ನೂ ಬಂಧಿಸಬಹುದು ಎಂಬ ಭಯದಿಂದ ಉಮರ್ ನಬಿ ತರಾತುರಿಯಲ್ಲಿ ಈ ದಾಳಿಯನ್ನು ನಡೆಸಿದ್ದ ಎಂದು ಎನ್ಐಎ ತಿಳಿಸಿದೆ.
ತನಿಖೆಯ ವೇಳೆ ಆರೋಪಿಗಳಿಂದ “ಹೌ ಟು ಬಿಕಮ್ ಆನ್ ಅಸ್ಸಾಸಿನ್” ಸೇರಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಿಂಸಾತ್ಮಕವಾಗಿ ಉರುಳಿಸಲು ಪ್ರಚೋದಿಸುವ ಹಾಗೂ ಆತ್ಮಾಹುತಿ ದಾಳಿಗಳಿಗೆ ತರಬೇತಿ ನೀಡುವ ಉಗ್ರಗಾಮಿ ಪುಸ್ತಕಗಳು ಮತ್ತು ಕೈಪಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭೀಕರ ಸ್ಫೋಟದಲ್ಲಿ 15 ಜನರು ಮೃತಪಟ್ಟು, ಹಲವರು ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಈಗಾಗಲೇ ಹಲವು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಪೂರ್ಣ ತನಿಖೆ ಮುಕ್ತಾಯದ ಹಂತ ತಲುಪಿದೆ.
ಹಸ್ತಪ್ರತಿಯಲ್ಲಿ ಶರಿಯಾ ಕಾನೂನು ಜಾರಿಗೆ ಕರೆ:
ಅಲ್-ಫಲಾಹ್ ಫ್ಲ್ಯಾಟ್ ಒಂದರಲ್ಲಿ ಸಿಕ್ಕ ಕೈಪಿಡಿ ಬರವಣಿಗೆಯ ಟಿಪ್ಪಣಿಗಳಲ್ಲಿ, ಪ್ರಜಾಪ್ರಭುತ್ವವನ್ನು ವಿರೋಧಿಸಿ ಶರಿಯಾ ಕಾನೂನು ಜಾರಿಗೆ ತರಲು ಕರಪತ್ರ ಬರೆಯಲಾಗಿತ್ತು. ಭಾರತ ಸರ್ಕಾರದ ‘ಪ್ರತೀಕ’ ಎಂಬ ಕಾರಣಕ್ಕಾಗಿಯೇ ಕೆಂಪುಕೋಟೆಯನ್ನು ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ: Delhi Blast: ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್
NIA ಪ್ರಕಾರ, ಸ್ಫೋಟದ ನಂತರ ಒಟ್ಟು 73 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ 64 ಮಾದರಿಗಳನ್ನು ಚಂಡೀಗಢದ CFSLನಲ್ಲಿ ಪರೀಕ್ಷಿಸಲಾಯಿತು. ಉಳಿದ 9 ಮಾದರಿಗಳನ್ನು ಗಾಂಧಿನಗರದ NFSUಗೆ ಕಳುಹಿಸಲಾಯಿತು. ಎರಡೂ ಪ್ರಯೋಗಾಲಯಗಳಲ್ಲಿನ ಪರೀಕ್ಷೆಗಳು TATP ಜೊತೆಗೆ ಅಮೋನಿಯಂ ನೈಟ್ರೇಟ್ ಮತ್ತು ಪೊಟ್ಯಾಸಿಯಮ್ ನೈಟ್ರೇಟ್ ಇರುವಿಕೆಯನ್ನು ದೃಢಪಡಿಸಿದವು. NIA ತನ್ನ ಆರೋಪಪಟ್ಟಿಯಲ್ಲಿ ಇದನ್ನು ನಿರ್ಣಾಯಕ ಕೊಂಡಿ ಎಂದು ಗುರುತಿಸಿದೆ. ವಶಪಡಿಸಿಕೊಂಡ ಸ್ಫೋಟಕ ವಸ್ತುಗಳ ಸಂಯೋಜನೆಯು ಕೆಂಪು ಕೋಟೆ ಬಳಿ ನಡೆದ VBIED (ವಾಹನದಿಂದ ಹರಡುವ ಸುಧಾರಿತ ಸ್ಫೋಟಕ ಸಾಧನ) ಸ್ಫೋಟದಲ್ಲಿ ಬಳಸಲಾದವುಗಳಿಗೆ ಹೊಂದಿಕೆಯಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಆರೋಪಿಗಳಿಂದ ಅಸಿಟೋನ್, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲದಂತಹ ವಸ್ತುಗಳನ್ನು ಹಾಗೂ ಮಿಶ್ರಣ ಮತ್ತು ಬಳಕೆಗೆ ಸಂಬಂಧಿಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆರೋಪಪಟ್ಟಿಯ ಪ್ರಕಾರ, ಆರೋಪಿಗಳು ಪರಸ್ಪರ ಸಂವಹನ ನಡೆಸಲು ಸಿಗ್ನಲ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು. ತನಿಖೆಯಲ್ಲಿ A-7 ಅನ್ನು ಸಿಗ್ನಲ್ನಲ್ಲಿ ರೌಲ್ದತ್ತ ಎಂಬ ಹೆಸರಿನಿಂದ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ