ತಾಲಿಬಾನಿಗಳಿಂದ ತಪ್ಪಿಸಿಕೊಂಡು ಬಂದು ‘ಭಾರತ್​ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ಭಾರತೀಯರು

ಇದೀಗ ದೆಹಲಿ ತಲುಪಿದ ವಿಮಾನದಲ್ಲಿ 87 ಜನ ಭಾರತೀಯರಿದ್ದು, ಇಬ್ಬರು ನೇಪಾಳಿಗಳಿದ್ದರು. ಭಾರತದ ಕೇಂದ್ರ ಸರ್ಕಾರ ಕಳಿಸಿದ್ದ ವಿಶೇಷ ವಿಮಾನದಲ್ಲಿ ಇವರನ್ನೆಲ್ಲ ಕರೆತರಲಾಗಿದೆ.

ತಾಲಿಬಾನಿಗಳಿಂದ ತಪ್ಪಿಸಿಕೊಂಡು ಬಂದು ‘ಭಾರತ್​ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ಭಾರತೀಯರು
ಕಾಬೂಲ್​ನಿಂದ ದೆಹಲಿಗೆ ಬಂದಿಳಿದ ಭಾರತೀಯರು
Edited By:

Updated on: Aug 22, 2021 | 9:37 AM

ದೆಹಲಿ: ಉಗ್ರರ ಕೈವಶವಾದ ಅಫ್ಘಾನಿಸ್ತಾನ (Afghanistan)ದಿಂದ ಜನರನ್ನು ಸ್ಥಳಾಂತರಗೊಳಿಸುವ ಕೆಲಸ ನಡೆಯುತ್ತಿದೆ. ಹಾಗೇ ಇಂದು ಮುಂಜಾನೆ ಸುಮಾರು 90 ಜನರನ್ನು ಹೊತ್ತ ಭಾರತೀಯ ವಾಯು ಸೇನೆ ವಿಮಾನ ದೆಹಲಿಯನ್ನು ತಲುಪಿದೆ. ಕಾಬೂಲ್(Kabul Airport)​​ನಿಂದ ವಿಮಾನದಲ್ಲಿ ದೆಹಲಿಗೆ ಬಂದಿಳಿದ ಜನರ ಸಂತೋಷ ಮುಗಿಲು ಮುಟ್ಟಿತ್ತು. ಇದರಲ್ಲಿ 87 ಜನ ಭಾರತೀಯರಿದ್ದು, ಇಬ್ಬರು ನೇಪಾಳಿಗಳಿದ್ದರು. ಭಾರತದ ಕೇಂದ್ರ ಸರ್ಕಾರ ಕಳಿಸಿದ್ದ ವಿಶೇಷ ವಿಮಾನದಲ್ಲಿ ಇವರನ್ನೆಲ್ಲ ಕರೆತರಲಾಗಿದೆ.

ಭಾರತದ ನೆಲಕ್ಕೆ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರ ಮುಖದಲ್ಲಿ ಇನ್ನಿಲ್ಲದ ಮಂದಹಾಸ ಮೂಡಿತ್ತು. ತುಂಬ ಲವಲವಿಕೆಯಿಂದ, ಹುರುಪಿನಿಂದ ಭಾರತ್​ ಮಾತಾ ಕೀ ಜೈ ಎಂದು ಅವರೆಲ್ಲ ಕೂಗಿದ್ದಾರೆ. ಕೇಂದ್ರ ಸರ್ಕಾರವೇ ವಿಮಾನವನ್ನು ಕಳಿಸಿದೆ. ಸುಮಾರು 87 ಭಾರತೀಯರನ್ನು ಹೊತ್ತ ವಿಮಾನ ಕಾಬೂಲ್​ ಬಿಟ್ಟು ತಜಿಕಿಸ್ತಾನ್​ಕೆ ಹೋಗಿದೆ. ಅಲ್ಲಿಂದ ದೆಹಲಿಗೆ ಬರಲಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಹೇಳಿದ್ದರು.

ತಜಿಕಿಸ್ತಾನದಲ್ಲಿರುವ ನಮ್ಮ ರಾಯಭಾರಿ ಕಚೇರಿಯ ಬೆಂಬಲದಿಂದ ಸ್ಥಳಾಂತರ ಕೆಲಸ ಸುಗಮವಾಗಿ ನಡೆಯುತ್ತಿದೆ. ಸದ್ಯ ಕಾಬೂಲ್​​ನಿಂದ ದಿನಕ್ಕೆ ಎರಡು ವಿಮಾನಗಳ ಸಂಚಾರ ನಡೆಸಲು ಭಾರತಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್​ ಕರೆತರಲಾಗುತ್ತಿದೆ ಎಂದೂ ಬಾಗ್ಚಿ ತಿಳಿಸಿದ್ದಾರೆ.

ಆಗಸ್ಟ್​ 15ರಂದು ಅಫ್ಘಾನ್​ ರಾಜಧಾನಿ ಕಾಬೂಲ್​​ನ್ನು ತಾಲಿಬಾನ್​ ಉಗ್ರರು ವಶಪಡಿಸಿಕೊಂಡಿದ್ದಾರೆ. ಅದಾದ ನಂತರ ಅಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅಮೆರಿಕ ಮತ್ತು ನ್ಯಾಟೋ (ಉತ್ತರ ಅಂಟ್ಲಾಂಟಿಕ್​ ಒಪ್ಪಂದ ಸಂಸ್ಥೆಗಳು) ಪಡೆಗಳು ನಿಯಂತ್ರಿಸುತ್ತಿವೆ. ​ದಿನಕ್ಕೆ ಎರಡು ವಿಮಾನಗಳ ಮೂಲಕ ಸ್ಥಳಾಂತರ ಕಾರ್ಯ ನಡೆಸಲು ಭಾರತಕ್ಕೆ ಇದೇ ಪಡೆಗಳು ಅನುಮತಿ ನೀಡಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಸಿಕೆ ಪಡೆದ 78 ಜನರಿಗೆ ಕೊರೊನಾ ದೃಢ, ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ

ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಬಜ್ಜಿ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ

Published On - 9:26 am, Sun, 22 August 21