
ನವದೆಹಲಿ, ಮಾರ್ಚ್ 10: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸಲ್ ಜೊತೆಗೆ ಅನಿಲದ ಅಭಾವ ಭಾರತಕ್ಕೆ ತಾಕತೊಡಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್ಪಿಜಿ ಮತ್ತು ನ್ಯಾಚುರಲ್ ಗ್ಯಾಸ್ ಬಳಸುವವರ ಪೈಕಿ ಆದ್ಯತೆ ಮೇರೆಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ.
ಗೃಹ ಬಳಕೆ ಮತ್ತು ವಾಹನಗಳಿಗೆ ಬೇಕಿರುವ ಎಲ್ಪಿಜಿ, ಪಿಎನ್ಜಿ ಮತ್ತು ಸಿಎನ್ಜಿ ಗ್ಯಾಸ್ಗಳ ಪೂರೈಕೆಯನ್ನು ಖಚಿತಪಡಿಸುವುದಕ್ಕೆ ಮೊದಲ ಆದ್ಯತೆ ಇರುತ್ತದೆ. ಉದ್ಯಮಗಳು, ರಸಗೊಬ್ಬರ ಕಾರ್ಖಾನೆಗಳಿಗೆ ಬೇಕಾದ ನೈಸರ್ಗಿಕ ಅನಿಲದ ಸರಬರಾಜಿಗೆ ನಂತರದ ಆದ್ಯತೆ ಇರುತ್ತದೆ.
ಇದನ್ನೂ ಓದಿ: ಎಲ್ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ
ಭಾರತಕ್ಕೆ ಬೇಕಾದ ಶೇ. 30ರಷ್ಟು ನೈಸರ್ಗಿಕ ಅನಿಲವು ಹಾರ್ಮುಜ್ ಮಾರ್ಗದಿಂದ ಪೂರೈಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲದ ಬಳಕೆಗೆ ಆದ್ಯತೆಗಳನ್ನು ನಿಗದಿ ಮಾಡಲಾಗಿದೆ. ಹಾರ್ಮುಜ್ನಿಂದ ಪೂರೈಕೆ ಸ್ಥಗಿತಗೊಂಡಿದ್ದರಿಂದ ಇತರ ಮಾರ್ಗಗಳ ಮೂಲಕ ಭಾರತವು ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿದೆ.
ಇದನ್ನೂ ಓದಿ: ಎಲ್ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ
ದೇಶೀಯವಾಗಿ ಎಲ್ಪಿಜಿ ಉತ್ಪಾದನೆ ಹೆಚ್ಚಿಸಲು ಸರ್ಕಾರವು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ನಿರ್ದೇಶನ ನೀಡಿದೆ. ಪ್ರೊಪೇನ್, ಬುಟೇನ್ನಂತಹ ಹೈಡ್ರೋಕಾರ್ಬನ್ ಸ್ಟ್ರೀಮ್ಗಳನ್ನು ಕೈಗಾರಿಕೆಗಳಿಗೆ ನೀಡುವ ಬದಲು ಎಲ್ಪಿಜಿ ಸಂಗ್ರಹಕ್ಕೆ ತಲುಪಿಸುವಂತೆಯೂ ನಿರ್ದೇಶನ ಕೊಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ