ಆಲಿಕಲ್ಲು ಮಳೆಯಿಂದ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾನಿ; ಪ್ರಯಾಣಿಕರ ಕಿರುಚಾಟದ ಮಧ್ಯೆ ತುರ್ತು ಭೂಸ್ಪರ್ಶ

ಹವಾಮಾನ ವೈಪರೀತ್ಯದಿಂದಾಗಿ ದೆಹಲಿ-ಶ್ರೀನಗರ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾಬಿಯಾಗಿದೆ. ಆಲಿಕಲ್ಲು ಮಳೆಯಿಂದಾಗಿ ದೆಹಲಿಯಿಂದ ಶ್ರೀನಗರಕ್ಕೆ 227 ಜನರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನವು ಗಾಳಿಯಲ್ಲಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು. ಇದರಿಂದ ಗಾಬರಿಯಾದ ಪ್ರಯಾಣಿಕರು ವಿಮಾನದೊಳಗೆ ಕುಳಿತು ಕಿರುಚಾಡುತ್ತಾ, ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಗೋಳಾಡುವ ವಿಡಿಯೋಗಳನ್ನು ಪ್ರಯಾಣಿಕರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಕ್ಷಣ ಇಂಡಿಗೋ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಆಲಿಕಲ್ಲು ಮಳೆಯಿಂದ ಇಂಡಿಗೋ ವಿಮಾನದ ಮುಂಭಾಗಕ್ಕೆ ಹಾನಿ; ಪ್ರಯಾಣಿಕರ ಕಿರುಚಾಟದ ಮಧ್ಯೆ ತುರ್ತು ಭೂಸ್ಪರ್ಶ
Indigo Flight

Updated on: May 21, 2025 | 10:34 PM

ನವದೆಹಲಿ, ಮೇ 21: ದೆಹಲಿಯಿಂದ ಶ್ರೀನಗರಕ್ಕೆ 227 ಜನರನ್ನು ಹೊತ್ತು ಹೋಗುತ್ತಿದ್ದ ಇಂಡಿಗೋ ವಿಮಾನವು ಇಂದು ಆಕಾಶದಲ್ಲಿ ಆಲಿಕಲ್ಲು ಮಳೆಗೆ ಸಿಲುಕಿದ ನಂತರ ತುರ್ತು ಭೂಸ್ಪರ್ಶ ಮಾಡಿತು. ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಆಗಲು ಪರದಾಡಿದ ವಿಮಾನ ಕೊನೆಗೆ ಸಂಜೆ 6.30ಕ್ಕೆ ಸುರಕ್ಷಿತವಾಗಿ ಕೆಳಗೆ ಇಳಿಯಿತು. ಹವಾಮಾನದ ತೊಂದರೆಯಿಂದಾಗಿ ಪೈಲಟ್ ಶ್ರೀನಗರದ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಈ ಭಯಾನಕ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಕಿರುಚುವುದು, ಅಳುವುದು ಮತ್ತು ಪ್ರಾರ್ಥಿಸುವುದನ್ನು ನೋಡಬಹುದು.

ಈ ಭಯಾನಕ ಪರಿಸ್ಥಿತಿಯ ಹೊರತಾಗಿಯೂ ಇಂಡಿಗೋ ವಿಮಾನವು ಸಂಜೆ 6.30ಕ್ಕೆ ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಿತು. ಇಲ್ಲಿಯವರೆಗೆ ಯಾವುದೇ ಅಧಿಕೃತ ಗಾಯಗಳು ವರದಿಯಾಗಿಲ್ಲ. ಆರಂಭಿಕ ವರದಿಗಳು ವಿಮಾನದ ಮುಂಭಾಗ ಜಖಂ ಆಗಿದೆ ಎಂದು ಹೇಳಿವೆ. ಅದರ ಫೋಟೋ ಕೂಡ ಹರಿದಾಡುತ್ತಿದೆ.


ಬಹುಶಃ ಹಾರಾಟದ ಸಮಯದಲ್ಲಿ ಹವಾಮಾನ ಸಂಬಂಧಿತ ಪರಿಣಾಮದಿಂದಾಗಿ ಈ ಹಾನಿ ಉಂಟಾಗಿರಬಹುದು.


“ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ 6E2142 ಕೆಟ್ಟ ಹವಾಮಾನ (ಆಲಿಕಲ್ಲು ಮಳೆ) ಅನುಭವಿಸಿತು. ಇದನ್ನು ಪೈಲಟ್ ATC SXR (ಶ್ರೀನಗರ)ಕ್ಕೆ ವರದಿ ಮಾಡಿದ್ದಾರೆ” ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


“ಎಲ್ಲಾ ವಿಮಾನ ಸಿಬ್ಬಂದಿ ಮತ್ತು 227 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ” ಎಂದು ಅಧಿಕಾರಿ ದೃಢಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ