ಪ್ರಧಾನಿಯವರೇ, ನಮ್ಮ ಕ್ಷೇತ್ರದಲ್ಲೂ ಎಐಎಡಿಎಂಕೆ ಪರ ಪ್ರಚಾರ ಮಾಡಿ ನಮ್ಮನ್ನು ಗೆಲ್ಲಿಸಿ; ಡಿಎಂಕೆ ಅಭ್ಯರ್ಥಿಗಳ ವ್ಯಂಗ್ಯ

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಲ್ಲಿ ಎಷ್ಟೇ ಪ್ರಚಾರ ಮಾಡಿದರೂ ಉಪಯೋಗವಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಪ್ರಧಾನಿಯವರೇ, ನಮ್ಮ ಕ್ಷೇತ್ರದಲ್ಲೂ ಎಐಎಡಿಎಂಕೆ ಪರ ಪ್ರಚಾರ ಮಾಡಿ ನಮ್ಮನ್ನು ಗೆಲ್ಲಿಸಿ; ಡಿಎಂಕೆ ಅಭ್ಯರ್ಥಿಗಳ ವ್ಯಂಗ್ಯ
ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ
Edited By:

Updated on: Apr 02, 2021 | 9:32 PM

ಚೆನ್ನೈ: ಇನ್ನೇನು ಚುನಾವಣೆಗೆ ನಾಲ್ಕೇ ದಿನ ಬಾಕಿಯಿದೆ ಎಂಬಾಗ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಕೆಲ ಅಭ್ಯರ್ಥಿಗಳು ಹೊಸ ವರಸೆ ತೆಗೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಮೈತ್ರಿಪಕ್ಷವಾದ ಎಐಎಡಿಎಂಕೆ ಪರ ತಮಿಳುನಾಡಿನ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಸ್ವತಃ ಪ್ರಧಾನಿಯೇ ತಮ್ಮ ವಿರುದ್ಧ ಪ್ರಚಾರದ ಕಣಕ್ಕೆ ಇಳಿದಿರುವುದನ್ನು ವ್ಯಂಗ್ಯವಾಗಿ ವ್ಯಾಖ್ಯಾನಿಸಿರುವ ಡಿಎಂಕೆ ‘ಪ್ರಧಾನಿಯವರೇ ನಮ್ಮ ಕ್ಷೇತ್ರದಲ್ಲೂ ಎಐಎಡಿಎಂಕೆ ಪರ ಪ್ರಚಾರ ನಡೆಸಿ, ನಿಮ್ಮ ಪ್ರಚಾರ ಸಭೆಯಿಂದ ನಾವು ಗೆಲ್ಲಲು ಸಹಾಯವಾಗುತ್ತದೆ’ ಎಂದು ಕುಹಕ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಲ್ಲಿ ಎಷ್ಟೇ ಪ್ರಚಾರ ಮಾಡಿದರೂ ಉಪಯೋಗವಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಕಂಬಂ ಕ್ಷೇತ್ರದಿಂದ ಸ್ಪರ್ಧಿಸಿರುವ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್.ರಾಮಕೃಷ್ಣ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸುವಂತೆ ಆಹ್ವಾನ ನೀಡಿರುವ ಅವರು, ನೀವು ನನ್ನ ಕ್ಷೇತ್ರದಲ್ಲಿ ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸಿದರೆ ನನಗೆ ಗೆಲ್ಲಲು ಸಹಾಯವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಇದೇ ತೆರನಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ತಿರುವಣ್ಣಾಮಲೈ ಕ್ಷೇತ್ರದ ಶಾಸಕ ಇವಿ ವೇಲು ಅವರು ಸಹ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುವಂತೆ ಆಹ್ವಾನ ನೀಡಿದ್ದಾರೆ. ಶಾಸಕ ಇವಿ ವೇಲು ಅವರ ಆಸ್ತಿಗಳ ಮೇಲೆ ಕಳೆದ ವಾರವಷ್ಟೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದವು. ಸದ್ಯ ವೇಲು ಅವರ ಪರ ಎಂ.ಕೆ.ಸ್ಟಾಲಿನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಇನ್ನೋರ್ವ ಡಿಎಂಕೆ ಅಭ್ಯರ್ಥಿ ಕಾರ್ತಿಕೇಯ ಶಿವಸೇನಾಪತಿ ಸಹ ಇದೇ ರೀತಿ ಮನವಿ ಮಾಡಿದ್ದಾರೆ. ತಮ್ಮ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ಕಾರ್ತಿಕೇಯ ಶಿವಸೇನಾಪತಿ ಮನವಿ ಮಾಡಿದ್ದಾರೆ.

ಆಕರ್ಷಕ ಪ್ರಣಾಳಿಕೆ ಘೋಷಿಸಿದೆ ಡಿಎಂಕೆ
ತಮಿಳುನಾಡಿನಲ್ಲಿ ಡಿಎಂಕೆ ನಂತರ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET) ಪರೀಕ್ಷೆ ರದ್ದು ಮಾಡುವುದಾಗಿ ಭರವಸೆ ನೀಡಿವೆ. ತಮಿಳುನಾಡು ಕಾಂಗ್ರೆಸ್​ ಪ್ರಕಾರ ನೀಟ್ ಪರೀಕ್ಷೆ ನಿರ್ದಿಷ್ಟ ರಾಜ್ಯಗಳಲ್ಲಿರುವ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತದೆ. ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ವಿಷಯದಲ್ಲಿ ಇದು ರಾಜ್ಯ ಸರ್ಕಾರದ ಹಕ್ಕಿನಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು.  ಇದರ ಬದಲಾಗಿ ಸಮರ್ಥ ಸಂಸ್ಥೆಗಳ ಅನುಮತಿಯಿಂದ ರಾಜ್ಯಮಟ್ಟದಲ್ಲಿ ತತ್ಸಮಾನ ಪರೀಕ್ಷೆ ನಡೆಸಿ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುವುದು ಎಂದು ಹೇಳಿದೆ.

ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲೇನಿದೆ?
ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿಗಳು  12ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ  ವೈದ್ಯಕೀಯ ಕಾಲೇಜು ಪ್ರವೇಶ ನೀಡಲಾಗುತ್ತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ತಂದು ತಮಿಳುನಾಡಿನ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜು ಪ್ರವೇಶ ಪಡೆಯುವ ಅವಕಾಶವನ್ನು ಕಸಿದುಕೊಂಡಿದೆ. ಡಿಎಂಕೆ ಅಧಿಕಾರಕ್ಕೆ ಬಂದರೆ ಮೊದಲ ವಿಧಾನಸಭೆ ಅಧಿವೇಶನದಲ್ಲಿಯೇ ನೀಟ್ ಪರೀಕ್ಷೆ ರದ್ದು ಮಾಡಲು ಕಾನೂನು ಮಾಡಿ, ಅದಕ್ಕೆ ರಾಷ್ಟ್ರಪತಿಯವರಿಂದ ಅಂಗೀಕಾರವನ್ನು ಕೋರಲಾಗುವುದು ಎಂದಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?

ಇದನ್ನೂ ಓದಿ: ತಮಿಳುನಾಡು ವಿಧಾನಸಭೆ ಚುನಾವಣೆ: ‘ಕರ್ನಾಟಕದ ಸಿಂಗಂ’ ಅಣ್ಣಾ ಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ಆ ಕ್ಷೇತ್ರದ ಮಹಿಮೆ ಏನು?

Follow Us