ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇದರ ನಡುವೆ ಇಂದು ಬಂಗಾಳದ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್ (I-PAC) ಮುಖ್ಯಸ್ಥರ ಮನೆ, ಟಿಎಂಸಿಯ ರಾಜಕೀಯ ಸಲಹೆಗಾರನ ಮೇಲೆ ಇಡಿ ದಾಳಿ ನಡೆದಿದೆ. ಕೊಲ್ಕತ್ತಾದ 5 ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿದೆ.

ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ
Mamata Banerjee With Green File

Updated on: Jan 08, 2026 | 4:50 PM

ಕೊಲ್ಕತ್ತಾ, ಜನವರಿ 8: ಪಶ್ಚಿಮ ಬಂಗಾಳದ 5 ಕಡೆಗಳಲ್ಲಿ ಇಂದು ಇಡಿ ದಾಳಿ ನಡೆದಿದೆ. ಅದರಲ್ಲೂ ಮುಖ್ಯವಾಗಿ ಜಾರಿ ನಿರ್ದೇಶನಾಲಯ (ED) I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ದಾಳಿ ಮಾಡಿದೆ. ಈ ವರ್ಷದ ವಿಧಾನಸಭಾ ಚುನಾವಣೆ ನಡೆಯಲಿರುವ ಬಂಗಾಳದಲ್ಲಿ ನಡೆದ ಈ ದಾಳಿ ಬಹಳ ಮಹತ್ವ ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ನಡೆಸಿದ ವೇಳೆ ಹೈಡ್ರಾಮಾ ನಡೆದಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಮ್ಮ ಚುನಾವಣಾ ಸಲಹೆಗಾರ ಐಪ್ಯಾಕ್ (I-PAC) ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆಯಿಂದ ಲ್ಯಾಪ್‌ಟಾಪ್, ಫೋನ್ ಮತ್ತು ಬಹು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಇಡಿ ಆರೋಪಿಸಿದೆ.

ಈ ದಾಳಿಯನ್ನು ಬಿಜೆಪಿಯ ರಾಜಕೀಯ ಪ್ರೇರಿತ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದರೂ ಇಡಿ ಈ ಆರೋಪಗಳನ್ನು ನಿರಾಕರಿಸಿದೆ. ಇದು ಯಾವುದೇ ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆದ ದಾರಿಯಲ್ಲ ಎಂದು ಹೇಳಿದೆ. ನಾವು ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಿಲ್ಲ. ಈ ಶೋಧನೆಯು ಯಾವುದೇ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧ ನಿಯಮಿತ ಕ್ರಮದ ಭಾಗವಾಗಿದೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಎಸ್​ಐಆರ್​ ಕರಡಿನಲ್ಲಿ 58 ಲಕ್ಷ ಹೆಸರುಗಳು ಡಿಲೀಟ್

ಇಂದು ಬೆಳಿಗ್ಗೆ ಇಡಿ ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆಯಾದ I-PACನ ಕಚೇರಿಯ ಮೇಲೆ ದಾಳಿ ನಡೆಸಿದೆ. ತನಿಖಾ ಸಂಸ್ಥೆಯೊಳಗಿನ ಮೂಲಗಳ ಪ್ರಕಾರ, ಈ ದಾಳಿಗಾಗಿ ದೆಹಲಿಯಿಂದ ವಿಶೇಷ ತಂಡ ಆಗಮಿಸಿತ್ತು. ED ಮೂಲಗಳ ಪ್ರಕಾರ, ಈ ದಾಳಿಯು ದೆಹಲಿಯಲ್ಲಿ ದಾಖಲಾಗಿರುವ ಹಳೆಯ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಆ ಪ್ರಕರಣದಲ್ಲಿ ಹಲವಾರು ವಹಿವಾಟುಗಳಲ್ಲಿ I-PAC ಹೆಸರು ಹೊರಬಿದ್ದಿದೆ ಎನ್ನಲಾಗಿದೆ.


ಆದರೆ, ಇಡಿ ದಾಳಿಯ ಸಮಯದಲ್ಲಿ ಪ್ರತೀಕ್ ಜೈನ್ ಅವರ ಮನೆಗೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನನ್ನ ಐಟಿ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಅವರು ನಮ್ಮ ಪಕ್ಷದ ಹಾರ್ಡ್ ಡಿಸ್ಕ್, ಅಭ್ಯರ್ಥಿಗಳ ಪಟ್ಟಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗಳು ಸಮೀಪದಲ್ಲಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರು ನಮ್ಮ ಪಕ್ಷದ ಎಲ್ಲಾ ಮಾಹಿತಿಯನ್ನು ದೋಚಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಹಾಗೇ, ಪ್ರತೀಕ್ ಜೈನ್ ಅವರ ಮನೆಯಿಂದ ಹಸಿರು ಫೈಲ್ ಅನ್ನು ತೆಗೆದುಕೊಂಡು ಮಮತಾ ಬ್ಯಾನರ್ಜಿ ಅಲ್ಲಿಂದ ಹೊರಟಿದ್ದಾರೆ. ಆ ಫೈಲ್​ನಲ್ಲಿ ಏನಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಬಾಬರಿ ಮಸೀದಿ ವಿವಾದದ ಬೆನ್ನಲ್ಲೇ ಅಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ

ಪ್ರತೀಕ್ ಜೈನ್ ಅವರ ನಿವಾಸದಿಂದ ಹೊರಬಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. “ಒಂದು ಪಕ್ಷದ ಹಾರ್ಡ್ ಡಿಸ್ಕ್‌ಗಳು ಮತ್ತು ಅಭ್ಯರ್ಥಿಗಳ ಪಟ್ಟಿಗಳನ್ನು ವಶಪಡಿಸಿಕೊಳ್ಳುವುದು ಇಡಿ ಅಥವಾ ಅಮಿತ್ ಶಾ ಅವರ ಕೆಲಸವೇ? ಇದು ದ್ವೇಷದ ರಾಜಕಾರಣ. ಇದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Thu, 8 January 26