ಲಕ್ನೋ: ಡಾಬಾ ಬಳಿ ನಿಂತಿದ್ದ ಬಸ್ಗೆ ಟ್ರಕ್ ಡಿಕ್ಕಿಯಾಗಿ 18 ಜನರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಪಲ್ವಲ್ನಿಂದ ಬಿಹಾರಕ್ಕೆ ಬಸ್ನಲ್ಲಿ ತೆರಳುತ್ತಿದ್ದ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ರಾಮ್ ಸಾನೆಹಿಘಾಟ್ ಪೊಲೀಸ್ ವೃತ್ತದ ಬಳಿಯ ಲಕ್ನೋ-ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಬಲ್ ಡೆಕ್ಕರ್ ಬಸ್ಗೆ ಟ್ರಕ್ ಡಿಕ್ಕಿ ಹೊಡೆದು ಹದಿನೆಂಟು ಜನರು ಮೃತಪಟ್ಟಿದ್ದಾರೆ. ಹಾಗೂ 15 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಲಕ್ನೋದ ಆಘಾತ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿಗಳ ಪ್ರಕಾರ, ಬುಧವಾರ ಮುಂಜಾನೆ ಅಪಘಾತ ಸಂಭವಿಸಿದೆ. ಬಸ್ ಹರಿಯಾಣದಿಂದ ಬಿಹಾರಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ಅಯೋಧ್ಯೆಯ ಗಡಿಯಲ್ಲಿರುವ ಕಲ್ಯಾಣಿ ನದಿ ಸೇತುವೆಯ ಬಳಿ ಆಕ್ಸಲ್ ಸ್ಥಗಿತಗೊಂಡ(Axle Breakdown) ಕಾರಣ ಡಬಲ್ ಡೆಕ್ಕರ್ ಬಸ್ ಅನ್ನು ನಿಲ್ಲಿಸಲಾಗಿತ್ತು. ಭಾರೀ ಮಳೆ ಮತ್ತು ಕತ್ತಲ ಕಾರಣದಿಂದಾಗಿ ಲಕ್ನೋದಿಂದ ಅತಿ ವೇಗದಲ್ಲಿ ಬರುತ್ತಿದ್ದ ಟ್ರಕ್ ಬಸ್ಗೆ ಡಿಕ್ಕಿ ಹೊಡೆದಿದೆ. ಘರ್ಷಣೆ ಎಷ್ಟು ಪ್ರಬಲವಾಗಿದೆಯೆಂದರೆ, ಅವರಲ್ಲಿದ್ದ ಹೆಚ್ಚಿನವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದಾಗ ಕೆಲ ಪ್ರಯಾಣಿಕರು ಬಸ್ನಿಂದ ಇಳಿದು ರಸ್ತೆಬದಿ ಮಲಗಿದ್ದರು.
ಅಪಘಾತದ ನಂತರ, ರಾಷ್ಟ್ರೀಯ ಹೆದ್ದಾರಿಯ ಐದು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿದೆ. ಸದ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಮೃತರಲ್ಲಿ ಸುರೇಶ್ ಯಾದವ್, ಇಂದಲ್ ಮಹ್ತೋ, ಸಿಕಂದರ್ ಮುಖಿಯಾ, ಮೋನು ಸಾಹ್ನಿ, ಜಗದೀಶ್ ಸಾಹ್ನಿ, ಜೈ ಬಹದ್ದೂರ್ ಸಾಹ್ನಿ, ಬೈಜ್ನಾಥ್ ರಾಮ್ ಮತ್ತು ಬಲರಾಮ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡಗೆ ಅಪಘಾತ: ಆಸ್ಪತ್ರೆಗೆ ದಾಖಲು